ಶ್ರೀಮಂಗಲ, ಮೇ ೭: ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದಲ್ಲಿ ಫಸಲು ಬರುವ ಸಾವಿರಾರು ಕಾಫಿ ಗಿಡಗಳನ್ನು ಮತ್ತು ಸುಮಾರು ೨೫೦ಕ್ಕೂ ಅಧಿಕ ಅಸಲು ಬರುವ ಕಾಳುಮೆಣಸು ಬಳ್ಳಿಗಳನ್ನು ದುಷ್ಕರ್ಮಿಗಳು ಸಂಪೂರ್ಣವಾಗಿ ಕಡಿದು ಹಾಕಿರುವ ಅಮಾನುಷ ಘಟನೆ ಬಿರುನಾಣಿ ಸಮೀಪ ಕಳಕೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕುಪ್ಪಣಮಾಡ ಗೌತಮ್ ಅವರಿಗೆ ಸೇರಿದ ಸುಮಾರು ಮೂರುವರೆ ಎಕ್ರೆ ಜಾಗದಲ್ಲಿ ಹೊಸದಾಗಿ ಮಾಡಿದ್ದ ಏಳೆಂಟು ವರ್ಷದ ಕಾಫಿ ಗಿಡಗಳು ಹಾಗೂ ಕಾಳುಮೆಣಸು ಬಳ್ಳಿಗಳನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದಿದ್ದು ಇದರ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಮಡಿಕೇರಿಯಿಂದ ಶ್ವಾನ ದಳವನ್ನು ಸ್ಥಳಕ್ಕೆ ಕರೆತರಲಾಗಿ, ಪೊಲೀಸರು ಎಲ್ಲಾ ನಿಟ್ಟಿನಲ್ಲಿ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ತೋಟದಲ್ಲಿ ಅಳವಡಿಸಿದ್ದ ಎರಡು ಸಿಸಿ ಕ್ಯಾಮರಾಗಳನ್ನು ಸಹ ದುಷ್ಕರ್ಮಿಗಳು ಕಿತೊಯ್ದಿದ್ದು, ಬೆಳೆಗಾರ ಗೌತಮ್ ಅವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮೈಸೂರಿನಲ್ಲಿ ಮದುವೆಗೆ ಹೋದ ಸಮಯವನ್ನು ಅರಿತು ದುಷ್ಕರ್ಮಿಗಳು ಕಾಫಿ ಗಿಡಗಳನ್ನು ಕಡಿದಿರುವುದು ಕಂಡುಬAದಿದೆ. ಸ್ಥಳಕ್ಕೆ ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ರವೀಂದ್ರ ಹಾಗೂ ಸಿಬ್ಬಂದಿಗಳು ಆಗಮಿಸಿ, ದುಷ್ಕರ್ಮಿಗಳ ಸುಳಿವು ಪತ್ತೆಹಚ್ಚಲು ಪ್ರತಿ ಹಂತದಲ್ಲಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿ ಇಂತಹ ಅಮಾನುಷ ಘಟನೆಯನ್ನು ಖಂಡಿಸಿದ್ದಾರೆ. ಈ ಅಮಾನುಷ ಘಟನೆಯಿಂದ ಬೆಳೆಗಾರ ಗೌತಮ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಬಹಳಷ್ಟು ಕಾಫಿ ಗಿಡಗಳನ್ನು ಮತ್ತು ಕಾಳುಮೆಣಸು ಬಳ್ಳಿಗಳನ್ನು ನೆಲಸಮವಾಗಿ ಕತ್ತರಿಸಲಾಗಿದ್ದು, ಮತ್ತೆ ಅದು ಚಿಗುರುವ ಸಾಧ್ಯತೆ ಇಲ್ಲದೆ ಇರುವುದರಿಂದ ಹೊಸದಾಗಿ ತೋಟ ಮಾಡಬೇಕಾದ ಅನಿವಾರ್ಯತೆ ಇದೆ. ಈ ದುಷ್ಕೃತ್ಯವನ್ನು ಒಂದಿಬ್ಬರು ಮಾಡಲು ಸಾಧ್ಯವಿಲ್ಲ. ಕನಿಷ್ಟ ಎಂಟರಿAದ ಹತ್ತು ಜನರು ಮಾಡಿರುವ ಸಾಧ್ಯತೆ ಇದೆ. ಸಾವಿರಾರು ಕಾಫಿ ಗಿಡಗಳನ್ನು ಕಡಿಯುವುದು ಸಾಮಾನ್ಯ ವ್ಯಕ್ತಿಗಳಿಗೆ ಸಾಧ್ಯವಾಗುವುದಿಲ್ಲ. ಇಂತಹ ಕೃತ್ಯಗಳು ಮುಂದೆ ಎಲ್ಲಿಯೂ ನಡೆಯಬಾರದು. ಕೃತ್ಯದಲ್ಲಿ ಪಾಲ್ಗೊಂಡವರು ಹಾಗೂ ಕುಮ್ಮಕ್ಕು ನೀಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪೊಲೀಸ್ ಇಲಾಖೆ ಇಂತಹ ದುಷ್ಕರ್ಮಿಯನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹುದಿಕೇರಿ ಕಂದಾಯ ಪರಿವೀಕ್ಷಕ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊನ್ನಂಪೇಟೆ ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಕರ್ತಮಾಡ ನಂದಾ, ಕುಪ್ಪಣಮಾಡ ಪ್ರೀತಮ್,ಕಾಳಿಮಾಡ ರಶಿಕ, ಕಳಕಂಡ ಜೀತು ಕುಶಾಲಪ್ಪ, ಕುಪ್ಪಣಮಾಡ ಜೀವನ್, ಕಾಳಿಮಾಡ ಸಂಪಾ, ಅಣ್ಣಳಮಾಡ ಗಿರೀಶ್ ಸೇರಿದಂತೆ ನೂರಾರು ಗ್ರಾಮಸ್ಥರು ಆಗಮಿಸಿ ದುಷ್ಕೃತ್ಯವನ್ನು ಖಂಡಿಸಿದರು.