ಮಡಿಕೇರಿ, ಮಾ. ೬: ಜಗದ್ಗುರು ಶ್ರೀ ರೇಣುಕಾಚಾರ್ಯ ಅವರು ಮಹಾನ್ ಶರಣರಾಗಿದ್ದು, ಇವರ ತತ್ವ, ಸಿದ್ಧಾಂತ, ಬದುಕು ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಇತಿಹಾಸದಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿದೆ ಎಂದು ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರೀ ರೇಣುಕಾಚಾರ್ಯ ಅವರ ಬದುಕು ಮತ್ತು ತತ್ವಗಳನ್ನು ವಿವರಿಸುವ ಹಲವು ಪುರಾಣಗಳು ಮತ್ತು ಗ್ರಂಥಗಳು ಕನ್ನಡದಲ್ಲಿವೆ. ಜಗದ್ಗುರು ಶ್ರೀ ರೇಣುಕಾಚಾರ್ಯ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ವೀರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರತಿಮಾ ಹರೀಶ್ ರೈ ಅವರು ಮಾತನಾಡಿ, ಒಳಿತು ಮಾಡಿದವರಿಗೆ ಒಳಿತು ಮಾಡುವವ ಮಾನವ, ಒಳಿತು ಮಾಡದವರಿಗೆ ಒಳಿತು ಮಾಡುವವ ಮಹಾ ಮಾನವ, ಕೆಡುಕು’ ಮಾಡುವವರಿಗೆ ಒಳಿತು ಮಾಡುವವ ದೇವ ಮಾನವ. ಇಂತಹ ದೇವ-ಮಾನವನಾಗುವ ದಾರಿ ತೋರಿದವರು ಶ್ರೀ ರೇಣುಕಾಚಾರ್ಯರು’ ಎಂದು ಹೇಳಿದರು. ಈಗ ಎಲ್ಲವೂ ಇದೆ. ಆದರೆ, ಬದುಕಿನ ಮೌಲ್ಯಗಳು ಕುಸಿಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಂತಹ ಹೊತ್ತಿನಲ್ಲಿ ರೇಣುಕಾಚಾರ್ಯ ಅವರು ಸಾರಿದ ಧರ್ಮ, ಭಕ್ತಿ, ಶಾಂತಿಯ ಸಂದೇಶದ ಪಾಲನೆ ಅನಿವಾರ್ಯ ಎಂದು ಪ್ರತಿಪಾದಿಸಿದರು.
ಮನುಷ್ಯ ಪರಿಶುದ್ಧನಾಗಿ ಬದುಕಬೇಕು ಎಂದು ಹೇಳಿದ ರೇಣುಕಾಚಾರ್ಯ ಅವರು, ಆತ್ಮಸಾಕ್ಷಾತ್ಕಾರಕ್ಕೆ ಮಹತ್ವ ನೀಡಿದ್ದರು. ದೇವರು ಸರ್ವಾಂತರಯಾಮಿ ಎಂದು ಹೇಳಿದರು. ಮಾನವರಾಗಿ ಹುಟ್ಟಿದ್ದೇವೆ. ದೇವಮಾನವರಾಗಿ ನಾವು ಅಂತ್ಯ ಕಾಣಬೇಕು ಎಂದು ಹೇಳಿದ್ದರು’ ಎಂದು ರೇಣುಕಾಚಾರ್ಯ ಅವರ ಸಂದೇಶಗಳನ್ನು ಕುರಿತು ಅವರು ವಿವರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಇತರರು ಇದ್ದರು.