ಸೋಮವಾರಪೇಟೆ, ನ. ೨: ಸಮೀಪದ ಬೇಳೂರು ಬಾಣೆ ಪ್ರವಾಸಿ ತಾಣದಲ್ಲಿ ಅಳವಡಿಸಿರುವ ಮೊಬೈಲ್ ಕೆಫೆಯಲ್ಲಿ ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಅಗ್ನಿ ಅವಘಡ ಉಂಟಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ತಪ್ಪಿದೆ.
ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಬಾಗಿಲನ್ನು ಮುಚ್ಚಿ ಹೊರಬಂದ ಕೆಲವೇ ನಿಮಿಷಗಳಲ್ಲಿ ಒಳಭಾಗದಲ್ಲಿ ದಟ್ಟ ಹೊಗೆ ಉಂಟಾಗಿ ‘ಎಕ್ಸಿಟ್ ಫ್ಯಾನ್’ ಮೂಲಕ ಹೊರ ಬರುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿದ್ಯುತ್ ಅವಘಡದಿಂದ ಅನಾಹುತ ಸಂಭವಿಸಿರಬಹುದು ಎಂದು ಸಂಶಯಿಸಲಾಗಿದ್ದು, ಒಳಭಾಗದಲ್ಲಿ ಗ್ಯಾಸ್ ಸಿಲಿಂಡರ್ ಇದ್ದುದ್ದರಿಂದ ಕೆಲಕಾಲ ಆತಂಕ ಮನೆ ಮಾಡಿತ್ತು.
ಸ್ಥಳೀಯರು ಕೆಫೆಯ ಕಿಟಕಿ ಮತ್ತು ಎಕ್ಸಿಟ್ ಫ್ಯಾನ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಿದರು. ಇದರೊಂದಿಗೆ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ ಮೇರೆ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಕಾರ್ಯಾ ಚರಣೆ ನಡೆಸಿ ಅಗ್ನಿ ನಂದಿಸಲು ಮುಂದಾದರು. ಘಟನೆಯಿಂದ ಕೆಫೆಯ ಒಳಭಾಗದಲ್ಲಿರುವ ವಿದ್ಯುತ್ ಉಪಕರಣಗಳು, ಅಡುಗೆ ಕೋಣೆಯ ಸಾಮಗ್ರಿಗಳು, ಬಾಯ್ಲರ್ಗಳು ಸಂಪೂರ್ಣ ಸುಟ್ಟುಹೋಗಿದ್ದು, ಮಾಲೀಕರಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ. ಒಂದು ವೇಳೆ ಒಳಭಾಗದಲ್ಲಿ ಯಾರಾದರೂ ಇದ್ದಿದ್ದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.