ಮಡಿಕೇರಿ, ಸೆ. ೨೧: ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರತಿ ತಿಂಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಪ್ರಾಮುಖ್ಯತೆ ನೀಡುತ್ತಿರುವ “ತಿಂಗಕೊರ್ ಮೊಟ್ಟ್ ತಲಕಾವೇರಿಕ್” ಎಂಬ ಕಾವೇರಿ ಭಕ್ತಾದಿಗಳ ಕೂಟ ತೀರ್ಥೋದ್ಭವಕ್ಕೆ ಮುನ್ನ ತಲಕಾವೇರಿ ಕ್ಷೇತ್ರದಲ್ಲಿ ಸ್ವಚ್ಛತಾ ಸೇವೆಯನ್ನು ಕೈಗೊಂಡಿತು. ಸುಮಾರು ೫೦೦ ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.

ಇದು ೫ನೇ ವರ್ಷದ ಸೇವೆಯಾಗಿದ್ದು, ಕಳೆದ ೫ ವರ್ಷಗಳಿಂದ ನೂರಾರು ಭಕ್ತಾದಿಗಳು ಈ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಭಾನುವಾರ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಭಕ್ತಾದಿಗಳು ಆಗಮಿಸಿದ್ದರು. ೯ ಬಸ್‌ಗಳಲ್ಲಿ ಕ್ಷೇತ್ರದ ಸೇವೆಗೆ ಜನರು ಆಗಮಿಸಿದ್ದರು.