ಮಡಿಕೇರಿ, ಜು. ೪: ಸೇವಾ ನ್ಯೂನತೆ ಉಂಟು ಮಾಡಿದ ಹಿನ್ನೆಲೆ ವೀರಾಜಪೇಟೆ ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘವು ದೂರುದಾರರಿಗೆ ಅಸಲು, ಬಡ್ಡಿ ಹಣದೊಂದಿಗೆ ಪರಿಹಾರ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎಂ.ಡಿ. ಕಾರ್ಯಪ್ಪ ಅವರು ೨೦೨೩ನೇ ಸಾಲಿನಲ್ಲಿ ವೀರಾಜಪೇಟೆಯಲ್ಲಿರುವ ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘದಲ್ಲಿ ರೂ. ೧೦ ಲಕ್ಷ ರೂಪಾಯಿಗಳಿಗೆ ಒಂದು ವರ್ಷಕ್ಕೆ ಶೇ.೯ ಬಡ್ಡಿಯನ್ನು ಒಳಗೊಂಡಿರುವ ನಿಶ್ಚಿತ ಠೇವಣಿ (ಎಫ್.ಡಿ) ಖಾತೆ ತೆರೆದು ಹಣ ಹೂಡಿದ್ದಾರೆ. ಈ ಖಾತೆಯು ೨೦೨೪ರಲ್ಲಿ ಮುಕ್ತಾಯಗೊಂಡಿದ್ದು, ತಮ್ಮ ವೈಯಕ್ತಿಕ ಕಾರಣಕ್ಕಾಗಿ ಈ ಮೊತ್ತವು ತುರ್ತಾಗಿ ಅವಶ್ಯಕವಾಗಿದ್ದುದ್ದರಿಂದ ಎಫ್.ಡಿ. ಖಾತೆಯಲ್ಲಿರುವ ಅಸಲು ಮೊತ್ತವನ್ನು ಬಡ್ಡಿ ಸಹಿತ ತನಗೆ ಪಾವತಿಸಬೇಕೆಂದು ಸಂಘದ ಅಧಿಕಾರಿಗಳನ್ನು ಕೋರಿಕೊಂಡಾಗ ಸುಳ್ಳು ಭರವಸೆ ಕೊಡುತ್ತಾ ವಿಳಂಬ ಮಾಡಿರುತ್ತಾರೆ. ಈ ಹಿನ್ನೆಲೆ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಕಾರ್ಯಪ್ಪ ಅವರು ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಪ್ರಬಾರ ಅಧ್ಯಕ್ಷರಾದ ಡಾ|| ಸಿ.ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರುಗಳು ಸಹಕಾರ ಕಾಯಿದೆಯನ್ನು ಉಲ್ಲಂಘಿಸಿರುವುದು ಪರಿಗಣಿಸಿ ದೂರುದಾರರ ಎಫ್.ಡಿ.ಖಾತೆಯಲ್ಲಿರುವ ಅಸಲು ಮತ್ತು ಬಡ್ಡಿಯನ್ನು ಸೇರಿಸಿ ಒಟ್ಟು ರೂ.೧೦,೯೦,೦೦೦ ರೂಪಾಯಿಗಳನ್ನು ಹಾಗೂ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.೧೦,೦೦೦ ಗಳು ಹಾಗೂ ವ್ಯಾಜ್ಯದ ಖರ್ಚುವೆಚ್ಚಗಳಿಗೆ ರೂ.೧೦,೦೦೦ ಪಾವತಿಸಬೇಕೆಂದು ಆದೇಶ ನೀಡಿದ್ದಾರೆ. ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.