ಕೂಡಿಗೆ, ಜೂ. ೨೪: ಸುವರ್ಣಗೆಡ್ಡೆ ಮಾರಾಟ ಮಾಡುವುದಾಗಿ ತರಕಾರಿ ವ್ಯಾಪಾರಿಯೊಬ್ಬರನ್ನು ಕರೆದು ಬಳಿಕ ತಾವು ಪೊಲೀಸರು ಎಂದು ಬೆದರಿಸಿ ರೂ. ೧.೪೯ ಲಕ್ಷ ಕುಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಶಾಲನಗರ ಹೋಬಳಿ ಚಿಕ್ಕಅಳುವಾರ ಗ್ರಾಮದ ಸುನಿಲ್ ವಂಚನೆಗೆ ಒಳಗಾದವರು. ಇವರು ವ್ಯವಸಾಯದ ಜತೆಗೆ ಅದೇ ಗ್ರಾಮದ ಕೃತ್ವಿಕ್ ಎಂಬುವವರ ಜತೆ ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು. ಇವರಿಗೆ ಜೂ.೨೧ರಂದು ಸಂಜೆ ಸುಮಾರು ೫ರ ಸಮಯದಲ್ಲಿ ವ್ಯಕ್ತಿಯೊಬ್ಬರು ಕರೆಮಾಡಿ ಸುವರ್ಣಗೆಡ್ಡೆ ಮಾರಾಟ ಮಾಡುತ್ತಿದ್ದು ಹೊಳೆನರಸೀಪುರಕ್ಕೆ ಬಂದು ಖರೀದಿಸಲು ತಿಳಿಸಿದ್ದಾರೆ. ಅಲ್ಲಿಗೆ ಹೋದ ಬಳಿಕ ಮೂವರು ಪೊಲೀಸರೆಂದು ಹೇಳಿ ಹಣ ಸುಲಿಗೆ ಮಾಡಿದ್ದಾರೆ ಎಂದು ಸುನಿಲ್ ದೂರಿನಲ್ಲಿ ತಿಳಿಸಿದ್ದಾರೆ.
ಜೂ.೨೨ರಂದು ಬೆಳಿಗ್ಗೆ ಕಾರಿನಲ್ಲಿ ಹೊಳೆನರಸೀಪುರಕ್ಕೆ ಬಂದು ಫೋನ್ ಮಾಡಿದಾಗ ನಮ್ಮ ಕೆಲಸದಾತ ನಾಗ ಎಂಬಾತ ಫ್ಲೆöÊಓವರ್ ಬಳಿ ಇರುತ್ತಾನೆ ಎಂದು ಆರೋಪಿಗಳು ತಿಳಿಸಿದ್ದರು. ಅಲ್ಲಿ ಆತ ನಮ್ಮ ಕಾರನ್ನು ಏರಿ ತೋಟಕ್ಕೆ ಕರೆದುಕೊಂಡು ಹೋಗುವುದಾಗಿ ಚನ್ನರಾಯಪಟ್ಟಣದ ರಸ್ತೆಯಲ್ಲಿ ಸುಮಾರು ೧ ಕಿ.ಮೀ. ಕರೆದುಕೊಂಡು ಬಂದು ರಸ್ತೆ ಪಕ್ಕದ ಖಾಲಿ ಜಮೀನಿನ ಬಳಿ ಕಾರನ್ನು ನಿಲ್ಲಿಸಲು ತಿಳಿಸಿದ. ಅಷ್ಟರಲ್ಲಿ ಹಿಂದೆಯೇ ಇನ್ನೊಂದು ಕಾರು ಹಿಂಬಾಲಿಸಿ ಬಂದು ಅಲ್ಲಿದ್ದ ಒಬ್ಬ ವ್ಯಕ್ತಿ ಮೊಬೈಲ್ ಮತ್ತು ಕಾರಿನ ಕೀ ಕಿತ್ತುಕೊಂಡು ನಾವು ಪೊಲೀಸರು ಎಂದು ಹೇಳಿದ್ದು, ಒಟ್ಟು ಮೂವರು ಸೇರಿಕೊಂಡು ನನ್ನನ್ನು, ಕೃತ್ವಿಕ್ ಹಾಗೂ ನಾಗ ಎಂಬುವವನನ್ನು ಬಲವಂತವಾಗಿ ಅವರ ಕಾರಿನಲ್ಲಿ ಹತ್ತಿಸಿಕೊಂಡರು. ರಸ್ತೆ ಮಧ್ಯೆ ನಾಗ ಎಂಬುವವನ ಹತ್ತಿರ ಇದ್ದ ಬ್ಯಾಗ್ ತೆಗೆದು ಅದರಲ್ಲಿದ್ದ ವೈಟ್ ಪೌಡರ್ ತೋರಿಸಿ, ಇದು ಡ್ರಗ್ಸ್ ಆಗಿದ್ದು, ನೀವು ಒಂದೇ ಗುಂಪಿನವರು. ನಿಮ್ಮನ್ನು ಜೈಲಿಗೆ ಹಾಕುವುದಾಗಿ ಹೆದರಿಸಿದರು. ನಿಮ್ಮನ್ನು ಬಿಡಬೇಕು ಎಂದರೆ ೪ ಲಕ್ಷ ಈಗಲೇ ನೀಡಬೇಕು ಎಂದು ಹೆದರಿಸಿದರು. ಕೃತ್ವಿಕ್ನನ್ನು ಹಿರಿಸಾವೆಯ ಒಂದು ಚಿಲ್ಲರೆ ಅಂಗಡಿ ಹತ್ತಿರ ಕರೆದುಕೊಂಡು ಹೋಗಿ ಅದರ ಮಾಲೀಕ ನಾಗೇಶ್ ಎಂಬುವವರಿಗೆ ಆಸ್ಪತ್ರೆಗೆ ತುರ್ತಾಗಿ ಹಣ ನೀಡಬೇಕು ಎಂದು ಆತನ ಮೊಬೈಲ್ನಿಂದ ೫೦ ಸಾವಿರ ಅನ್ನು ಫೋನ್ ಪೇ ಮಾಡಿಸಿಕೊಂಡರು. ನಾನು ಸ್ನೇಹಿತರಾದ ಗಣೇಶ್ ಮತ್ತು ಮೋಹನ್ ಅವರಿಂದ ೯೯ ಸಾವಿರ ರೂ. ಫೋನ್ ಪೇ ಮಾಡಿಸಿಕೊಂಡಿದ್ದು, ಒಟ್ಟು ೧.೪೯ ಲಕ್ಷ ರೂ. ಹಣವನ್ನು ನಮ್ಮಿಂದ ಕಸಿದುಕೊಂಡು ಹೊಳೆನರಸೀಪುರದಲ್ಲಿ ಬಿಟ್ಟು ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಹೆದರಿಸಿ ಹೊರಟುಹೋದರು ಎಂದು ಸುನಿಲ್ ದೂರು ನೀಡಿದ್ದಾರೆ. ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಲಾಗಿದೆ.