ನಾಪೋಕ್ಲು, ಜೂ. ೨೪: ಸಮೀಪದ ಪೇರೂರು ಗ್ರಾಮದಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ ಕಾಡಾನೆಗಳ ಹಿಂಡು ಸೋಮವಾರ ರಾತ್ರಿ ದಾಂಧಲೆ ನಡೆಸಿದ್ದು ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು ಗ್ರಾಮದ ನಿವಾಸಿ ಮಣವಟ್ಟಿರ ದಯಚಿಣ್ಣಪ್ಪ ಅವರ ತೋಟಗಳಲ್ಲಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ. ಅಲ್ಲದೆ ಕೃಷಿ ಪರಿಕರ ಮತ್ತು ಫಸಲುಗಳಿಗೆ ಹಾನಿ ಉಂಟು ಮಾಡಿದೆ.
ಪಂದೇಟ್ ಕಾಲೋನಿ ಸೇರಿದಂತೆ ಗ್ರಾಮದ ಹಲವೆಡೆ ನಾಲ್ಕಾರು ಕಾಡಾನೆಗಳು ಅಡ್ಡಾಡುತ್ತಿದ್ದು ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಸೇರಿದಂತೆ ಇತರರ ತೋಟದಲ್ಲೂ ಕೃಷಿ ಗಿಡಗಳನ್ನು ಕಾಡಾನೆಗಳು ಹಾಳುಗೆಡವಿದೆ. ಗ್ರಾಮದಲ್ಲಿ ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ಇಲಾಖೆ ಮುಂದಾಗಬೇಕು ಹಾಗೂ ನಷ್ಟ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.