ತಂದೆ ಎಂದರೆ ಆತ ಸರ್ವಸ್ವ. ಅವನೇ ಜನ್ಮದಾತ, ಕುಟುಂಬದ ಯಜಮಾನ, ಪ್ರೀತಿಯ ಅಧಿಪತಿ, ಕುಟುಂಬ ನಿರ್ವಹಣೆಯ ವಾರಸುದಾರ. ಜೀವನಯಾನದ ಮಾರ್ಗದರ್ಶಕ. ತಂದೆ ಕುಟುಂಬದ ಸದಸ್ಯರ ಜವಾಬ್ದಾರಿ ಹೊತ್ತ ಜವಾಬ್ದಾರ.

ಅಪ್ಪಂದಿರ ದಿನ ಅದೊಂದು ಪವಿತ್ರ ದಿನ. ಮಕ್ಕಳ ಪಾಲಿಗೆ ಪ್ರೀತಿಯ ಅಪ್ಪನನ್ನು ಸ್ಮರಿಸಿ, ಕೃತಜ್ಞತೆ ಅರ್ಪಿಸುವ ದಿನ. ಮಕ್ಕಳ ಪಾಲಿಗೆ ಅಪ್ಪ ಕಠೋರ ಅನ್ನಿಸಿದರೂ, ಮಕ್ಕಳನ್ನು ಗಟ್ಟಿ ಮನಸ್ಸಿನಿಂದ, ತಿದ್ದಿ, ತೀಡಿ ಈ ಜಗತ್ತಿಗೆ ಅಣಿಗೊಳಿಸುವವನು ಅಪ್ಪನೇ ಹೌದು. ೧೯೦೯ರಲ್ಲಿ ವಾಷಿಂಗ್ಟನ್ ಸ್ಪೋಕನ್ ಎಂಬಲ್ಲಿ ಸೊನಾರಾ ಸ್ಮಾರ್ಟ್ ಡೊಡ್ಡ್ ಎಂಬಾಕೆಗೆ ತಾಯಿ ಇರಲಿಲ್ಲ. ಆಕೆ ತಾಯಂದಿರ ದಿನದಂದು ಕೃತಜ್ಞತೆ ಸಲ್ಲಿಸುವ ಉಪನ್ಯಾಸ ಆಲಿಸುತ್ತಿದ್ದಳು. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಅವಳನ್ನು ತಂದೆ ಹೆನ್ರಿ ಜಾಕ್ಸ್ನ್ ಸ್ಮಾರ್ಟ್ ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಿದ್ದನು. ತನ್ನ ತಂದೆಯ ತ್ಯಾಗದ ಬದುಕನ್ನು ಸ್ಮರಿಸುತ್ತಿದ್ದಂತೆ ಅವಳ ಹೃದಯ ತುಂಬಿ ಬಂದಿತು. ಆಕೆ ‘ತಂದೆ ದಿನ’ವನ್ನು ಆಚರಿಸಲು ನಿರ್ಧರಿಸಿ ಸಿದ್ಧಳಾದಳು. ಅವಳ ತಂದೆ ಹೆನ್ರಿ ಜಾಕ್ಸ್ನ್ ಸ್ಮಾರ್ಟ್ ಹುಟ್ಟಿದ ದಿನವನ್ನು ತನ್ನ ಅಪ್ಪನ ದಿನವನ್ನಾಗಿ ಆಚರಿಸಿದಳು. ಇದನ್ನು ಸ್ಪೋಕೇನ್‌ನಲ್ಲಿ ಆಚರಿಸಿದಳು. ಮುಂದೆ ೧೯೨೪ರಲ್ಲಿ ಅಧ್ಯಕ್ಷ ಕಾಲ್ವಿನ್ ಕೂಲಿಜ್ ಪ್ರತಿವರ್ಷ ಜೂನ್ ಮೂರನೇ ಭಾನುವಾರದಂದು ಅಪ್ಪಂದಿರ ದಿನವನ್ನಾಗಿ ಆಚರಿಸುವ ಬಗ್ಗೆ ಘೋಷಿಸಿದರು.

ವಿಶ್ವದಾದ್ಯಂತ ತಮ್ಮ ಪ್ರೀತಿ ಕೃತಜ್ಞತೆಯನ್ನು ಜನರು ತಮ್ಮ ಜನ್ಮದಾತನಿಗೆ ಅಪ್ಪಂದಿರ ಜನ್ಮ ದಿನಾಚರಣೆಯಂದು ಅರ್ಪಿಸುತ್ತಾರೆ. ತಂದೆಯನ್ನು ಕಳೆದುಕೊಂಡವರು ಬಿಳಿ ಗುಲಾಬಿ ಅರ್ಪಿಸುತ್ತಾರೆ. ಎಲ್ಲಾ ತಂದೆಯರು ಸಮರ್ಥ ತಂದೆಯಾಗಿ ಕಾರ್ಯನಿರ್ವಹಿಸುವಂತಾದರೆ ಈ ದಿನಕ್ಕೊಂದು ವಿಶೇಷ ಅರ್ಥ ಬರುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಮಕ್ಕಳನ್ನು ಬೆಳೆಸುವಲ್ಲಿ ಅಪ್ಪನ ಪಾತ್ರ ಬಹಳ ಮುಖ್ಯವಿದೆ. ತಾಯಿ - ಮಗುವಿನ ಬಾಂಧವ್ಯ ಪ್ರಾಥಮಿಕ ಅವಶ್ಯಕತೆಯಾಗಿದೆ. ನಂತರ ತಂದೆಯ ಆರೈಕೆಯ ಜವಾಬ್ದಾರಿಯಿದೆ. ವಿದೇಶಗಳಲ್ಲಿ ಸಮಸ್ಯಾತ್ಮಕ ಮಕ್ಕಳನ್ನು ಅಧ್ಯಯನ ಮಾಡಿದಾಗ ಬಾಲ್ಯದಲ್ಲಿನ ಪ್ರೀತಿ, ಆರೈಕೆ, ರಕ್ಷಣಾತ್ಮಕ ಮನೋಭಾವದ ಕೊರತೆಯೇ ಇವರಲ್ಲಿ ಮುಂದೆ ಮಾನಸಿಕ ತುಮುಲಗಳು ಹುಟ್ಟಿಕೊಳ್ಳಲು, ಅಪರಾಧಿ ಪ್ರವೃತ್ತಿ ಮೂಡಲು ಮೂಲ ಕಾರಣ ವಾಗುವುದು ಎಂಬುದು ಪತ್ತೆಯಾಗಿದೆ.

ಬೆಳೆಯುವ ಮಗುವಿಗೆ ಅಪ್ಪನ ಪ್ರೋತ್ಸಾಹದಾಯಕ ಮಾತು. ಮಾರ್ಗದರ್ಶನ ಬೇಕೇ ಬೇಕು. ಅಮ್ಮನ ಕೈಗೆ ಇನ್ನೊಂದು ಕೂಸು ಬಂದಾಗಲAತೂ ಮೊದಲ ಮಗುವನ್ನು ತಂದೆ ಜವಾಬ್ದಾರಿಯಿಂದ ಮುನ್ನಡೆಸಬೇಕಾಗುವುದು.

ತಾಯಿಯಾದವಳು ಗಂಡನ ಮತ್ತು ಮಗುವಿನ ಶಕ್ತಿ, ಅರ್ಹತೆ ಇಷ್ಟಾನಿಷ್ಟಗಳನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಬಲ್ಲಳು. ಆದರೆ ತನ್ನ ಮಗು ಯಾವ ಕ್ಷೇತ್ರದತ್ತ ಹೆಚ್ಚಿನ ಒಲವನ್ನು ಹೊಂದಿದೆ. ಅದರ ಆಸಕ್ತಿ, ಮನಶಕ್ತಿ ತಿಳಿದುಕೊಳ್ಳಲು ಸಾಫಲ್ಯ ಪಡೆಯುವವನು ತಂದೆ. ಗಂಡು ಅಥವಾ ಹೆಣ್ಣು ಮಗುವಿರಲಿ ತಂದೆಯ ಭರವಸೆಯ ಸಾಮಿಪ್ಯ ಬೇಕೇ ಬೇಕು. ಉತ್ತಮ ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ಮಕ್ಕಳು, ಸ್ನೇಹಿತರು, ಸಹಪಾಠಿಗಳೊಂದಿಗೆ ಸುಲಭವಾಗಿ ಬೆರೆಯಬಲ್ಲರು. ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಲೂ ಬಲ್ಲರು. ತಂದೆಯ ಗೈರು ಹಾಜರಿ ಇದ್ದಾಗ ಮಕ್ಕಳು ಶಾಲಾ ಚಟುವಟಿಕೆಗಳಲ್ಲಿ ಹಿಂದುಳಿಯುವರು. ಕಡಿಮೆ ಐಕ್ಯೂ ಹೊಂದಿರುವವರು ಇತರರೊಂದಿಗೆ ಆತ್ಮೀಯತೆಯಿಂದ ಬೆರೆಯಲಾರರು ಮತ್ತು ಖಿನ್ನರಾಗಲುಬಹುದು. ಉದ್ಯೋಗ ನಿಮಿತ್ತ ಅಥವಾ ಇನ್ನಿತರ ಕಾರಣಗಳಿಂದ ಮಕ್ಕಳಿಂದ ದೂರವಿರಬೇಕಾದ ಸಂದರ್ಭದಲ್ಲಿ ತಾವು ನಮ್ಮಲ್ಲಿದ್ದಷ್ಟೂ ಸಮಯ ತಮ್ಮ ಮಕ್ಕಳ ಜೊತೆ ಒಡನಾಟ, ಆತ್ಮೀಯ ಬೆರೆಯುವುಕೆಗೆ ಪ್ರಾಧಾನ್ಯ ನೀಡುವುದೊಳಿತು.

ತಂದೆ ಅನೇಕ ಸಂದರ್ಭಗಳಲ್ಲಿ ತನ್ನ ನೋವು, ಸಂಕಷ್ಟಗಳನ್ನು ನುಂಗಿ ಸಂಸಾರ ನಿರ್ವಹಿಸುವನು. ಇದನ್ನು ಸಂಸಾರದ ಇತರ ಸದಸ್ಯರೊಡನೆ ಹಂಚಿಕೊಳ್ಳುವುದೂ ಇಲ್ಲ. ಸಂಸಾರಕ್ಕಾಗಿ ಆತ ತ್ಯಾಗ ಮಾಡುತ್ತಾನೆ. ಸದಾಕಾಲ ದುಡಿತದ ಮೊರೆಯು ಹೋಗುತ್ತಾನೆ. ವೃದ್ಧಾಪ್ಯದ ಕಾಲದಲ್ಲಿ ಮಕ್ಕಳು ತಂದೆ - ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಅತೀ ಮುಖ್ಯ.

ತಂದೆಯ ಪ್ರೀತಿಗೆ ನಾವು ಮಕ್ಕಳು ಸಲ್ಲಿಸಬಹುದಾದ ಕೃತಜ್ಞತೆ. ತಂದೆ ಮಕ್ಕಳ ಮುಕ್ತ ಪ್ರೀತಿ ಅದು ಅರ್ಥಪೂರ್ಣ, ಪವಿತ್ರ. ತಂದೆ ಸಂಸಾರದ ದಾರಿದೀಪ. ತಂದೆಯ ಪ್ರೀತಿಗೆ, ತ್ಯಾಗಕ್ಕೆ ಈ ದಿನ ಕೃತಜ್ಞತೆ ಗಳನ್ನು ಅರ್ಪಿಸಿ, ಸದಾಕಾಲ ಪ್ರೀತಿಸಿ.

- ಹರೀಶ್ ಸರಳಾಯ, ಮಡಿಕೇರಿ. ಮೊ. ೯೭೩೧೮೧೦೨೫೦.