ಮಡಿಕೇರಿ, ಜೂ. ೧೪: ದಕ್ಷಿಣ ಕೊಡಗಿನ ಕುಟ್ಟದ ಬಾಡಗ ಮಹಿಳಾ ಸಾಂಸ್ಕೃತಿಕ ಮಂಡಳಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಇತ್ತೀಚೆಗೆ ನಡೆದ ಮಂಡಳಿಯ ೨೫ನೇ ವಾರ್ಷಿಕ ಮಹಾಸಭೆಯಲ್ಲಿ ಇನ್ನು ಮುಂದೆಯೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಯಿತು.
ಮಹಿಳಾ ಸಾಂಸ್ಕೃತಿಕ ಮಂಡಳಿ ಕಚೇರಿಯ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡಳಿಯ ಅಧ್ಯಕ್ಷೆ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ಅವರು ಸಂಘದ ಕುರಿತು ವಿವರಿಸಿದರು.
೨೦೦೧ರಲ್ಲಿ ಮುಕ್ಕಾಟಿರ ರೇಣು ಗಣಪತಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಸಾಂಸ್ಕೃತಿಕ ಮಂಡಳಿ ಸ್ಥಾಪನೆಗೊಂಡಿತು. ಇದೀಗ ಮಂಡಳಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವುದು ಹರ್ಷ ತಂದಿದೆ ಎಂದರು. ಮಂಡಳಿಯಲ್ಲಿ ೧೦೪ ಮಹಿಳಾ ಸದಸ್ಯರಿದ್ದು, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಅಪಘಾತ ಮತ್ತು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವವರಿಗೆ ಮಂಡಳಿ ಧನ ಸಹಾಯ ಮಾಡಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಮತ್ತು ಧನ ಸಹಾಯ ನೀಡಲಾಗಿದೆ. ಚೂರಿಕಾಡು ಪ್ರಾಥಮಿಕ ಶಾಲೆಯನ್ನು ೨ ವರ್ಷಗಳ ಕಾಲ ದತ್ತು ಪಡೆದು ಅಭಿವೃದ್ಧಿಗೆ ಕೈಜೋಡಿಸಲಾಗಿದೆ.
ಚೂರಿಕಾಡು ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ರೂ. ೪೦ ಸಾವಿರ ಧನ ಸಹಾಯ ಮಾಡಲಾಗಿದೆ. ೨೦೦೩ ರಿಂದ ಸತತ ಮೂರು ವರ್ಷಗಳ ಕಾಲ ಅಂಗನವಾಡಿ ಮಕ್ಕಳಿಗೆ ಸಮವಸ್ತç ನೀಡಲಾಗಿದೆ. ಸುಮಾರು ೫ ಎಕರೆ ಪ್ರದೇಶವನ್ನು ಹೊಂದಿರುವ ಕುಟ್ಟ ಆಸ್ಪತ್ರೆಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಗಿದೆ.
ನಾಯಿಗಳ ಸುರಕ್ಷತೆಯ ದೃಷ್ಟಿಯಿಂದ ರೇಬಿಸ್ ಲಸಿಕೆಯನ್ನು ನೀಡುವ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೊಡವ ಸಿನಿಮಾಗಳನ್ನು ಪ್ರೋತ್ಸಾಹಿಸಲಾಗಿದೆ, ಕೊಡವರಿಗೆ ಆರ್ಥಿಕ ನೆರವು ನೀಡಲಾಗಿದೆ, ಕೊಡವರು ಹಾಗೂ ಕೊಡಗಿನ ಅಭಿವೃದ್ಧಿಗಾಗಿ ಹೋರಾಟಗಳನ್ನು ನಡೆಸಲಾಗಿದೆ. ದಂತ ಚಿಕಿತ್ಸಾ ಶಿಬಿರ ಮತ್ತು ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಬಾಡಗ ಮಹಿಳಾ ಸಾಂಸ್ಕೃತಿಕ ಮಂಡಳಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬಾಡಗ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕಾಪ್ಸ್ ಟ್ರಸ್ಟಿಗಳಾದ ಮಾಚಿಮಾಡ ರಾಜಾ ತಿಮ್ಮಯ್ಯ ಅವರು ಮಹಿಳಾ ಸಾಂಸ್ಕೃತಿಕ ಮಂಡಳಿಯ ಸಾಮಾಜಿಕ ಕಳಕಳಿಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಮಂಡಳಿಯ ಕಾರ್ಯದರ್ಶಿ ಕೋಳೆರ ಪುತ್ತುಳಿ ಮುತ್ತಣ್ಣ ಅವರು ಸ್ವಾಗತಿಸಿ, ನಿರೂಪಿಸಿದರು. ಪಾಲೆಕಂಡ ಅನಿತಾ ಅಯ್ಯಣ್ಣ ಅತಿಥಿಗಳ ಪರಿಚಯ ಮಾಡಿದರು, ಬೊಳ್ಳೆರ ಲೀನಾ ಕುಟ್ಟಪ್ಪ ವಂದಿಸಿದರು.