ಕೋವರ್‌ಕೊಲ್ಲಿ ಇಂದ್ರೇಶ್

ಮಡಿಕೇರಿ, ಜೂ. ೩: ನಾಗರಹೊಳೆ ಹುಲಿ ಮೀಸಲು ಪ್ರದೇಶದಲ್ಲಿ ತಾವು ಮೊದಲಿನಿಂದಲೂ ವಾಸವಿದ್ದು ಅಲ್ಲಿ ತಮಗೆ ಅರಣ್ಯ ಹಕ್ಕು ನೀಡಿ ಭೂಮಿ ಹಂಚಿಕೆ ಮಾಡಬೇಕೆಂದು ಕೋರಿ ೩೯ ಆದಿವಾಸಿ ಕುಟುಂಬಗಳು ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ನೀಡಿದ್ದ ಅರ್ಜಿಯನ್ನು ಸಮಿತಿಯು ತಿರಸ್ಕರಿಸಿದೆ.

೫೨ ಕುಟುಂಬಗಳು ಹಕ್ಕು ಸ್ಥಾಪನೆ ಕೋರಿ ಅರ್ಜಿ ಸಲ್ಲಿಸಿದ್ದರೂ ಕಾನೂನು ಪ್ರಕಾರ ಯಾವುದೇ ರೀತಿಯ ಸಾಕ್ಷö್ಯ ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಇವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಸಮಿತಿಯ ಮೂಲಗಳು ತಿಳಿಸಿವೆ. ಮಡಿಕೇರಿ ಉಪವಿಭಾಗಾಧಿ ಕಾರಿಗಳ ನೇತೃತ್ವದ ಅರಣ್ಯ ಹಕ್ಕು ಸಮಿತಿ ಈ ಆದೇಶವನ್ನು ಹೊರಡಿಸಿದೆ.

ಈ ಸಮಿತಿಯ ಮುಂದೆ ತಮ್ಮ ವಾದವನ್ನು ಮಂಡಿಸಿದ ನಾಗರಹೊಳೆ ಅರಣ್ಯಾಧಿಕಾರಿಗಳು ಅರಣ್ಯ ಹಕ್ಕು ಕಾಯ್ದೆ ಅನ್ವಯ ಹಕ್ಕು ಪಡೆಯಬೇಕಾದರೆ ೨೦೦೫ ರ ಡಿಸೆಂಬರ್ ೧೩ ನೇ ತಾರಿಖಿನೊಳಗೆ ಅರಣ್ಯದಲ್ಲಿ ವ್ಯವಸಾಯ ಮಾಡಿರುವ ಅಥವಾ ವಾಸವಿದ್ದ ಕುರುಹುಗಳನ್ನು ನೀಡಬೇಕು. ಆದರೆ ೪೩ ಕುಟುಂಬಗಳು ಹಕ್ಕು ಕೋರಿರುವ ಅತ್ತೂರು ಕೊಲ್ಲಿ ಹಾಡಿಯಲ್ಲಿ ಯಾವುದೇ ವ್ಯವಸಾಯ ಮಾಡಿಲ್ಲದಿರುವುದು ಅಥವಾ ಮನೆ, ಗುಡಿಸಲು ಮತ್ತು ಜನವಸತಿಯೇ ಇಲ್ಲದಿರುವುದನ್ನು ಸಾಕ್ಷ್ಯಾಧಾರಗಳ ಸಹಿತ ಸಮಿತಿಯ ಮುಂದೆ ಇಟ್ಟಿದ್ದಾರೆ. ಹಕ್ಕು ಕೋರಿದ್ದವರಲ್ಲಿ ನಾಲ್ವರು ಅರ್ಜಿದಾರರು ಮೃತರಾಗಿದ್ದಾರೆ.

ತಮ್ಮ ವಾದಕ್ಕೆ ಪೂರಕವಾಗಿ ಅಧಿಕಾರಿಗಳು ನಾಗರಹೊಳೆಯಲ್ಲಿನ ೧೯೯೫ ರಿಂದ ಉಪಗ್ರಹ ಚಿತ್ರಗಳ ಪ್ರತಿಗಳನ್ನು ಸಮಿತಿಗೆ ನೀಡಿದ್ದು ಅಲ್ಲಿ ಪೂರ್ವದಿಂದಲೂ ಯಾವುದೇ ಜನವಸತಿ ಇಲ್ಲದಿರುವುದು ಸಾಬೀತಾಗಿದೆ.

೧೯೯೮-೧೯೯೯ ರಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್‌ಗಳು ಮತ್ತು ಎನ್‌ಜಿಓ ಸದಸ್ಯರನ್ನೊಳಗೊಂಡ ಸಮಿತಿಯು ಇಂಡಿಯನ್ ಎಕೊ ಡೆವಲಪ್‌ಮೆಂಟ್ ಪ್ರಾಜೆಕ್ಟ್ ಎಂಬ ಯೋಜನೆಯಡಿಯಲ್ಲಿ ನಾಗರಹೊಳೆ ಆದಿವಾಸಿಗಳ ಕುರಿತ ಅಧ್ಯಯನ ನಡೆಸಿ ೧೦೪೧ ಕುಟುಂಬಗಳನ್ನೂ ೩೭೪೧ ಆದಿವಾಸಿಗಳನ್ನೂ ವೈಯಕ್ತಿಕವಾಗಿ ಗುರುತಿಸಿ ಹೆಸರನ್ನೂ ದಾಖಲಿಸಿದೆ. ಆದರೆ ಈಗ ಅರ್ಜಿ ಸಲ್ಲಿಸಿರುವವರ ಉಲ್ಲೇಖ ಇಲ್ಲ.

೨೦೦೨ ರಲ್ಲಿ ನಾಗರಹೊಳೆ ಮ್ಯಾನೇಜ್‌ಮೆಂಟ್ ಪ್ಲಾನ್ ಎಂಬ ಕಾರ್ಯ ಯೋಜನೆಯಲ್ಲಿ ಅರಣ್ಯಾಧಿಕಾರಿಗಳು ತಯಾರಿಸಿರುವ ನಕಾಶೆಯಲ್ಲಿ ನಾಗರಹೊಳೆಯ ೪೩ ಹಾಡಿಗಳನ್ನು ದಾಖಲಿಸಲಾಗಿದ್ದು ಅತ್ತೂರು ಕೊಲ್ಲಿ ಹಾಡಿಯ ಕುರಿತು ಯಾವುದೇ ಉಲ್ಲೇಖ ಇಲ್ಲ.

(ಮೊದಲ ಪುಟದಿಂದ) ೨೦೦೬-೦೭ ನೇ ಸಾಲಿನಲ್ಲಿ ಅರಣ್ಯ ಇಲಾಖೆಯ ಸಿದ್ಧಪಡಿಸಿರುವ ಮೈಸೂರು ವರ್ಕಿಂಗ್ ಪ್ಲಾನ್ ನಲ್ಲಿಯೂ ಕೂಡ ೪೩ ಹಾಡಿಗಳ, ಅಲ್ಲಿನ ವಾಸಿಗಳ ಉಲ್ಲೇಖವಿದ್ದು ಅತ್ತೂರು ಕೊಲ್ಲಿಯ ಉಲ್ಲೇಖವಿಲ್ಲ.

ಈ ಎಲ್ಲಾ ಅಂಶಗಳನ್ನೂ ಸಮರ್ಪಕವಾಗಿ ಮಂಡಿಸಿದ ಅಧಿಕಾರಿಗಳು ಆದಿವಾಸಿಗಳ ಹಕ್ಕು ವ್ಯಾಪ್ತಿಗೆ ಬರುವುದಿಲ್ಲ ಎಂದು ಸಮಿತಿಗೆ ಮನದಟ್ಟು ಮಾಡಿದರು. ಅಲ್ಲದೆ ಹಕ್ಕು ಕೋರಿರುವ ಕುಟುಂಬಗಳು ಅರಣ್ಯದಲ್ಲಿ ಇರುವ ಅಜ್ಜಪ್ಪನ ದೇವಾಲಯವನ್ನೂ ತಾವು ಅದನ್ನು ನಿರ್ಮಿಸಿದೆಂದೂ ಹೇಳಿಕೊಂಡಿದ್ದಾರಾದರೂ ಅದಕ್ಕೂ ಸಾಕ್ಷö್ಯ ಇಲ್ಲ. ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯರ ಪ್ರಕಾರ ಈ ದೇವಾಲಯಕ್ಕೆ ಸ್ಥಳಿಯ ಕೊಡವ ಜನಾಂಗದವರು ಪೂಜೆ ಸಲ್ಲಿಸುತಿದ್ದು ಇಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನಡೆಯುತ್ತಿಲ್ಲ. ಏಪ್ರಿಲ್ ತಿಂಗಳಿನಲ್ಲಿ ನಡೆಯುವ ವಾರ್ಷಿಕ ಪೂಜೆಯಲ್ಲಿ ಆದಿವಾಸಿಗಳಿಗೆ ಕೊಡವರು ಊಟ ನೀಡಿ ಆಹಾರ ಧಾನ್ಯ ನೀಡುವುದು ವಾಡಿಕೆಯಲ್ಲಿದೆ. ಅಲ್ಲದೆ ಆದಿವಾಸಿಗಳು ಅಜ್ಜಪ್ಪ ದೇವರನ್ನು ಪೂಜಿಸುವುದೂ ಇಲ್ಲ ಮತ್ತು ಸಾಮಾನ್ಯವಾಗಿ ಅವರ ದೈವಕ್ಕೆ ಪ್ರಾಣಿ ಬಲಿ ನೀಡುತ್ತಾರೆ ಎಂದು ವಿವರಿಸಲಾಗಿದೆ.

ಅರ್ಜಿಯ ತಿರಸ್ಕರಣೆಗೂ ಮುನ್ನ ಅದ್ಯಕ್ಷರಾಗಿರುವ ಉಪವಿಭಾಗಾಧಿಕಾರಿಗಳು ಅರಣ್ಯ ಇಲಾಖೆಯಲ್ಲಿ ಯಾವುದೇ ದಾಖಲಾತಿ ಇಲ್ಲ, ಹಾಡಿ ಇದ್ದ ಬಗ್ಗೆ ನಿಮ್ಮ ಬಳಿ ಏನಾದರೂ ದಾಖಲಾತಿ ಇದೆಯೇ ಎಂದು ಸಮಿತಿ ಸದಸ್ಯರಾಗಿರುವ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಭೂ ಮಾಪನ ಮತ್ತು ಐಟಿಡಿಪಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಆದರೆ ಯಾವುದೇ ಸರ್ಕಾರೀ ಇಲಾಖೆ ದಾಖಲಾತಿ

ಒದಗಿಸಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಅರ್ಜಿಗಳನ್ನು ತಿರಸ್ಕರಿಸಿ ತೀರ್ಪು ನೀಡಿದ್ದಾರೆ.

ಕಾನೂನು ಕಾರ್ಯವಿಧಾನಗಳ ಪ್ರಕಾರ ಈ ತೀರ್ಪಿನ ವಿರುದ್ದ ಜಿಲ್ಲಾ ಮಟ್ಟದ ಸಮಿತಿಯ ಮುಂದೆ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ೬೦ ದಿನಗಳ ಕಾಲಾವಕಾಶ ಇದೆ. ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಆದ್ಯಕ್ಷರಾಗಿದ್ದು, ಕಂದಾಯ, ಅರಣ್ಯ, ಸಮಾಜ ಕಲ್ಯಾಣ, ಭು ಮಾಪನ, ಐಟಿಡಿಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಈ ವಿಷಯವು ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ. ಯಾರೂ ಸಂರಕ್ಷಿತ ಅರಣ್ಯಗಳ ಒಳಗೆ ಇರಬಾರದು, ಇದು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಭೀಮಗಡ ವನ್ಯಜೀವಿ ಅಭಯಾರಣ್ಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುಟುಂಬಗಳು ಸ್ವಯಂಪ್ರೇರಣೆಯಿAದ ಸ್ಥಳಾಂತರಗೊಳ್ಳಲು ಒಪ್ಪಿಕೊಂಡಿವೆ, ಇದೇ ರೀತಿಯ ಕ್ರಮಗಳನ್ನು ಬೇರೆಡೆ ವಿಸ್ತರಿಸಬೇಕು ಎಂದಿದ್ದಾರೆ.

ಇದುವರೆಗೆ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ೬೦,೦೩೨ ಎಕರೆ ಅರಣ್ಯ ಭೂಮಿಯನ್ನು ಮೂಲನಿವಾಸಿಗಳಿಗೆ ನೀಡಲಾಗಿದೆ. ೧೬,೬೮೫ ಹಕ್ಕುಗಳನ್ನು ಒಳಗೊಂಡ ಒಟ್ಟು ೧೪,೧೩೨ ಅರ್ಜಿಗಳನ್ನು ಅನುಮೋದಿಸಲಾಗಿದೆ, ಸುಮಾರು ೨.೫೫ ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.