ಅಹಮದಾಬಾದ್, ಜೂ. ೩ : ೧೭ ವರ್ಷಗಳ ನಿರಂತರ ಕಾಯುವಿಕೆಯ ಬಳಿಕ ಆರ್.ಸಿ.ಬಿ.ಯ ಆಟಗಾರರು ಮಾತ್ರವಲ್ಲದೆ ಆರ್.ಸಿ.ಬಿ.ಯ ನಿಷ್ಠಾವಂತ ಅಭಿಮಾನಿಗಳ ಹರುಷವೂ ಮುಗಿಲು ಮುಟ್ಟಿದೆ. ಜಗತ್ತಿನ ಅತಿದೊಡ್ಡ ಕ್ರಿಕೆಟ್ ಹಬ್ಬದ ೧೮ನೆ ಆವೃತ್ತಿಯ ಟ್ರೋಫಿಯನ್ನು ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೧೮ ಆವೃತ್ತಿಗಳಲ್ಲಿಯೂ ಆರ್.ಸಿ.ಬಿ ಪರವೇ ಆಡಿದ ಏಕೈಕ ಆಟಗಾರ ೧೮ ಜರ್ಸಿ ನಂಬರ್‌ನ ವಿರಾಟ್ ಕೊಹ್ಲಿಯ ಕನಸ್ಸನ್ನು ನನಸು ಮಾಡಿದ್ದಲ್ಲದೇ ೧೭ ವರ್ಷಗಳಿಂದ ಟ್ರೋಫಿ ಬರದಿದ್ದರೂ ತಂಡಕ್ಕೆ ಬೆಂಬಲವಾಗಿ ನಿಂತಿದ್ದ ಲಕ್ಷಾಂತರ ಅಭಿಮಾನಿಗಳು ಸಂತಸಪಡುವAತೆ ಮಾಡಿದೆ. ಅಂತಿಮ ಪಂದ್ಯದ ದಿನ ರಾಜ್ಯದ ಹಲವೆಡೆ ಅಭಿಮಾನಿಗಳು, ವಿವಿಧ ಸಂಘಟನೆಗಳು ಮಠ-ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಲ್ಲದೆ ಮಡಿಕೇರಿ ನಗರದ ಮಂಗೇರಿರ ಮುತ್ತಣ್ಣ ವೃತ್ತದ ಬಳಿ ಕೂಡ 'ಟೀಂ ೯೦'s ಕಿಡ್ಸ್ ಮಡಿಕೇರಿ' ಹೆಸರಿನಲ್ಲಿ ಅಭಿಮಾನಿಗಳು ಬ್ಯಾನರ್ ಅಳವಡಿಸಿ ಆರ್.ಸಿ.ಬಿ. ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಗುಜರಾತಿನ ಅಹಮ ದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಆರ್.ಸಿ.ಬಿ.ಯನ್ನು ೨೦ ಓವರ್‌ಗಳಲ್ಲಿ ೧೯೦ ರನ್‌ಗಳಿಗೆ ಕಟ್ಟಿ ಹಾಕಿತು. ೯ ವಿಕೆಟ್‌ಗಳನ್ನು ಕಳೆದುಕೊಂಡ ಆರ್.ಸಿ.ಬಿ. ಪರ ವಿರಾಟ್ ಕೊಹ್ಲಿ ೪೩ ರನ್ ಗಳಿಸಿದರು. ಜಿತೇಶ್ ಶರ್ಮಾ ಹಾಗೂ ಮಯಂಕ್ ಅಗರ್ವಾಲ್ ತಲಾ ೨೪ ರನ್ ಗಳಿಸಿದರು. ರಜತ್ ಪಟಿದಾರ್ ೨೬, ಲಿವಿಂಗ್‌ಸ್ಟೋನ್ ೨೫ ರನ್ ಗಳಿಸಿದರು. ಪಂಜಾಬ್ ಪರ ಜೇಮಿಸನ್

(ಮೊದಲ ಪುಟದಿಂದ) ಹಾಗೂ ಅರ್ಶದೀಪ್ ತಲಾ ೩ ವಿಕೆಟ್ ಕಬಳಿಸಿದರು. ಗುರಿ ಬೆನ್ನಟ್ಟಿದ ಪಂಜಾಬ್ ತಂಡ ೭ ವಿಕೆಟ್‌ಗಳನ್ನು ಕಳೆದುಕೊಂಡು ೧೮೪ ರನ್ ಗಳಿಸಿ ೬ ರನ್‌ಗಳಿಂದ ಸೋಲನುಭವಿಸಿತು. ಪಂಜಾಬ್ ಪರ ಜಾಶ್ ಇಂಗ್ಲಿಸ್ ೩೯ ರನ್ ಗಳಿಸಿದರು. ಶಶಾಂಕ್ ಸಿಂಗ್ ೬೧ ರನ್ ಗಳಿಸಿದರು. ಆರ್.ಸಿ.ಬಿ. ಪರ ಕೃನಾಲ್ ಪಂಡ್ಯ ೨, ಭುವನೇಶ್ವರ್ ೨ ವಿಕೆಟ್ ಗಳಿಸಿ ತಂಡದ ಜಯಕ್ಕೆ ಬಲ ತುಂಬಿದರು. ಪಂದ್ಯ ವೀಕ್ಷಿಸಲು ಬ್ರಿಟನ್ ಮಾಜಿ ಪ್ರಧಾನಿ, ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಶಿ ಸುನಾಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಕೂಡ ಆಗಮಿಸಿ ಆರ್.ಸಿ.ಬಿ/ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.