ಸೋಮವಾರಪೇಟೆ, ಮೇ ೨೬: ಕುಶಾಲನಗರದಿಂದ ಸೋಮವಾರ ಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದ ಸ್ಯಾಂಟ್ರೋ ಕಾರು ಹಾಗೂ ಪಟ್ಟಣದಿಂದ ಕುಶಾಲನಗರದ ಕಡೆಗೆ ತೆರಳುತ್ತಿದ್ದ ಹೋಂಡಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಈರ್ವರು ಪೊಲೀಸ್ ಸಿಬ್ಬಂದಿಗಳು ತೀವ್ರಗಾಯ ಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಪಟ್ಟಣದ ನಿವಾಸಿ ಮಹಮ್ಮದ್ ಸಲೀಂ ಎಂಬವರು ಚಾಲಿಸುತ್ತಿದ್ದ ಹೋಂಡಾ ಕಾರು (ಕೆ.ಎ.೧೨ ಎಂ.ಎ ೧೯೯೧) ಹಾಗೂ ಸೋಮವಾರಪೇಟೆ ಪೊಲೀಸ್ ಠಾಣಾ ಸಿಬ್ಬಂದಿ ಅರುಣ್ ಎಂಬವರು ಚಾಲಿಸುತ್ತಿದ್ದ ಸ್ಯಾಂಟ್ರೋ ಕಾರಿನ ನಡುವೆ (ಕೆ.ಎ.೧೨ ಎಂ. ೫೯೪೫) ಬೇಳೂರುಬಾಣೆ-ಕಾರೆಕೊಪ್ಪ ಗ್ರಾಮದ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ.
ಪರಿಣಾಮ ಸ್ಯಾಂಟ್ರೋ ಕಾರಿನ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಪೊಲೀಸ್ ಸಿಬ್ಬಂದಿ ಮೂರ್ತಿ ಅವರ ತಲೆ ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಚಾಲನೆ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಅರುಣ್ ಅವರ ತಲೆ ಭಾಗಕ್ಕೆ ಪೆಟ್ಟಾಗಿದೆ. ಹೊಂಡಾ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಕ್ಷಣ ಈರ್ವರು ಗಾಯಾಳುಗಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ, ಎಎಸ್ಐ ಪ್ರವೀಣ್ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದು, ಪಟ್ಟಣ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಪೊಲೀಸ್ ಸಿಬ್ಬಂದಿಗಳಾದ ಅರುಣ್ ಅವರು ಕುಶಾಲನಗರ ಠಾಣೆ ಯಿಂದ ಕರ್ತವ್ಯ ಮುಗಿಸಿ ಸೋಮವಾರಪೇಟೆಗೆ ಆಗಮಿಸು ತ್ತಿದ್ದರು. ಮೂರ್ತಿ ಅವರು ಕುಶಾಲನಗರದಿಂದ ಸೋಮವಾರ ಪೇಟೆ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ಆಗಮಿಸುತ್ತಿದ್ದರು.