ಮಡಿಕೇರಿ, ಮೇ ೨೫ : ಜಿಲ್ಲೆಯಾದ್ಯಂತ ಬಿರುಸಿನಿಂದ ಮಳೆಯಾಗುತ್ತಿದ್ದು, ಗಾಳಿಯ ರಭಸವೂ ಹೆಚ್ಚಾಗಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಳ್ಳುವುದ ರೊಂದಿಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳುವ ಮೂಲಕ ಹಾನಿ ಘಟನೆಗಳು ಮುಂದುವರಿದಿವೆ.

ಜಿಲ್ಲಾ ಕೇಂಧ್ರ ಮಡಿಕೇರಿ ಯಲ್ಲಿಯೂ ಧಾರಾಕಾರ ಮಳೆ ಯಾಗುತ್ತಿದ್ದು, ಚರಂಡಿ ರಾಜ ಕಾಲುವೆಗಳು ತುಂಬಿ ಹರಿಯುತ್ತಿವೆ. ಗುಂಡಿಬಿದ್ದ ರಸ್ತೆಗಳಲ್ಲಿ ನೀರು ನಿಂತು ಕೆರೆಗಳಾಗಿ ಮಾರ್ಪಾಡಾಗಿವೆ. ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮಂಗಳೂರು ರಸ್ತೆಯಲ್ಲಿ ಲಾರಿಯೊಂದರ ಮೇಲೆ ಮರ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಲಾರಿಯಲ್ಲಿದ್ದವರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಅಮ್ಮತ್ತಿ ಕಾರ್ಮಾಡಿನಲ್ಲಿ ಮನೆ ಯೊಂದರ ಮೇಲೆ ಮರಬಿದ್ದು ನಷ್ಟ ಸಂಭವಿಸಿದೆ. ತಲಕಾವೇರಿ ಭಾಗಮಂಡಲದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಸಂಗಮದಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವುದ ರೊಂದಿಗೆ ಅಲ್ಲಿನ ಉದ್ಯಾನವನ ಜಲಾವೃತಗೊಂಡಿದೆ.

ಜಿಲ್ಲೆಯಲ್ಲಿ ಮಳೆಯೊಂದಿಗೆ ಗಾಳಿಯ ರಭಸವೂ ಅಧಿಕ ಗೊಳ್ಳುತ್ತಿದ್ದು, ಎಲ್ಲೆಡೆ ವಿಪರೀತ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಮಳೆಯ ಅಬ್ಬರದಿಂದಾಗಿ ಎಲ್ಲಿ ಏನಾ ಗುತ್ತದೋ? ಎಂಬ ಆತಂಕದ ವಾತಾ ವರಣ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ತಾ. ೨೮ರವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ, ದೂರವಾಣಿ ಸಂಪರ್ಕ ಕಡಿತಗೊಂಡು ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾಗಮಂಡಲದಲ್ಲಿ ೬ ಇಂಚು ಮಳೆ

ಕಳೆದ ೨೪ ಗಂಟೆಗಳಲ್ಲಿ ಭಾಗಮಂಡಲ ವ್ಯಾಪ್ತಿಯಲ್ಲಿ ೬.೬೨ ಇಂಚು ಮಳೆಯಾಗಿದೆ. ಮಡಿಕೇರಿ ವ್ಯಾಪ್ತಿಯಲ್ಲಿ ೩.೫೬ ಇಂಚು, ನಾಪೋಕ್ಲುವಿನಲ್ಲಿ ೨.೮೩ ಇಂಚು, ಸಂಪಾಜೆಯಲ್ಲಿ ೦.೪೭ ಇಂಚು, ವೀರಾಜಪೇಟೆ ವ್ಯಾಪ್ತಿಯಲ್ಲಿ ೫.೨೪ ಇಂಚು, ಅಮ್ಮತ್ತಿಯಲ್ಲಿ ೩.೩೮ ಇಂಚು, ಸೋಮವಾರಪೇಟೆ ವ್ಯಾಪ್ತಿಯಲ್ಲಿ ೧.೬೧ ಇಂಚು, ಶನಿವಾರಸಂತೆಯಲ್ಲಿ ೧.೪೧ ಇಂಚು, ಶಾಂತಳ್ಳಿಯಲ್ಲಿ ೩.೯೩ ಇಂಚು, ಕೊಡ್ಲಿಪೇಟೆಯಲ್ಲಿ ೧.೬೯ ಇಂಚು, ಪೊನ್ನಂಪೇಟೆಯಲ್ಲಿ ೩.೬೬ ಇಂಚು, ಹುದಿಕೇರಿಯಲ್ಲಿ ೪.೯೪ ಇಂಚು, ಶ್ರೀಮಂಗಲದಲ್ಲಿ ೨.೪೪ ಇಂಚು, ಬಾಳೆಲೆಯಲ್ಲಿ ೧.೭೭ ಇಂಚು, ಕುಶಾಲನಗರದಲ್ಲಿ ೦.೯೩ ಇಂಚು, ಸುಂಟಿಕೊಪ್ಪದಲ್ಲಿ ೨.೦೯ ಇಂಚು ಮಳೆ ಸುರಿದಿದೆ. ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೨.೯೧ ಇಂಚು ಮಳೆ ಸುರಿದಿದೆ.

೧೯೭ ವಿದ್ಯುತ್ ಕಂಬಗಳಿಗೆ ಹಾನಿ

ಮಡಿಕೇರಿ: ಚೆಸ್ಕಾಂ ಮಡಿಕೇರಿ ವಿಭಾಗದಲ್ಲಿ ಭಾರಿ ಗಾಳಿ ಮಳೆಯಿಂದ ೧೯೭ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಎಂ.ರಾಮಚAದ್ರ ಅವರು ತಿಳಿಸಿದ್ದಾರೆ.

ಅಲ್ಲಲ್ಲಿ ಮರಗಳು, ಕಂಬಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಆಗಿದೆ. ಸೆಸ್ಕ್ ವ್ಯಾಪ್ತಿಯ ಪವರ್ ಮೆನ್ ಹಾಗೂ ಗ್ಯಾಂಗ್‌ಮೆನ್ ಜೊತೆಗೆ ಶಾಖಾಧಿಕಾರಿಗಳು ಸಾರ್ವಜನಿಕರ ಸಹಕಾರದಿಂದ ತೆರವು ಕೆಲಸ ಮಾಡುತ್ತಿದ್ದು. ಜೊತೆಗೆ ೧೫ ಗುತ್ತಿಗೆದಾರರ ತಂಡ ಕೆಲಸ ಮಾಡುತ್ತಿದೆ. ಗ್ರಾಹಕರಿಗೆ ವಿದ್ಯುತ್ ಮರು ಸಂಪರ್ಕ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಿವಿ ವ್ಯಾಪ್ತಿಯ ಕಾಲೇಜುಗಳಿಗೆ ರಜೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಘಟಕ ಸರ್ಕಾರಿ ಹಾಗೂ ಸಂಯೋಜಿತ ಮಹಾವಿದ್ಯಾಲಯಗಳಿಗೆ ತಾ. ೨೬ ಹಾಗೂ ೨೭ ರಂದು ಎರಡು ದಿನ ರಜೆ ಘೋಷಿಸಿ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಆದೇಶ ಹೊರಡಿಸಿದ್ದಾರೆ.