ಮಡಿಕೇರಿ, ಮೇ ೨೪: ಪ್ರವಾಸಿಗರ ನೆಚ್ಚಿನ ತಾಣ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಸ್ವಚ್ಛಂದ ಪರಿಸರ, ವನ್ಯಜೀವಿ ಸಂಕುಲದಿAದ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ‘ಪರಿಸರ ಸ್ನೇಹಿ ಪ್ರವಾಸೋದ್ಯಮ’ದ ಒತ್ತಾಯವೂ ಹೆಚ್ಚಾಗುತ್ತಿದೆ. ಇದರ ಭಾಗವಾಗಿ ಕುಶಾಲನಗರ ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಮಾಡುವ ಮೂಲಕ ಅರಣ್ಯ ಇಲಾಖೆ ಹೊಸ ಹೆಜ್ಜೆಯನ್ನಿಟ್ಟಿರುವುದು ಪ್ರಶಂಸೆಗೆ ಪಾತ್ರವಾಗುತ್ತಿದೆ.

ಕುಶಾಲನಗರ ವ್ಯಾಪ್ತಿಯ ದುಬಾರೆ ಸಾಕಾನೆ ಶಿಬಿರ, ಕಾವೇರಿ ನಿಸರ್ಗಧಾಮ, ಹಾರಂಗಿ ವೃಕ್ಷೆÆÃದ್ಯಾನ, ಸಾಕಾನೆ ಶಿಬಿರದಲ್ಲಿ ಜೂನ್ ೧ ರಿಂದ ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಿ ವರ್ಗಾವಣೆಗೊಂಡ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿ ಬಿ. ಭಾಸ್ಕರ್ ತಾ. ೭ರಂದು ಆದೇಶಿಸಿದ್ದಾರೆ.

ದುಬಾರೆ ಶಿಬಿರದಲ್ಲಿ ೩೦ ಸಾಕಾನೆಗಳಿದ್ದು, ಹೊಸದಾಗಿ ರೂಪುಗೊಳ್ಳುತ್ತಿರುವ ಹಾರಂಗಿ ವೃಕ್ಷೆÆÃದ್ಯಾನ, ಹಾರಂಗಿ ಸಾಕಾನೆ ಶಿಬಿರವೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ನೈಸರ್ಗಿಕ ವಾತಾವರಣ ಕಲುಷಿತ ಗೊಳ್ಳುತ್ತಿರುವುದು ಕಂಡು ಬರುತ್ತಿದೆ. ಸೂಕ್ತ ಮಾರ್ಗ ಸೂಚಿ ಯಿಲ್ಲದ ಪರಿಣಾಮ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆದು ಅಶುಚಿತ್ವಕ್ಕೆ ಕಾರಣ ವಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಸಾಕಾನೆ, ಜಿಂಕೆಗಳು, ಇತರ ಪ್ರಾಣಿ, ಪಕ್ಷಿಗಳಿಗೆ ಪ್ಲಾಸ್ಟಿಕ್ ಬಳಕೆಯಿಂದ ತೊಂದರೆ ಉಂಟಾಗುತ್ತಿರುವುದು ಸೇರಿದಂತೆ ಪ್ರವಾಸಿಗರು ಎಲ್ಲೆಂದರಲ್ಲಿ ನೀರಿನ ಬಾಟಲಿ, ಪ್ಲಾಸ್ಟಿಕ್ ಕವರ್, ತಿನಿಸುಗಳ ಕವರ್ ಏಕಬಳಕೆ ಪ್ಲಾಸ್ಟಿಕ್ ಹಾಕುತ್ತಿರುವುದರಿಂದ ಶುಚಿತ್ವ ಹಾಳಾಗಿ ಸಾಕಾನೆ ಶಿಬಿರದಲ್ಲಿರುವ ಆನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದರಿAದ ಈ ಕ್ರಮವಹಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು ನಿಷೇಧಿತ ಪ್ಲಾಸ್ಟಿಕ್ ಬಳಕೆಯಾದಲ್ಲಿ ರೂ. ೧೦೦ ಮೊತ್ತವನ್ನು ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

(ಮೊದಲ ಪುಟದಿಂದ) ಈಗಾಗಲೇ ಮಡಿಕೇರಿ ನಗರದಲ್ಲಿ ೨ ಲೀಟರ್‌ಕ್ಕಿಂತ ಕಡಿಮೆ ಸಾಮರ್ಥ್ಯದ ನೀರಿನ ಬಾಟಲ್ ನಿಷೇಧ ಮಾಡಿದ್ದು, ಇದನ್ನು ಜಿಲ್ಲಾ ವ್ಯಾಪಿ ವಿಸ್ತರಿಸಬೇಕೆಂಬ ಒತ್ತಾಯವೂ ಜನರಿಂದ ಕೇಳಿ ಬರುತ್ತಿದೆ. ಇದೀಗ ಅರಣ್ಯ ಇಲಾಖೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಈ ಕ್ರಮಕೈಗೊಂಡಿರುವುದು ಪ್ರಶಂಸೆಗೆ ಕಾರಣವಾಗಿದ್ದು, ವ್ಯವಸ್ಥಿತವಾಗಿ ಈ ಕ್ರಮದ ಅನುಷ್ಠಾನದಿಂದ ಇಡೀ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವತ್ತವೂ ಚಿಂತನೆ ನಡೆಯಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.