ವರದಿ : ಕಿಶೋರ್ ಕುಮಾರ್ ಶೆಟ್ಟಿ
ವೀರಾಜಪೇಟೆ, ಮೇ ೨೪: ಗಾಳಿ ಸಹಿತ ಭಾರಿ ಮಳೆಯಿಂದ ಮರ ಬಿದ್ದ ಪರಿಣಾಮ ಕಾರ್ಮಿಕ ಮಹಿಳೆ ಮೃತಪಟ್ಟಿದ್ದು, ಈ ವರ್ಷ ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ಮೊದಲ ಸಾವಿನ ಪ್ರಕರಣ ಇದಾಗಿದೆ.
ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಕಬ್ಬಚ್ಚಿರ ಉತ್ತಪ್ಪ, ಜ್ಯೋತಿ ಅವರ ಲೈನ್ಮನೆಯಲ್ಲಿ ನೆಲೆಸಿದ್ದ ದಿ. ರಾಜು ಅವರ ಪತ್ನಿ ಯರವರ ಗೌರಿ (೫೧) ಮೃತ ದುರ್ದೈವಿ.
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಮುಂಗಾರು ಪ್ರವೇಶಕ್ಕೆ ಮುನ್ನವೇ ವರುಣ ಬಿರುಸು ಪಡೆದುಕೊಂಡಿದ್ದು, ಇದೀಗ ಮಹಿಳೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಬಲಿಯಾಗಿದ್ದಾರೆ.
ಕಳೆದ ೪ ವರ್ಷಗಳಿಂದ ಉತ್ತಪ್ಪ ಅವರ ತೋಟ ಹಾಗೂ ಮನೆಯಲ್ಲಿ ಕೆಲಸ ಮಾಡಿಕೊಂಡು ಅಲ್ಲಿನ ಲೈನ್ಮನೆಯಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಗೌರಿ ತಾ. ೨೪ ರ ಸಂಜೆ ೪.೩೦ರ ಸುಮಾರಿಗೆ ಪಾತ್ರೆ ತೊಳೆಯಲೆಂದು ಮನೆಯಿಂದ ಹೊರ ಬಂದ ಸಂದರ್ಭ ಮನೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಹಲಸಿನ ಮರವೊಂದು ಧರೆಗುರುಳಿದೆ. ಅದರ ಕೊಂಬೆ ಮನೆ ಮೇಲೆ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ. ಇಡೀ ಮರ ಗೌರಿ ಮೇಲೆ ಬಿದ್ದಿದ್ದು, ಈ ರಭಸಕ್ಕೆ ಮರದ ನಡುವೆ ಮಣ್ಣಿನೊಳಗೆ ಗೌರಿ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ.
ಲೈನ್ಮನೆಯ ಪಕ್ಕದಲ್ಲಿಯೇ ಇದ್ದ ತೋಟದ ಮಾಲೀಕರಿಗೆ ಈ ವಿಷಯ ತಿಳಿದಿದೆ. ಸ್ಥಳೀಯ ಗ್ರಾ.ಪಂ. ಪಿ.ಡಿ.ಓ. ಪ್ರಮೋದ್ ಅವರಿಗೆ ಮಾಹಿತಿ ಮುಟ್ಟಿಸಿದ್ದು, ಅವರು ಪೊಲೀಸರಿಗೆ ತಿಳಿಸಿದ್ದಾರೆ.
(ಮೊದಲ ಪುಟದಿಂದ) ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಯಂತ್ರದ ಮೂಲಕ ಬಿದ್ದಿದ್ದ ಮರವನ್ನು ಕತ್ತರಿಸಿ ತೆರವುಗೊಳಿಸಲು ಮುಂದಾದರು. ಬೃಹತ್ ಮರ ಹಾಗೂ ಪ್ರತಿಕೂಲ ಹವಾಮಾನದ ಹಿನ್ನೆಲೆ ಸುಮಾರು ೩ ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಮರವನ್ನು ತೆರೆವು ಮಾಡಿ ರಾತ್ರಿ ೮ ಗಂಟೆ ವೇಳೆಗೆ ಮೃತದೇಹವನ್ನು ಹೊರತೆಗೆಯಲಾಯಿತು.
ಮೃತ ಗೌರಿಯ ಅಕ್ಕ ನೀಲಿ ಮತ್ತು ಕುಟುಂಬಸ್ಥರು ಸ್ಥಳಕ್ಕೆ ಬಂದರು. ಆ್ಯಂಬ್ಯುಲೆನ್ಸ್ ಮೂಲಕ ವೀರಾಜಪೇಟೆ ಆಸ್ಪತ್ರೆ ಶವಾಗಾರಕ್ಕೆ ಮೃತದೇಹವನ್ನು ಸಾಗಿಸಲಾಯಿತು.
ಈ ಸಂದರ್ಭ ತಹಶೀಲ್ದಾರ್ ಅನಂತ ಶಂಕರ್, ಗ್ರಾ.ಪಂ. ಅಧ್ಯಕ್ಷೆ ಫಾತಿಮಾ, ಉಪಾಧ್ಯಕ್ಷೆ ಕವಿತಾ, ಸದಸ್ಯ ಕೆ.ಕೆ. ಬೋಪಣ್ಣ, ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್, ಪಿಡಿಓ ಪ್ರಮೋದ್, ಕಂದಾಯ ಪರಿವೀಕ್ಷಕ ಹರೀಶ್, ಗ್ರಾಮ ಲೆಕ್ಕಿಗೆ ಕಸ್ತೂರಿ, ತಾ.ಪಂ. ಮಾಜಿ ಸದಸ್ಯ ವಿ.ಎಂ. ಗಣೇಶ್, ತೋಟದ ಮಾಲೀಕ ಉತ್ತಪ್ಪ ಹಾಜರಿದ್ದು, ಕಾರ್ಯಾಚರಣೆಗೆ ಸಹಕಾರ ನೀಡಿದರು. ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.