ಸೋಮವಾರಪೇಟೆ, ಮೇ ೨೪: ತಾಲೂಕಿನ ಹೊಸತೋಟದಿಂದ ಗರಗಂದೂರು, ಸುಂಟಿಕೊಪ್ಪ ಸಂಪರ್ಕ ರಸ್ತೆಯಲ್ಲಿ ನಿರ್ಮಿಸಿರುವ ಸೇತುವೆಯ ಮೇಲೆ ಕೊಳಚೆ ನೀರಿನ ಕೃತಕ ಕೆರೆ ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸರ್ಕಸ್ ಮಾಡುವಂತಾಗಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಮ್ಮ ಗ್ರಾಮ ನಮ್ಮ ರಸ್ತೆಯ ಮೂಲಕ ನಿರ್ಮಾಣಗೊಂಡಿರುವ ಸೇತುವೆಯ ಮೇಲೆ ಪ್ರತಿ ಮಳೆಗಾಲದಲ್ಲಿ ಕೊಳಚೆ ನೀರು ನಿಲುಗಡೆಗೊಳ್ಳುತ್ತಿದ್ದು, ಸಂಬAಧಿಸಿದ ಅಭಿಯಂತರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ರಸ್ತೆ ಹಾಗೂ ಸೇತುವೆಯ ಮೇಲೆ ದಿನಂಪ್ರತಿ ನೂರಾರು ವಾಹನಗಳು, ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಸೇತುವೆಯ ಮೇಲೆ ಸಂಚರಿಸಲು ಆಗದ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸೇತುವೆಯ ಅಕ್ಕಪಕ್ಕ ರಸ್ತೆ ಅಲ್ಪ ಪ್ರಮಾಣದಲ್ಲಿ ಜಗ್ಗಿರುವುದರಿಂದ ಮಳೆ ನೀರು ನಿಲುಗಡೆಯಾಗುತ್ತಿದೆ. ಇದೀಗ ಜೆಸಿಬಿಯಿಂದ ರಸ್ತೆ ಬದಿ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ನೀರು ನಿಲುಗಡೆಯಾಗುತ್ತಿರುವ ಸ್ಥಳದಲ್ಲಿ ಕಾಂಕ್ರೀಟ್ ಹಾಕಲಾಗುವುದು. ನಂತರ ಸಮಸ್ಯೆ ಬಗೆಹರಿಯಲಿದೆ ಎಂದು ಮಡಿಕೇರಿ ಯೋಜನಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಭು ತಿಳಿಸಿದ್ದಾರೆ.