ಗೋಣಿಕೊಪ್ಪಲು, ಮೇ.೨೪: ಮಾವು ಎಂದರೆ ಎಂಥವರ ಬಾಯಲ್ಲಿಯೂ ನೀರೂರುತ್ತದೆ.ಇದೀಗ ಎಲ್ಲೆಡೆ ಹೇರಳವಾಗಿ ಕಾಡು ಮಾವು ಬಿಡುತ್ತಿದ್ದು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ರೂ.೫೦ ರಿಂದ ರೂ.೧೦೦ ರವರೆಗೂ ದರವಿದೆ.

ಮೈಸೂರು ಇತ್ಯಾದಿ ಮಾವಿನ ಹಣ್ಣು ಇಷ್ಟ ಪಡುವ ಕೊಡಗಿನ ಜನತೆ ಕಾಡು ಮಾವಿನ ತಂಬುಳಿ, ಮಾವು ಮೊಸರು ಬಜ್ಜಿ, ಮಾವು ಹಣ್ಣಿನ ಸಾರು, ಕಾಡು ಮಾವಿನ ಕಾಯಿಯ ಅಪ್ಪೆ ಮಿಡಿ ಉಪ್ಪಿನ ಕಾಯಿ ಹಾಗೂ ಕಾಡು ಮಾವಿನ ಹಣ್ಣನ್ನು ಪಿಂಗಾಣಿ ಜಾಡಿ ಗೆ ಹಾಕಿ ಉಪ್ಪು ಬೆರೆಸಿ ಹಲವು ತಿಂಗಳ ಕಾಲ ಕೆಡದಂತೆ ರಕ್ಷಿಸುವ ಮೂಲಕ ರುಚಿಯನ್ನು ಸವಿಯುತ್ತಾರೆ.

ಮಾವಿನಲ್ಲಿ ವಿಟಮಿನ್ ಎ ಅಧಿಕವಿದೆ ಎಂದು ಹೇಳಲಾಗಿದ್ದು ಕಣ್ಣಿನ ಆರೋಗ್ಯಕ್ಕೆ ಮಾವು ಸೇವನೆ ಉತ್ತಮ ಎನ್ನಲಾಗುತ್ತಿದೆ. ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪಲು ಸೇರಿದಂತೆ ಕೊಡಗಿನ ಪಟ್ಟಣಗಳಲ್ಲಿ ಕಾಡು ಮಾವಿನ ಭರಾಟೆ ಜೋರಾಗಿದೆ.

ಕೊಡಗಿನ ಕಾಡುಮಾವು ವಿಶೇಷತೆ ಎಂದರೆ ಇದರ ಮರ ಎತ್ತರ ಹಾಗೂ ಬೃಹದಾಕಾರವಾಗಿ ಬೆಳೆಯುವದರಿಂದ ಮರ ಹತ್ತಿ ಹಣ್ಣು ಕೀಳುವ ಬದಲು ಹಣ್ಣಾಗಿ ನೆಲಕ್ಕೆ ಉದುರಿದ ಮಾವನ್ನೇ ಮಾರಾಟಕ್ಕೆ ತರಲಾಗುತ್ತದೆ. ಹಲವು ತಿಂಗಳ ಕಾಲ ಕೆಡದಂತೆ ಕಾಡು ಮಾವನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಜೀರಿಗೆ ಕಾಡುಮಾವು ಪುಟಾಣಿ ಆಕಾರದಲ್ಲಿದ್ದು ಹೆಚ್ಚು ಸಿಹಿ ಮತ್ತು ರುಚಿಕರ. ಹಲವಷ್ಟು ಕಾರ್ಮಿಕ ವರ್ಗ ಬೆಳಿಗ್ಗೆ ಹಾಗೂ ಸಂಜೆ ಮರದ ಬುಡದಲ್ಲಿಯೇ ಕಾಡು ಮಾವು ಹೆಕ್ಕಲು ಆರಂಭಿಸುತ್ತಾರೆ. ಒಂದಷ್ಟು ಕಾರ್ಮಿಕರು ಮಾವು ಫಸಲು ಮುಗಿಯುವವರೆಗೂ ರೂ.೫೦ ರಿಂದ ರೂ.೫೦೦ ರವರೆಗೆ ಮಾವು ಮಾರಾಟ ಮಾಡುವ ಮೂಲಕ ಖರ್ಚಿಗಾಗಿ ಹಣ ಸಂಪಾದಿಸುತ್ತಾರೆ. ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪಲಿನಲ್ಲಿ ಕೆ.ಜಿ.ಮಾವಿಗೆ ರೂ.೫೦ ಸಗಟು ದರವಿದ್ದು ಅಂಗಡಿ ವರ್ತಕರು ರೂ.೧೦೦ರ ವರೆಗೂ ಕೆ.ಜಿ.ಗೆ ಮಾರಾಟ ಮಾಡುತ್ತಾರೆ. ಕೊಡಗಿನಲ್ಲಿ ವಿವಾಹ ಕಾರ್ಯಕ್ರಮದಲ್ಲಿಯೂ ಮಾವಿನ ಗೊಜ್ಜು, ಮಾವಿನ ಮೊಸರು ಬಜ್ಜಿ ವಿಶೇಷ ಆಕರ್ಷಣೆ.

ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಗಾಂಧಾರಿ ಮೆಣಸು, ಉಪ್ಪು ಬೆರೆಸಿ ಕೈಯಲ್ಲಿ ಹಣ್ಣನ್ನು ಕಿವಿಚಿ ಹಾಗೇನೆ ಅದನ್ನು ಬೆರೆಸಿ ಊಟ ಮಾಡುವದನ್ನೂ ನಾವು ಕಾಣಬಹುದು. ಉಪ್ಪಿನಲ್ಲಿ ಹಾಕಿಟ್ಟ ಮಾವಿನ ಹಣ್ಣನ್ನು ನಾಲ್ಕು ಐದು ದಿನ ಬಿಟ್ಟು ತಿಂದರೆ ಬಾಯಿಗೆ ಮತ್ತಷ್ಟು ರುಚಿ. ಕೊಡಗಿನ ಶ್ರೀಮಂತ ಸಂಸ್ಕೃತಿಯ ನಡುವೆ ವೈವಿಧ್ಯಮಯ ಆಹಾರದಲ್ಲಿ ಕಾಡು ಮಾವು ವಿಶೇಷ ಸ್ಥಾನ ಪಡೆದಿದೆ ಎಂದರೆ ಅತಿಶಯವಿಲ್ಲ. ಮಿಡಿಮಾವು ಉಪ್ಪಿನ ಕಾಯಿಗೆ ಎಲ್ಲಿಲ್ಲದ ಬೇಡಿಕೆ ಇದೆ.

ಕಾರ್ಕಳ, ಶಿವಮೊಗ್ಗ, ಶಿರಸಿ ಮುಂತಾದ ಮಲೆನಾಡು ಪ್ರದೇಶದಲ್ಲಿ ಅಪ್ಪೆಮಿಡಿ ಹಾಗೂ ಕಾಡು ಮಾವು ಬೃಹತ್ ಉದ್ಯಮವಾಗಿ ಅಭಿವೃದ್ಧಿ ಹೊಂದಿದ್ದು ವಾರ್ಷಿಕ ರೂ.೫೦ ಲಕ್ಷದಿಂದ ಕೋಟಿಯವರೆಗೂ ವಹಿವಾಟು ನಡೆಸುತ್ತಿದೆ.

- ಟಿ.ಎಲ್.ಶ್ರೀನಿವಾಸ್