ಮಡಿಕೇರಿ, ಮೇ ೨೩: ಜಿಲ್ಲೆಯ ವಿದ್ಯುತ್ ಸಂಪರ್ಕವನ್ನು ಬಲವರ್ಧನೆಗೊಳಿಸುವುದು ಆದ್ಯತೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ನಗರದ ಚೆಸ್ಕಾಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಳೆಗಾಲದಲ್ಲಿ ವ್ಯವಸ್ಥಿತವಾಗಿ ಚೆಸ್ಕಾಂ ಅಧಿಕಾರಿ, ಸಿಬ್ಬಂದಿ ವರ್ಗ ಕೆಲಸ ಮಾಡಿ ೨೪ ಗಂಟೆ ಅಂತರದಲ್ಲಿ ಹಾಳಾಗಿದ್ದ ವಿದ್ಯುತ್ ಮಾರ್ಗವನ್ನು ಮರುಸಂಪರ್ಕ ಕಲ್ಪಿಸಿ ಜನರಿಗೆ ತೊಂದರೆಯಾಗದ ರೀತಿ ಕೆಲಸ ಮಾಡಿದೆ. ಹಾನಿಗೀಡಾದ ೪ ಸಾವಿರ ಕಂಬಗಳನ್ನು ೨೪ ಗಂಟೆ ಅಂತರದಲ್ಲಿ ದುರಸ್ತಿಪಡಿಸ ಲಾಗಿತ್ತು. ಈ ವರ್ಷ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸ್ಥಳ ಪರಿಶೀಲಿಸಿ ವಾಸ್ತವ ಸ್ಥಿತಿ ಅರಿತುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಈಗಾಗಲೇ ಲಿಂಕ್ ಲೈನ್ ಮಾಡಿ ತೊಂದರೆಯಾದಲ್ಲಿ ತ್ವರಿತವಾಗಿ ಸರಿಪಡಿಸಲು ಕಾರ್ಯೋನ್ಮುಖ ಗೊಂಡಿದ್ದೇವೆ. ಬಾಕಿ ಕೆಲಸವನ್ನು ಶೀಘ್ರ ಮುಗಿಸಲಾಗುವುದು ಎಂದರು.
ಸಹಾಯವಾಣಿ ಆರಂಭ : ಈ ಬಾರಿ ಎಲ್ಲಾ ಲೈನ್ಮೆನ್ಗಳಿಗೆ ಮೊಬೈಲ್ ಫೋನ್ಗಳನ್ನು ನೀಡಲಾಗುವುದು. ಸ್ಥಳೀಯವಾಗಿ ಟೋಲ್ ಫ್ರೀ ಸಹಾಯವಾಣಿ ಆರಂಭಿಸಲಾಗುವುದು ಎಂದು ರಮೇಶ್ ಮಾಹಿತಿ ನೀಡಿದರು.
ಜೂನ್ ೧ ರಿಂದ ಸಹಾಯವಾಣಿ ಆರಂಭವಾಗುತ್ತದೆ. ಮೊಬೈಲ್ ಸಂಖ್ಯೆ ಪ್ರದರ್ಶಿಸಿ ಪ್ರಚಾರ ನೀಡಿ ಜನರಿಗೆ
(ಮೊದಲ ಪುಟದಿಂದ) ಅನುಕೂಲಕರವಾಗುವಂತೆ ಮಾಡಲಾಗುವುದು. ಈ ವರ್ಷ ಮಳೆಯಿಂದಾಗಿ ೭೦೦ ಕಂಬ ಬಿದ್ದಿವೆ. ಅವುಗಳಿಗೆ ಮರುಸಂಪರ್ಕ ನೀಡಲಾಗಿದೆ. ಪ್ರತಿ ಸಬ್ಡಿವಿಷನ್ಗೆ ತಲಾ ೧೦ ಮಂದಿ ಗ್ಯಾಂಗ್ಮೆನ್ ಗಳೊಂದಿಗೆ ಹೆಚ್ಚುವರಿ ಲೈನ್ಮೆನ್ ಗಳನ್ನು ನೇಮಿಸಲಾಗುವುದು ಎಂದ ಅವರು, ಅನಿಯಮಿತ ವಿದ್ಯುತ್ ಕಡಿತಕ್ಕೆ ಸಂಪರ್ಕ ಬಲವರ್ಧನೆ ಮಾಡುತ್ತಿರುವುದು ಕಾರಣವಾಗಿದ್ದು, ಗುಣಮಟ್ಟದ ಕೆಲಸ ಮಾಡುತ್ತಿರುವುದರಿಂದ ಸಮಸ್ಯೆಯಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗುವುದು ಇದರಿಂದ ತಪ್ಪುತ್ತದೆ. ತೋಟ, ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ಗಳ ಬದಲಾವಣೆಗೂ ಮುಂದಾಗಲಾಗುವುದು ಎಂದರು.
೩ ಕಡೆಗಳಲ್ಲಿ ವಿದ್ಯುತ್ ಉಪಕೇಂದ್ರ
ಮಾದಾಪುರ, ಮೂರ್ನಾಡು, ಹುದಿಕೇರಿಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಮುಂದಾಗಲಾಗಿದೆ ಎಂದು ರಮೇಶ್ ಮಾಹಿತಿ ಒದಗಿಸಿದರು.
ಮಾದಾಪುರ ಭಾಗದ ಗ್ರಾಮಗಳಲ್ಲಿ ಹೆಚ್ಚಿನ ವಿದ್ಯುತ್ ಸಮಸ್ಯೆ ಮನಗಂಡು ಮಾದಾಪುರದಲ್ಲಿ ಉಪಕೇಂದ್ರ ಸ್ಥಾಪನೆಗೆ ಮುಂದಾಗಲಾಗಿದೆ. ಇದರಿಂದ ಹಲವು ಗ್ರಾಮಗಳಲ್ಲಿ ಉಂಟಾಗುವ ವಿದ್ಯುತ್ ಸಮಸ್ಯೆ ದೂರವಾಗುವ ವಿಶ್ವಾಸವಿದೆ. ಒಂದು ವಾರದೊಳಗೆ ಈ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದರು.
ಇದರೊAದಿಗೆ ಮೂರ್ನಾಡು, ಹುದಿಕೇರಿಯಲ್ಲಿ ಉಪಕೇಂದ್ರ ಕಾಮಗಾರಿ ಪ್ರಾರಂಭವಾಗಿದೆ. ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಪೆರಾಜೆಯಲ್ಲಿ ೩೩ ಕೆ.ವಿ. ಕೇಂದ್ರ ಆರಂಭಕ್ಕೆ ಟೆಂಡರ್ ಆಹ್ವಾನಿಸಲಾಗುವುದು. ಜಾಗದ ತೊಡಕು ಇರುವ ಹಿನ್ನೆಲೆ ೧೧ ಕೆವಿ ಕೆಲಸ ಸ್ಥಗಿತಗೊಂಡಿದೆ. ಯಾವುದೇ ವಿದ್ಯುತ್ ಅವಘಡವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿರುತ್ತದೆ. ಸಮಸ್ಯೆ ಎದುರಾದಲ್ಲಿ ಟೋಲ್ ಫ್ರಿ ಸಹಾಯವಾಣಿ ಸಂಪರ್ಕಿಸುವAತೆ ಮನವಿ ಮಾಡಿದರು.
ರಾಜ್ಯದಲ್ಲಿ ೨,೫೦೦ ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸಲಾಗಿದೆ. ಆದಷ್ಟು ಬೇಗ ತರಬೇತಿಯೊಂದಿಗೆ ನೇಮಕ ಮಾಡಲಾಗುವುದು ಎಂದರು. ಇದೇ ಸಂದರ್ಭ ಲೈನ್ಮೆನ್ಗಳಿಗೆ ರೈನ್ ಕೋಟ್, ಗಂಬೂಟ್ ಸೇರಿದಂತೆ ಸುರಕ್ಷಾ ಪರಿಕರಗಳನ್ನು ರಮೇಶ್ ಅವರು ವಿತರಿಸಿದರು. ಗೋಷ್ಠಿಯಲ್ಲಿ ಅಧೀಕ್ಷಕ ಅಭಿಯಂತರ ಸೋಮಶೇಖರ್, ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ರಾಮಚಂದ್ರ, ಬೃಹತ್ ಕಾಮಗಾರಿಗಳ ವಿಭಾಗದ ಕಾರ್ಯಪಾಲಕ ಅಭಿಯಂತರ ಮಾದೇಶ್ ಹಾಜರಿದ್ದರು.