ಕುಶಾಲನಗರ, ಮೇ ೨೨: ಕರ್ನಾಟಕ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆರೋಪಿಸಿದ್ದಾರೆ.

ಕುಶಾಲನಗರದಲ್ಲಿ ಬಸವನಹಳ್ಳಿ ಸಮೀಪ ಕುಶಾಲನಗರ ಗೌಡ ಸಮಾಜದ ನೂತನ ಕಟ್ಟಡ ಸಂಕೀರ್ಣಕ್ಕೆ ಭೂಮಿಪೂಜೆ ನೆರವೇರಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಖಜಾನೆ ಲೂಟಿ ಮಾಡುವ ಕಾಯಕದಲ್ಲಿ ಸರ್ಕಾರ ತೊಡಗಿದೆ.

ಡಿ.ಕೆ. ಶಿವಕುಮಾರ್ ನಂತರದಲ್ಲಿ ಗೃಹಸಚಿವ ಪರಮೇಶ್ವರ ಕೂಡ ಹಗರಣದಲ್ಲಿ ಸಿಲುಕಿರುವುದು ಗೋಚರಿಸಿದೆ. ಇಡಿ ಮೂಲಕ ಅವರ ಸಂಸ್ಥೆಗಳಿಗೆ ದಾಳಿ ನಡೆದಿದೆ.

ಇಡಿ ಸ್ವತಂತ್ರವಾಗಿ ತನ್ನ ಕರ್ತವ್ಯ ಮಾಡುತ್ತಿದೆ. ಸದ್ಯದಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದ ಸದಾನಂದ ಗೌಡ ಅವರು, ಗೃಹ ಸಚಿವ ಪರಮೇಶ್ವರ್ ಅವರು ಕೆಲವು ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ಸ್ಪಷ್ಟವಾಗುತ್ತಿದೆ.

ಅಕ್ರಮ ಚಿನ್ನ ಸಾಗಾಣಿಕೆಯಲ್ಲಿ ಆರೋಪಿ ರನ್ಯಾ ನಡುವೆ ಸಂಸ್ಥೆಗಳ ಮೂಲಕ ನಡೆದಿರುವ ವ್ಯವಹಾರ ಸದ್ಯದಲ್ಲಿಯೇ ಕಾನೂನು ಚೌಕಟ್ಟಿನಲ್ಲಿ ವಿಚಾರಣೆಗೆ ಒಳಪಡಲಿದೆ ಎಂದರು.

ಸರಕಾರದ ಎರಡು ವರ್ಷಗಳ ಸಾಧನಾ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ ಬೆಂಗಳೂರಿನಲ್ಲಿ ನಡೆಯಬೇಕಾದ ಸಮಾವೇಶವನ್ನು ಹೊರಗಡೆ ಮಾಡಿರುವುದು ನಿಜಕ್ಕೂ ಸರಿಯಲ್ಲ. ಬೆಂಗಳೂರು ಸಂಪೂರ್ಣ ಮುಳುಗಿರುವ ಸಂದರ್ಭ ಸರ್ಕಾರ ಮೋಜು ಮಸ್ತಿ ಮಾಡಿದಂತೆ ಕಾಣುತ್ತಿದೆ ಎಂದರು.

ಬೆAಗಳೂರು ನಗರದಲ್ಲಿ ದೋಣಿಯ ಮೂಲಕ ಸಾಗಿ ತಮ್ಮ ಎರಡು ವರ್ಷಗಳ ಸಾಧನೆಯನ್ನು ತಿಳಿಸಬೇಕಾಗಿತ್ತು ಎಂದು ವ್ಯಂಗ್ಯವಾಡಿದ ಸದಾನಂದ ಗೌಡ ತಮ್ಮ ಸರ್ಕಾರದ ಸಂದರ್ಭ ೫,೦೦೦ ಕೋಟಿ ರೂಪಾಯಿಗಳ ವಿಶೇಷ ಅನುದಾನದ ಯೋಜನೆಯ ಮೂಲಕ ಬೆಂಗಳೂರಿನ ಮೂಲಭೂತ ವ್ಯವಸ್ಥೆಗೆ ಮೀಸಲಿರಿಸಿದ ಹಣವನ್ನು ಈ ಸರಕಾರ ಸದುಪಯೋಗಗೊಳಿಸಿಲ್ಲ. ಬೆಂಗಳೂರು ನಗರದ ೧.೫ ಕೋಟಿ ಜನರು ನೀರಿನಲ್ಲಿ ತೇಲಾಡುತ್ತಿರುವ ಸಂದರ್ಭ ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯಲ್ಲಿ ಎರಡು ವರ್ಷಗಳ ಸಾಧನಾ ಸಮಾವೇಶ ಮಾಡಿರುವುದು ಸರಿಯಲ್ಲ ಎಂದರು.