ಮಡಿಕೇರಿ, ಮೇ ೨೨: ಮಡಿಕೇರಿಯ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ಚಿನ್ನದ ಕಿರೀಟ ಸಮರ್ಪಣೆ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಇಂದು ಮುಂಜಾನೆ ಶ್ರೀ ಕೋಟೆ ಮಹಾಗಣಪತಿ ದೇವರಿಗೆ ಅಭಿಷೇಕ, ೨೧ ತೆಂಗಿನಕಾಯಿಗಳ ಗಣ ಹೋಮ, ೧೦ ಸಹಸ್ರ ದುರ್ವಾಂಕುರ, ಒಂದು ಸಹಸ್ರ ಎಕ್ಕ ಸಮರ್ಪಣೆ ಮತ್ತು ಪೂರ್ಣಾಹುತಿ ಜರುಗಿತು. ಮಹಾಮಂಗಳಾರತಿಯ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ತಾ.೨೧ ರಂದು ಸಂಜೆ ಭಜನೆ ಹಾಗೂ ವಿಶೇಷ ಪೂಜೆಯ ಮೂಲಕ ವಾರ್ಷಿಕೋತ್ಸವವನ್ನು ಆರಂಭಿಸಲಾಯಿತು. ಎರಡು ದಿನಗಳ ಪೂಜಾ ಕೈಂಕರ್ಯಗಳಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಅರ್ಚಕರುಗಳಾದ ಗಣಪತಿ ಭಟ್, ಆದರ್ಶ್, ರೋಶನ್, ಮಂಜುನಾಥ್ ಅವರುಗಳ ತಂಡ ಪೂಜಾ ಕೈಂಕರ್ಯ ನೆರವೇರಿಸಿತು.

ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಬಿ.ವಿ. ಅರವಿಂದ್, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯರುಗಳಾದ ಜಿ. ರಾಜೇಂದ್ರ, ಪ್ರಕಾಶ್ ಆಚಾರ್ಯ, ವಿಶಾಲ್ ನಂದಕುಮಾರ್, ನಗರಸಭಾ ಸದಸ್ಯೆ ಸವಿತಾ ರಾಕೇಶ್, ಸತ್ಯನಾರಾಯಣರಾವ್, ವಿ.ಎಂ. ರಾಜೇಶ್, ರಾಕೇಶ್ ಅಣ್ವೇಕರ್, ಸುಮೇಶ್, ಪ್ರದೀಪ್ ಮತ್ತಿತರ ಪ್ರಮುಖರು ಹಾಜರಿದ್ದರು.