ಮಡಿಕೇರಿ, ಮೇ ೨೨: ಗ್ರಾಮಗಳಲ್ಲಿ ಜ್ಞಾನದ ಕೇಂದ್ರ ಬಿಂದುವಾಗಿರುವ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರಿಗೆ ರಾಜ್ಯ ಹೈಕೋರ್ಟ್ನ ಆದೇಶದಂತೆ ಸರಿಯಾದ ರೀತಿಯಲ್ಲಿ ಕನಿಷ್ಟ ವೇತನ ನೀಡದೆ ಎರಡು ಹಂತಗಳಲ್ಲಿ ಕನಿಷ್ಟ ವೇತನ ನೀಡುವಂತೆ ಆದೇಶ ಹೊರಡಿಸಿರುವುದು, ಸಿಬ್ಬಂದಿಗಳ ನಡುವಿನ ತಾರತಮ್ಯ, ದುಡಿಮೆಗೆ ತಕ್ಕ ಪ್ರತಿಫಲ ನೀಡುವಲ್ಲಿ ವಿಫಲತೆ, ಗ್ರಂಥಾಲಯ ಕರದಿಂದ ವೇತನ ಪಾವತಿ ಮಾಡುವಲ್ಲಿ ವಿಳಂಬ - ಸೇರಿದಂತೆ ಎಲ್ಲಾ ಹಂತಗಳಲ್ಲೂ ಮೇಲ್ವಿಚಾರಕರನ್ನು ಸದಾ ನಿರ್ಲಕ್ಷಿಸುತ್ತಿರುವ ಸರ್ಕಾರದ ಧೋರಣೆಯ ವಿರುದ್ಧ ತಾ. ೨೬ ರಂದು ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಗ್ರಂಥಾಲಯ ನೌಕರರ ಸಂಘದ ರಾಜ್ಯಾಧ್ಯಕ್ಷ ಸತ್ಯನಾರಾಯಣ ಮತ್ತು ಪ್ರಧಾನ ಕಾರ್ಯದರ್ಶಿ ಮೋಹನ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಇದಕ್ಕೆ ಕೊಡಗು ಜಿಲ್ಲಾ ಗ್ರಾ.ಪಂ. ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರ ಸಂಘ ಬೆಂಬಲ ನೀಡುವುದಾಗಿ ಪ್ರಕಟಣೆ ತಿಳಿಸಿದೆ. ಉಚ್ಛ ನ್ಯಾಯಾಲಯವು ಮೇಲ್ವಿಚಾರಕರಿಗೆ ಕನಿಷ್ಟ ವೇತನವನ್ನು ಪಾವತಿ ಮಾಡಬೇಕೆಂದು ೨೦೨೨ ರ ಏಪ್ರಿಲ್ ೨೧ ರಂದು ಆದೇಶ ಹೊರಡಿಸಿತ್ತಾದರೂ ಈ ಆದೇಶವನ್ನು ಸರ್ಕಾರವು ಅಚ್ಚುಕಟ್ಟಾಗಿ ಪಾಲಿಸದೇ ಇದೀಗ ೩ ವರ್ಷಗಳು ಕಳೆದಿದ್ದು, ಹೈಕೋರ್ಟ್ನ ಆದೇಶವನ್ನೇ ಗಾಳಿಗೆ ತೂರಿರುವ ಹಿನ್ನೆಲೆಯಲ್ಲಿ ಇದೀಗ ಮೇಲ್ವಿಚಾರಕರು ತಮ್ಮ ಹಕ್ಕಿಗಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಹಿನ್ನೆಲೆ ಮುಷ್ಕರ ನಡೆಸುತ್ತಿದ್ದು, ಪ್ರಮುಖ ಬೇಡಿಕೆಗಳಾದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರೆಂದು ಆದೇಶ ಹೊರಡಿಸಿ, ಒಂದೇ ನಿಯಮಾವಳಿ ರೂಪಿಸುವುದು, ಇಲ್ಲವಾದರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳನ್ನು ಮಾತೃ ಇಲಾಖೆಗೆ (ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ) ವರ್ಗಾವಣೆ ಮಾಡುವುದು, ಸಂಪೂರ್ಣ ಕನಿಷ್ಟ ವೇತನವನ್ನು ಪ್ರತಿ ತಿಂಗಳ ೫ನೇ ತಾರೀಖಿನ ಒಳಗಾಗಿ ನೇರವಾಗಿ ಮೇಲ್ವಿಚಾರಕರ ಖಾತೆಗೆ ಜಮಾ ಮಾಡುವಂತೆ ಆದೇಶ ಹೊರಡಿಸುವುದು, ಮೇಲ್ವಿಚಾರಕರಿಗೆ ನೀಡಬೇಕಿರುವ ಈ ಹಿಂದಿನ ಕನಿಷ್ಟ ವೇತನದಲ್ಲಿನ ವ್ಯತ್ಯಾಸದ ಬಾಕಿ ವೇತನವನ್ನು ಜಮಾ ಮಾಡಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದು, ಗ್ರಾಚ್ಯುಟಿ ಮತ್ತು ನಿವೃತ್ತಿ ಸೌಲಭ್ಯ ಕಡ್ಡಾಯ ಮಾಡುವಂತೆ ಆಗ್ರಹಿಸಿ ಪ್ರತಿಭಟಿಸಲಾಗುವುದು.