ಮಡಿಕೇರಿ, ಮೇ ೨೨: ಅಮೃತ್ತಿ ಯುವ ಮೊಗೇರ, ಅಮ್ಮತಿ ಹೋಬಳಿ ಸಿದ್ದಾಪುರ ಇವರ ವತಿಯಿಂದ ಮಡಿಕೇರಿಯಲ್ಲಿ ನಡೆದ ೩ನೇ ವರ್ಷದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ಡೋಮಿನೇಟರ್ ಇಲೆವೆನ್ ಮಾರ್ಗೋಳ್ಳಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಫ್ರೆಂಡ್ಸ್ ಇಲೆವೆನ್ ಉಡುಪಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮೊಗೇರ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ೩೬ ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣೆಸಾಡಿದವು. ಮೊದಲ ಸೆಮಿಫೈನಲ್ ಪಂದ್ಯವು ಡೋಮಿನೇಟರ್ ಇಲೆವೆನ್ ಮಾರ್ಗೋಲ್ಲಿ ಹಾಗೂ ಶ್ರೀ ವಿನಾಯಕ ಮಕ್ಕಂದೂರು ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಡೋಮಿನೇಟರ್ ಇಲೆವೆನ್ ಮಾರ್ಗೋಲ್ಲಿ ತಂಡ ೨೨ ರನ್ಗಳ ಭರ್ಜರಿ ಜಯದೊಂದಿಗೆ ಫೈನಲ್ಗೆ ಲಗ್ಗೆಇಟ್ಟಿತು.
ದ್ವಿತೀಯ ಸೆಮಿಫೈನಲ್ ಪಂದ್ಯವು ಫ್ರೆಂಡ್ಸ್ ಇಲೆವೆನ್ ಉಡುಪಿ ಹಾಗೂ ಟೀಂ ೧೮ ಚಿಕ್ಕಮಗಳೂರು ನಡುವೆ ನಡೆದ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ ಉಡುಪಿ ತಂಡವು ೧೯ ರನ್ಗಳ ಜಯಸಾಧಿಸಿ ಫೈನಲ್ಗೆ ದ್ವಿತೀಯ ತಂಡವಾಗಿ ಅರ್ಹತೆ ಪಡೆದುಕೊಂಡಿತು. ಫೈನಲ್ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ ಉಡುಪಿ ವಿರುದ್ಧ ಡೋಮಿನೇಟರ್ ಇಲೆವೆನ್ ಮಾರ್ಗೋಳ್ಳಿ ತಂಡವು ೭ ವಿಕೆಟ್ಗಳ ಜಯಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಕ್ರೀಡಾಕೂಟದಲ್ಲಿ ಉತ್ತಮ ಬ್ಯಾಟ್ಸ್ಮನ್ ಕೆರೇಬಿಯನ್ ಸ್ಟಾರ್ ಸಕಲೇಶಪುರ ತಂಡದ ಲೋಹಿತ್ ಪಡೆದುಕೊಂಡರೆ, ಉತ್ತಮ ಆಲ್ರೌಂಡರ್ ಪ್ರಶಸ್ತಿಯನ್ನು ಶ್ರೀ ವಿನಾಯಕ ಮಕ್ಕಂದೂರು ತಂಡದ ಪ್ರವೀಣ್ ಪಡೆದುಕೊಂಡರು, ಉತ್ತಮ ಬೌಲರ್ ಪ್ರಶಸ್ತಿಯನ್ನು ಟೀಂ ೧೮ ಚಿಕ್ಕಮಗಳೂರು ತಂಡದ ಜಗದೀಶ್ ಪಡೆದರೆ ಕ್ರೀಡಾಕೂಟದ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಫ್ರೆಂಡ್ಸ್ ಇಲೆವೆನ್ ಉಡುಪಿ ತಂಡದ ವಿವೇಕ್ ಪಡೆದುಕೊಂಡರು.
ಅಮೃತ ಯುವ ಮೊಗೇರ ವತಿಯಿಂದ ಮಹಿಳೆಯರಿಗೆ ಥ್ರೋಬಾಲ್ ಹಾಗೂ ಹಗ್ಗಜಗ್ಗಾಟ ಪಂದ್ಯ ಏರ್ಪಡಿಸಲಾಗಿತ್ತು. ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ನಡೆಸಿದ ಥ್ರೋಬಾಲ್ ಪಂದ್ಯಾಟದಲ್ಲಿ ಸ್ವಾಮಿ ಕೊರಗಜ್ಜ ಮುಪ್ಪೆರಿಯ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಅನುಷಾ ನಾಯಕತ್ವದ ಟೀಂ ಕಾರ್ಣಿಕ ಕೊಡಗು ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಲೈಟಿಂಗ್ ಸ್ಟೆçöÊಕರ್ಸ್ ಚೆಯ್ಯಂಡಾಣೆ ಚಾಂಪಿಯನ್ ಆದರೆ, ಅಮೃತ ಮೊಗೇರ ಸಿದ್ದಾಪುರ ರನ್ನರ್ಸ್ ಸ್ಥಾನ ಪಡೆದುಕೊಂಡಿತು.
ಪುರುಷರ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಹರಿಕಾ ಫ್ರೆಂಡ್ಸ್ ಚೆಯ್ಯಂಡಾಣೆ ವಿನ್ನರ್ಸ್ ಸ್ಥಾನ ಪಡೆದರೆ, ಕಾಟೇರಮ್ಮ ಕ್ರಿಕೆಟರ್ಸ್ ಸೋಮವಾರಪೇಟೆ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಅಮೃತ ಯುವ ಮೊಗೇರ ಸೇವಾ ಸಮಾಜ ಅಮ್ಮತ್ತಿ-ಸಿದ್ದಾಪುರ ಹೋಬಳಿ ಅಧ್ಯಕ್ಷ ರಾಮು ಪಿ.ಎನ್. ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಪಾಲ್ಗೊಂಡು ಮಾತನಾಡಿ, ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ.
ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಉತ್ತಮ ಬೆಳವಣಿಗೆ, ಸಮುದಾಯಗಳ ಸಾಮರಸ್ಯಕ್ಕೆ ಕಾರಣವಾಗುತ್ತದೆ ಎಂದರು. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್ ಮಾತನಾಡಿ, ಕ್ರೀಡೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡುವುದರ ಜೊತೆಗೆ ನಮ್ಮ ಸಮುದಾಯದ ಜನಾಂಗದ ಸಂಬAಧ ಬೆಸೆಯಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಭ ಮೊಗೇರ ಸಮಾಜಕ್ಕೆ ಕೊಡಗಿನಲ್ಲಿ ಒಂದು ಸಮುದಾಯ ಭವನದ ಅವಶ್ಯಕತೆ ಇದೆ. ಮೊಗೇರ ಸಮಾಜದ ಕಾರ್ಯಕ್ರಮಕ್ಕೆ ಸಮುದಾಯ ಭವನವನ್ನು ನಿರ್ಮಿಸಿಕೊಡುವಂತೆ ಸಮಾಜದ ಪ್ರಮುಖರು ಶಾಸಕರಲ್ಲಿ ಮನವಿ ಮಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಪಿ.ಎಂ. ರವಿ ಮಾತನಾಡಿ, ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ ಮನೋಭಾವ ಬರುತ್ತದೆ. ಪ್ರತಿನಿತ್ಯ ಅತ್ಯಂತ ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕ್ರೀಡಾಕೂಟದಲ್ಲಿ ೧೦ನೇ ತರಗತಿಯಲ್ಲಿ ಶೇ. ೬೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಅಂಕಿತ ಸೋಮವಾರಪೇಟೆ, ಚಂಪಕ್ ಮರಗೋಡು, ಕೃತಿಕಾ ಎಂ.ಎಸ್. ಅಮ್ಮತ್ತಿ, ದಿವ್ಯ, ಅನುಷಾ ಮಡಿಕೇರಿ ಶ್ರೇಯ, ಸುಪ್ರೀತ್, ಚೈತ್ರ ಅವರಿಗೆ ಮೊಗೇರ ಸೇವಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಕ್ರೀಡಾಕೂಟದ ತೀರ್ಪುಗಾರರಾಗಿ ರಮೇಶ್ ಹೆಬ್ಬೆಟ್ಟಗೇರಿ, ಶ್ಯಾಮ್, ಪ್ರಕಾಶ್, ಮಣಿ ಕಾರ್ಯನಿರ್ವಹಿಸಿದರೆ, ಸ್ಕೋರರ್ ಆಗಿ ಧನ್ಯ, ದಿವ್ಯ ಹಾಗೂ ಚಿಂತನ ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಗಣೇಶ್ ಪ್ರಿನ್ಸಿ, ಮಂಜು ಬಬ್ಳಿ, ರಮೇಶ್ ಹೆಬ್ಬೆಟ್ಟಗೇರಿ ನಡೆಸಿಕೊಟ್ಟರು. ಬಹುಮಾನ ವಿತರಣೆ ಸಂದರ್ಭ ಅಮೃತ ಯುವ ಮೊಗೇರ ಸಮಾಜದ ಆಯೋಜಕರು ಉಪಸ್ಥಿತರಿದ್ದರು.