ಪೊನ್ನಂಪೇಟೆ, ಮೇ ೧೬: ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿ ಪಡೆದಿರುವ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಬೋಡ್ ನಮ್ಮೆ ತಾ. ೧೭ ಹಾಗೂ ೧೮ ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತಿಹಾಸ ಪ್ರಸಿದ್ಧ ಹಳ್ಳಿಗಟ್ಟು ಬೋಡ್ ನಮ್ಮೆ ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿ ಹೊಂದಿದ್ದು, ಕಲ್ಲಿನ ಆನೆ ದೇವಸ್ಥಾನಕ್ಕೆ ಮುಖಮಾಡಿ ನಿಂತಿರುವ ದಕ್ಷಿಣ ಭಾರತದ ಏಕೈಕ ದೇವಸ್ಥಾನ ಕೂಡ ಇದಾಗಿದೆ. ತಾ. ೧೭ರಂದು ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಪೂಜೆ ಹಾಗೂ ರಾತ್ರಿ ಮನೆಕಳಿ ನಡೆಯಲಿದ್ದು, ತಾ. ೧೮ ರಂದು ಸಂಜೆ ಕುದುರೆ, ಮೊಗ ಹಾಗೂ ಪರಸ್ಪರ ಕೆಸರಿನ ಎರಚಾಟ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ತಾ. ೧೭ ರಂದು ಬೆಳಿಗ್ಗೆ ಹಬ್ಬದ ವಿವಿಧ ಆಚರಣೆಗಳನ್ನು ನಡೆಸುವ ಮೂಲನಿವಾಸಿ ಪಣಿಕ ಜನಾಂಗದ ವ್ಯಕ್ತಿ ಊರು ತಕ್ಕರಾದ ಚಮ್ಮಟ್ಟೀರ ಕುಟುಂಬದ ಐನ್‌ಮನೆಗೆ ಆಗಮಿಸುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯುತ್ತದೆ. ನಂತರ ಮಧ್ಯಾಹ್ನ ೨ ರಿಂದ ೨.೩೦ಕ್ಕೆ ಚಮ್ಮಟ್ಟೀರ ಐನ್‌ಮನೆಯಿಂದ ಪೊಲವಪ್ಪ ತೆರೆ ಹೊರಟು ಮಚ್ಚಿಯಂಡ ಐನ್‌ಮನೆ ಸಮೀಪದ ಅಂಬಲ, ಕೂಕಂಡ ಹಾಗೂ ಚೇಂದಿಮಾಡ ಕುಟುಂಬಸ್ಥರ ಅಂಬಲದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಯುತವೆ. ರಾತ್ರಿ ೧೧ ಗಂಟೆಗೆ ಚಮ್ಮಟ್ಟೀರ ಕುಟುಂಬದ ಐನ್‌ಮನೆಯಿಂದ ವಿವಿಧ ವೇಷದಾರಿಗಳು ಸಾಂಪ್ರದಾಯಿಕ ಬೋಡ್ ನಮ್ಮೆ, ಡೋಲು ಹಾಗೂ ಹಾಡಿನೊಂದಿಗೆ ರಾತ್ರಿಯಿಡೀ ಊರಿನ ಮೂರು ಐನ್‌ಮನೆಗಳಿಗೆ ತೆರಳುತ್ತಾರೆ.

ತಾ. ೧೮ ರಂದು ಬೆಳಿಗ್ಗೆಯಿಂದಲೇ ಚಮ್ಮಟ್ಟೀರ ಹಾಗೂ ಮೂಕಳೇರ ಐನ್‌ಮನೆಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಸೇರಿದಂತೆ ಎರಡು ಐನ್ ಮನೆಗಳಲ್ಲಿ ತಲಾ ಒಂದೊAದು ಕುದುರೆ ಹಾಗೂ ಮೊಗಗಳ ಶೃಂಗಾರ ನಡೆಯುತ್ತದೆ. ಮಧ್ಯಾಹ್ನ ೨.೩೦ ರಿಂದ ೩ ಗಂಟೆ ಒಳಗೆ ಚಮ್ಮಟ್ಟೀರ ಐನ್‌ಮನೆಯಿಂದ ಒಂದು ಕುದುರೆ ಹಾಗೂ ಮೊಗ ಹೊರಟು ಶ್ರೀ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲ ಸೇರುತ್ತದೆ. ಇತ್ತ ಮೂಕಳೆರ ಐನ್‌ಮನೆಯಿಂದ ಒಂದು ಕುದುರೆ ಹಾಗೂ ಮೊಗ ಹೊರಟು ಸಂಜೆ ೪.೩೦ ರ ಸಮಯದಲ್ಲಿ ಶ್ರೀ ಭದ್ರಕಾಳಿ ದೇವಸ್ಥಾನ ಸಮೀಪದ ಅಂಬಲದಲ್ಲಿ ಸೇರಿ ಪರಸ್ಪರ ಕೆಸರು ಎರಚಾಡಿಕೊಳ್ಳುತ್ತಾರೆ. ಈ ಸಂದರ್ಭ ಮಹಿಳೆಯರಿಗೆ ಸೇರಿದಂತೆ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಅವರಿಗೆ ಮುಕ್ತವಾಗಿ ಕುಣಿಯಲು ಅವಕಾಶವಿದ್ದು, ಒಂದು ಬೆತ್ತದ ಕೋಲನ್ನು ನೀಡಲಾಗುತ್ತದೆ. ಅಂತಹವರಿಗೆ ಕೆಸರು ಎರಚುವಂತಿಲ್ಲ. ಪರಸ್ಪರ ಕೆಸರು ಎರೆಚಾಟದ ನಂತರ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ಹಬ್ಬ ಸಂಪನ್ನಗೊಳ್ಳುತ್ತದೆ ಎಂದು ಪ್ರವೀಣ್ ತಿಳಿಸಿದ್ದಾರೆ.