ಮಡಿಕೇರಿ, ಏ. ೨೭: ಹಾಕಿ ಇಂಡಿಯಾ ಸಂಸ್ಥೆಗೆ ೧೦೦ ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್‌ನಿಂದ ಈ ಸಂಭ್ರಮವನ್ನು ಆಚರಿಸಲಾಯಿತು. ಭಾರತೀಯ ಹಾಕಿ ರಂಗದ ದಿಗ್ಗಜ ಆಟಗಾರರನ್ನು ಗಾಲ್ಫ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಮತ್ತ ಮದ್ರಾಸ್ ಕ್ರಿಕೆಟ್ ಕ್ಲಬ್‌ಗಳ ಸಂಯುಕ್ತಾಶ್ರಯದಲ್ಲಿ ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ವಿಶಿಷ್ಟ ಕಾರ್ಯಕ್ರಮ ಆಯೋಜಿತವಾಗಿತ್ತು.

ಭಾರತೀಯ ಹಾಕಿ ಕ್ರೀಡೆಗೆ ಶತಮಾನೋತ್ಸವದ ಸಂಭ್ರಮವನ್ನು ಹಾಕಿ ದಿಗ್ಗಜರಿಗೆ ಸನ್ಮಾನದ ಗೌರವಾರ್ಪಣೆ ಮೂಲಕ ಆಚರಿ¸ Àಲಾಯಿತು. ಮಾಳೆಯಂಡ ಮುತ್ತಪ್ಪ, ಅಂಜಪರವAಡ ಡಾ. ಬಿ. ಸುಬ್ಬಯ್ಯ, ಮುಕ್ಕಾಟಿರ ತಿಮ್ಮಯ್ಯ ಅಪ್ಪಯ್ಯ, ಬಾಳೆಯಡ ಪೂಣಚ್ಚ, ಬುಟ್ಟಿಯಂಡ ಚಂಗಪ್ಪ, ಮುಕ್ಕಾಟಿರ ವಿನೋದ್ ಚಿಣ್ಣಪ್ಪ, ಕೂತಂಡ ಪೂಣಚ್ಚ, ಪೈಕೆರ ಕಾಳಯ್ಯ, ಮನೆಯಪಂಡ ಸೋಮಯ್ಯ, ಸಿ.ಎಸ್. ಪೂಣಚ್ಚ, ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಕೆ. ಸುಬ್ರಮಣಿ, ಬಿ.ಪಿ. ಗೋವಿಂದ, ಮೊಹಮ್ಮದ್ ರಿಯಾಜ್, ಮತ್ತು ಪದ್ಮಶ್ರೀ ವಾಸುದೇವನ್ ಭಾಸ್ಕರನ್ ಅವರನ್ನು ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಅಧ್ಯಕ್ಷ ಐಚೆಟ್ಟಿರ ಅನಿಲ್, ಗೌರವ ಕಾರ್ಯದರ್ಶಿ ಕೊಂಗೇಟಿರ ಹರೀಶ್ ಅಪ್ಪಣ್ಣ, ಮದ್ರಾಸ್ ಕ್ರಿಕೆಟ್ ಕ್ಲಬ್‌ನ ಗೌರವ ಕಾರ್ಯದರ್ಶಿ ನಿರಂಜನ್ ಮುದಲಿಯಾರ್, ಕ್ರಿಕೆಟ್ ಕ್ಲಬ್‌ನ ಹಾಕಿ ಕ್ರೀಡಾ ಸಮಿತಿ ಅಧ್ಯಕ್ಷ ರಾಜೀವ್ ರೆಡ್ಡಿ ಹಾಜರಿದ್ದರು.

ಈ ಸಂದರ್ಭ ಮಾತನಾಡಿದ ಐಚೆಟ್ಟಿರ ಅನಿಲ್, ಮದ್ರಾಸ್ ಕ್ರಿಕೆಟ್ ಕ್ಲಬ್ ಕೂಡ ಶತಮಾನೋತ್ಸವ ಪೂರೈಸುತ್ತಿದೆ. ಇದೇ ಸಂದರ್ಭ ಭಾರತೀಯ ಹಾಕಿಗೆ ಕೂಡ ಶತಮಾನ ಭರ್ತಿಯಾಗುತ್ತಿರುವುದು ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ವಿಚಾರ ಎಂದರು. ಸನ್ಮಾನಿತರ ಪರವಾಗಿ ಮಾತನಾಡಿದ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಕೆ. ಸುಬ್ರಮಣಿ, ಭಾರತ ಹಾಕಿಗೆ ಚಿನ್ನದ ಪದಕ ದೊರಕದೇ ೫೦ ವರ್ಷಗಳೇ ಆಗಿವೆ. ಯುವ ಕ್ರೀಡಾಪಟುಗಳು ಮತ್ತಷ್ಟು ಚೈತನ್ಯದೊಂದಿಗೆ ಭಾರತಕ್ಕೆ ಸ್ವರ್ಣ ಪದಕ ದೊರಕಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದರು.

ಕಾರ್ಯಕ್ರಮವನ್ನು ಐಚೆಟ್ಟಿರ ರೋಹಿತ್ ನಿರೂಪಿಸಿದರು. ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಮತ್ತು ಮದ್ರಾಸ್ ಕ್ರಿಕೆಟ್ ಕ್ಲಬ್ ತಂಡಗಳ ನಡುವೆ ಮಡಿಕೇರಿಯ ಸಾಯಿ ಕ್ರೀಡಾ ನಿಲಯದ ಕೃತಕ ಹುಲ್ಲುಹಾಸಿನ ಮೈದಾನದಲ್ಲಿ ಪ್ರದರ್ಶನ ಹಾಕಿ ಪಂದ್ಯಾಟ ನಡೆಯಿತು.