ನಾಪೋಕ್ಲು, ಏ. ೭: ಇಲ್ಲಿನ ಇಂದಿರಾ ನಗರದಲ್ಲಿ ಶಾಸಕರ ಅನುದಾನದಿಂದ ಬಿಡುಗಡೆಯಾದ ೨೦ ಲಕ್ಷ ರೂ.ನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಬೇತು ಮುಖ್ಯ ರಸ್ತೆಯಿಂದ ಇಂದಿರಾನಗರಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಣದೆ ತೀವ್ರ ಹದಗೆಟ್ಟಿತ್ತು. ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಇಂದಿರಾನಗರದಲ್ಲಿ ೨೦ ಲಕ್ಷ ರೂ.ಶಾಸಕರ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ರಸ್ತೆ ನಿರ್ಮಾಣದಿಂದ ಸ್ಥಳೀಯ ಬಹಳಷ್ಟು ಸಮಸ್ಯೆ ಪರಿಹಾರವಾಗಿ ಪ್ರಯೋಜನವಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎ. ಇಸ್ಮಾಯಿಲ್, ಮಾತನಾಡಿ ಇಂದಿರಾ ನಗರದಲ್ಲಿ ೧೫೦-೨೦೦ ಮನೆಗಳಿದ್ದು ಇದರಲ್ಲಿ ಪರಿಶಿಷ್ಟ ಜಾತಿ ಹಾಗೂ ಅಲ್ಪ ಸಂಖ್ಯಾತರು ವಾಸಿಸುತ್ತಿರುವುದನ್ನು ಮನಗಂಡು ಶಾಸಕರ ಮುತುವರ್ಜಿ ಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ವಾಗಲಿದ್ದು ನಾಗರಿಕರಿಗೆ ಪ್ರಯೋಜನವಾಗಲಿದೆ.
ಈ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಶಾಸಕ ಎ.ಎಸ್. ಪೊನ್ನಣ್ಣನವರು ಉದ್ಘಾಟನೆಗೊಳಿಸಲಿದ್ದಾರೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಂಗAಡ ಶಶಿ ಮಂದಣ್ಣ, ಕಾಂಗ್ರೆಸ್ ವಲಯ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಚೇಟಿರ ಕುಸು ಕುಶಾಲಪ್ಪ, ಸದಸ್ಯ ಮೊಹಮ್ಮದ್ ಕುರೈಸಿ, ಜಿಲ್ಲಾ ಕಾಂಗ್ರೆಸ್ ಉಪ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.