ಮಡಿಕೇರಿ: ಸರ್ವಧರ್ಮ ಸೌಹಾರ್ದ ಇಫ್ತಾರ್ ಕೂಟಗಳಿಂದ ದೇಶದ ಭಾವೈಕ್ಯತೆಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ದೊರೆಯಲಿದೆ ಎಂದು ಮರ್ಕಂಜದ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ಧಪುರುಷಮಠದ ಧರ್ಮದರ್ಶಿ ಹಾಗೂ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಮುಖ್ಯ ಕಾರ್ಯದರ್ಶಿ ರಾಜೇಶ್‌ನಾಥ್ ಜಿ ಹೇಳಿದರು.

ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ೨೦ನೇ ವರ್ಷದ ಸರ್ವಧರ್ಮ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಎಲ್ಲಾ ಧರ್ಮದ ಗುರುಗಳು ಒಟ್ಟಾಗಿದ್ದರೆ ಸಮಾಜವು ಒಟ್ಟುಗೂಡುತ್ತದೆ. ಎಲ್ಲಾ ಧರ್ಮದ ಧರ್ಮ ಗ್ರಂಥಗಳು ಒಳ್ಳೆದನ್ನು ಬೋಧಿಸುತ್ತದೆ. ಅಮಲು ಪದಾರ್ಥದಿಂದಾಗಿ ಎಷ್ಟೋ ಮನೆಗಳು ಹಾಳಾಗುತ್ತಿದೆ, ಇಸ್ಲಾಂ ಧರ್ಮದಲ್ಲಿ ಅಮಲು ಪದಾರ್ಥ ಸೇವನೆಯನ್ನು ನಿಷೇಧಿಸಲಾಗಿದೆ, ನಾವುಗಳು ವ್ಯಸನಿಗಳನ್ನು ವ್ಯಸನದಿಂದ ಮುಕ್ತಗೊಳಿಸಿ ಅವರ ಮನೆಗಳನ್ನು ಬೆಳಗಿಸಬೇಕೆಂದರು.

ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ಸಮಾಜಸೇವೆ, ಶಿಕ್ಷಣಕ್ಕೆ ಮತ್ತು ಸೌಹಾರ್ದತೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು. ಸುಳ್ಯ ಬೀರಮಂಗಿಲ ಚರ್ಚ್ ಧರ್ಮಗುರು ವಿಕ್ಟರ್ ಡಿಸೊಜ ಮಾತನಾಡಿ, ನಾವೆಲ್ಲ ದೇವರ ಮಕ್ಕಳು, ಶಾಂತಿ, ಸಹಭಾಳ್ವೆಯಿಂದ ಬಾಳಬೇಕೆಂಬ ಸೌಹಾರ್ದತೆಯ ಸಂದೇಶ ನೀಡಿ ಎಲ್ಲಾ ಧರ್ಮದವರು ಸೇರಿ ಇಫ್ತಾರ್ ಕೂಟವನ್ನು ಆಚರಿಸಿ ಎಲ್ಲರು ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಉಂಟಾಗಿದೆ. ಕಳೆದ ೨೦ ವರ್ಷ ಸಂಸ್ಥೆ ನಡೆಸಿದ ಕಾರ್ಯಕ್ರಮ ಯಶಸ್ವಿಯಾಗಿದೆ. ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮ ಸಮಾಜದಲ್ಲಿ ನಡೆಯಲಿ ಎಂದು ಆಶಿಸಿದರು.

ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ ಮಾತನಾಡಿ, ತೆಕ್ಕಿಲ್ ಪ್ರತಿಷ್ಠಾನ ಶಾಹಿದ್ ಅವರ ನೇತೃತ್ವದಲ್ಲಿ ಕಳೆದ ೨೦ ವರ್ಷಗಳಿಂದ ನಿರಂತರವಾಗಿ ಎಲ್ಲಾ ಧರ್ಮದವರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.

ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ಟರ್ ಗೂನಡ್ಕ ಉದ್ಘಾಟಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅರೆಭಾಷೆ ಮತ್ತು ಸಾಂಸ್ಕöÈತಿಕ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಫ್ಪ ನಾಯ್ಕ್, ಫಾರೆಸ್ಟರ್ ಚಂದ್ರು, ಮೆಸ್ಕಾಂ ಇಲಾಖೆಯ ಅಧಿಕಾರಿಗಳು, ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್, ಸುಳ್ಯ ತಾಲೂಕು ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಷಂಶುದ್ದೀನ್, ಗೋಕುಲ್ ದಾಸ್, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ಲ್ಯಾಂಪ್ ಸೊಸೈಟಿ ನಿರ್ದೇಶಕ ಭವಾನಿಶಂಕರ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ತೀರ್ಥರಾಮ ಪರ್ನೋಜಿ ಉಳುವಾರು, ಹಾಜಿ ಇಬ್ರಾಹಿಂ ಕತ್ತರ್, ಟಿ.ಎಂ. ಜಾವೇದ್ ತೆಕ್ಕಿಲ್, ಟಿ.ಎಂ. ಶಮೀರ್ ತೆಕ್ಕಿಲ್, ನ್ಯಾಯವಾದಿ ಮೂಸ, ನಗರ ಪಂಚಾಯಿತಿ ಸದಸ್ಯ ಧೀರಾಕ್ರಾಸ್ತ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ನಗರ ಪಂಚಾಯಿತಿ ಸದಸ್ಯ ಸಿದ್ಧೀಕ್ ಕೊಕ್ಕೊ, ಸಂಪಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಕೆ. ಹನೀಫ್, ಸಂಯುಕ್ತ ಜಮಾಅತ್ ಖಜಾಂಚಿ ಹಮೀದ್ ಹಾಜಿ ಸುಳ್ಯ, ಕೆ.ಆರ್. ಪದ್ಮನಾಭ, ದಿನಕರ ಸಣ್ಣಮನೆ, ಬದುರುದ್ಧೀನ್ ಪಠೇಲ್, ಸೇರಿದಂತೆ ಸರ್ವಧರ್ಮದ ಅನೇಕ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರುಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.