ಐಗೂರು, ಮಾ. ೧೭: ಕಳೆದ ಮಳೆಗಾಲದಲ್ಲಿ ಐಗೂರಿನ ಜೋರನ ಹೊಳೆಯು ತುಂಬಿ ಹರಿದಾಗ ಸಂಕಷ್ಟಕ್ಕೀಡಾದ ಗ್ರಾಮಸ್ಥರು ವರುಣದೇವನಲ್ಲಿ ಮಳೆ ನಿಲ್ಲುವಂತೆ ಪ್ರಾರ್ಥಿಸಿದರೆ, ಈಗ ಪರಿಸ್ಥಿತಿ ಬದಲಾಗಿದೆ. ಚೋರನ ಹೊಳೆಯಲ್ಲಿ ನೀರು ಬತ್ತಿ ಹೋಗಿದ್ದು, ಅದೇ ಗ್ರಾಮಸ್ಥರು ಮಳೆಯ ಸಿಂಚನಕ್ಕಾಗಿ ವರುಣದೇವನಲ್ಲಿ ಪ್ರಾರ್ಥಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಮಳೆಯ ಸಿಂಚನವಾದರೆ ಆರ್ಥಿಕ ಮುಗ್ಗಟ್ಟಿನಲ್ಲಿರುವ ಬೆಳೆಗಾರರು ಖರ್ಚು ವೆಚ್ಚಗಳಿಂದ ಪಾರಾಗಬಹುದು. ಚೋರನ ಹೊಳೆಯ ಐಗೂರು, ಎಡವಾರೆ ಭಾಗದಲ್ಲಿ ನೀರಿನ ಒಳ ಹರಿವು ಇಲ್ಲದೆ ಬರೀ ಕಲ್ಲು ಬಂಡೆಗಳೇ ಕಾಣುತ್ತಿದೆ. ಹಸಿರಿನಿಂದ ಕೂಡಿದ ಗ್ರಾಮದಲ್ಲಿ ಒಣಗಿದ ತರಗೆಲೆಗಳು ಗಾಳಿಯಲ್ಲಿ ಹಾರಾಡುತ್ತಿದೆ. ಜಾನುವಾರುಗಳು ಮೇವಿಲ್ಲದೆ ಒಣಗಿದ ಕಡ್ಡಿಗಳನ್ನು ತಿನ್ನುತ್ತಿದೆ. ಮರಗಳಿಲ್ಲದ ಜಾಗದಲ್ಲಿ ಕೆಲಸ ಮಾಡುವ ಕಾರ್ಮಿಕರು ನೆತ್ತಿ ಸುಡುವ ಬಿಸಿಲಿನ ಬೇಗೆಯಲ್ಲಿ ಬೆಂದು ಪಕ್ಕದಲ್ಲಿರುವ ನೀರಿಲ್ಲದ ಕೊಳವೆ ಬಾವಿಯ ಕೈ ಪಂಪುಗಳನ್ನು ಆಡಿಸುತ್ತಿದ್ದಾರೆ. ಯಡವನಾಡು ಮೀಸಲು ಅರಣ್ಯದೊಳಗಿದ್ದ ಕೆರೆಕಟ್ಟೆಗಳಲ್ಲಿ ನೀರು ಒಣಗಿ ಹೋಗಿದ್ದು, ಕಾಡಾನೆಗಳು ನೀರು ಮತ್ತು ಆಹಾರವನ್ನು ಅರಸಿಕೊಂಡು ಗ್ರಾಮದೊಳಗೆ ಲಗ್ಗೆಯಿಡಲು ಪ್ರಾರಂಭಿಸಿದೆ. ಸಕಾಲಕ್ಕೆ ಮಳೆ ಬಾರದಿದ್ದಲ್ಲಿ ಒಂದು ಭಾಗದಿಂದ ಕುಡಿಯುವ ನೀರಿಗೆ ಹಾಹಾಕಾರ ಶುರುವಾದರೆ, ಇನ್ನೊಂದು ಭಾಗದಿಂದ ಗ್ರಾಮದೊಳಗೆ ಲಗ್ಗೆಯಿಡುವ ಕಾಡಾನೆಗಳ ಉಪಟಳವನ್ನು ಗ್ರಾಮಸ್ಥರು ಎದುರಿಸಬೇಕಾದಿತು. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಸಂಚಾಕಾರವಿಲ್ಲದಿದ್ದರೂ, ಮಳೆ ಬಾರದೆ ಇದೇ ಪರಿಸ್ಥಿತಿ ಮುಂದುವರಿದರೆ ಐಗೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಸಂಚಕಾರ ಎದುರಾಗಬಹುದು.