ಸೋಮವಾರಪೇಟೆ, ಏ. ೨೩: ಗ್ರಾಮೀಣ ಪ್ರದೇಶದ ಜನಪದದ ಪ್ರಮುಖ ಅಂಗವಾದ ಸುಗ್ಗಿ ಉತ್ಸವಗಳು ಮಲೆನಾಡು ಪ್ರದೇಶದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಮಯ ಸನ್ನಿಹಿತವಾಗುತ್ತಿರುವಾಗಲೇ ಕೃಷಿ ಕಾರ್ಯಗಳಿಗೆ ಯಾವದೇ ತೊಂದರೆಯಾಗಬಾರದು, ಗ್ರಾಮ ಸುಭೀಕ್ಷೆಯಿಂದಿರಬೇಕು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮ ದೇವರಿಗೆ ಹಾಗೂ ಪ್ರಕೃತಿ ದೇವಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವಿಶಿಷ್ಟ ಹಬ್ಬವಾದ ಸುಗ್ಗಿ ಉತ್ಸವಗಳು ತಾಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಶ್ರದ್ಧಾಭಕ್ತಿಯಿಂದ ಇಂದಿಗೂ ಅನೂಚಾನವಾಗಿ ಜರುಗುತ್ತಿವೆ.

ಮಲೆನಾಡಿನ ಪ್ರದೇಶವಾದ ಪುಷ್ಪಗಿರಿ ಬೆಟ್ಟಶ್ರೇಣಿಯ ತಪ್ಪಲಲ್ಲಿರುವ ಗ್ರಾಮಗಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಕಂಡುಬರುತ್ತಿದೆ. ಈ ವ್ಯಾಪ್ತಿಯ ಗ್ರಾಮಗಳ ಗ್ರಾಮದೇವತೆಯಾದ ಸಬ್ಬಮ್ಮ ದೇವಿಗೆ ಊರಿನ ಎಲ್ಲರೂ ಒಟ್ಟುಸೇರಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಆಚರಣೆ ತಲೆತಲಾಂತರ ದಿಂದ ನಡೆದುಕೊಂಡು ಬಂದಿದ್ದು ಈ ಸಂದರ್ಭ ಗ್ರಾಮದ ಹೊರಭಾಗಗಳಲ್ಲಿ ನೆಲೆಸಿರುವ ಮಂದಿಯೂ ಗ್ರಾಮಕ್ಕೆ ಆಗಮಿಸುವ ಹಿನ್ನೆಲೆ ಇಡೀ ಗ್ರಾಮ ಸಂಭ್ರಮದಲ್ಲಿರುತ್ತದೆ.

ಸುಗ್ಗಿ ಉತ್ಸವ ಪ್ರಾರಂಭ ವಾಗುತ್ತಿದ್ದಂತೆ ಗ್ರಾಮದ ಜನರ ಮನೆಗಳಲ್ಲಿ ಗ್ರಾಮ ದೇವತೆಗಳ ಪೂಜೆಗಳು ನಡೆಯುತ್ತವೆ. ಗ್ರಾಮದಲ್ಲಿ ರೋಗರುಜಿನಗಳು ಬರದಂತೆ, ಮುಂದೆ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ನಡೆದು ಸಮೃದ್ಧ ಫಸಲು ಕೈಸೇರುವದಕ್ಕೆ ಗ್ರಾಮ ದೇವತೆಗಳು ಹರಸಬೇಕೆಂದು ಪ್ರಾರ್ಥನೆ ಮಾಡುತ್ತಾರೆ. ಸುಗ್ಗಿ ಉತ್ಸವ ಪ್ರಾರಂಭದ ದಿನದಿಂದ ‘ಸುಗ್ಗಿ ಸಾರು’ ಎಂಬ ಕಟ್ಟುನಿಟ್ಟಿನ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. ಉತ್ಸವದ ೧೫ ದಿನಗಳಲ್ಲಿ ಹಸಿ ಮರ ಕಡಿಯುವುದು, ಒಣಗಿದ ಗಿಡ ಬಳ್ಳಿಗಳನ್ನು ಮುರಿಯದಂತೆ ಎಚ್ಚರ ವಹಿಸುತ್ತಾರೆ. ಹಗಲು ವೇಳೆ ನೆಂಟರಿಷ್ಟರು ಮನೆ ಸೇರದಂತೆ ನಿರ್ಬಂಧ ವಿಧಿಸುತ್ತಾರೆ. ನಕ್ಷತ್ರಗಳು ಕಂಡ ನಂತರವೇ ಮನೆಯೊಳಕ್ಕೆ ಬರಮಾಡಿಕೊಳ್ಳುತ್ತಾರೆ. ಹಗಲಿನ ವೇಳೆ ಹೊರಗಡೆಯಿಂದ ಆಹಾರ ಸಾಮಗ್ರಿಗಳನ್ನು ಖರೀದಿಸುವಂತಿಲ್ಲ. ಇಂತಹ ಕಟ್ಟುಪಾಡುಗಳು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸುಗ್ಗಿ ಸಂದರ್ಭ ಚಾಲ್ತಿಯಲ್ಲಿರುತ್ತವೆ.

ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ (ಲಕ್ಷಿö್ಮÃ) ಉತ್ಸವ ಎಂದೇ ಹೆಸರಾಗಿರುವ ನಗರಳ್ಳಿ ಸುಗ್ಗಿ ಹಲವು ವೈಶಿಷ್ಟö್ಯಗಳೊಂದಿಗೆ ನೆರವೇರುತ್ತದೆ. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಪಕ್ಕದ ಸಕಲೇಶಪುರ ತಾಲೂಕಿನ ಓಡಳ್ಳಿ ಸೇರಿದಂತೆ ಒಟ್ಟು ೧೮ ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿಕಾಲದಿಂದ ನಡೆದುಬಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಸಮೀಪದ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಎಂದೇ ಖ್ಯಾತಿಯಾಗಿರುವ ನಗರಳ್ಳಿ ಸುಗ್ಗಿ ಉತ್ಸವವು ಇದೆ ತಿಂಗಳ ೨೯ ರಂದು ನಗರಳ್ಳಿಯ ಸುಗ್ಗಿ ಬನದಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಸುಗ್ಗಿ ಆಚರಣೆಯ ವಿಧಿ ವಿಧಾನದಂತೆ ಸಬ್ಬಮ್ಮ ದೇವಿಯ ತವರೂರೆಂದು ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿಗೆ ಚಾಲನೆ ನೀಡಲಾಗಿದೆ.

ಅನಾದಿಕಾಲದಿಂದಲೂ ನಡೆದು ಕೊಂಡು ಬಂದAತೆ ಕೂತಿ ಗ್ರಾಮದ ಚಾವಾಡಿಕಟ್ಟೆಯಲ್ಲಿ ಗ್ರಾಮದ ಮನೆಗಳಲ್ಲಿರುವ ಬಂದೂಕುಗಳನ್ನು ತಂದಿಟ್ಟು ನಂತರ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು. ನಂತರ ದೇವರ ಕಟ್ಟೆಗೆ ಗ್ರಾಮಸ್ಥರು ಬಂದೂಕು ಹಿಡಿದು ಪ್ರದಕ್ಷಿಣೆ ಬಂದು ಬಂದೂಕಿನಿAದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಪದ್ಧತಿಯನ್ನು ಆಚರಿಸುವುದರೊಂದಿಗೆ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು.ಪ್ರಮುಖ ಸುಗ್ಗಿ ಆಚರಣೆಯು ಏಪ್ರಿಲ್-ಮೇ ತಿಂಗಳಲ್ಲಿ ನಗರಳ್ಳಿ ಗ್ರಾಮದ ಸುಗ್ಗಿ ಕಟ್ಟೆ ಹಾಗೂ ೧೨ ದೇವರ ಬನದಲ್ಲಿ ವಿವಿಧ ಆಚರಣೆಗಳೊಂದಿಗೆ ನಡೆಯುತ್ತÀದೆ. ಸುಗ್ಗಿ ಆಚರಣೆಯಲ್ಲಿ ೧೨ ಬನ-ರಂಗಗಳಿದ್ದು ಕೊನೆಯ ದಿನ ಕಂಬತಳೆ ರಂಗ, ಸುಗ್ಗಿ ರಂಗ ಎಂಬಲ್ಲಿ ಸುಗ್ಗಿಯ ವಿಶೇಷತೆಗಳನ್ನು ಸಾರುವ ಆಚರಣೆಗಳು ನಡೆಯುತ್ತÀದೆ.

ಚಾವಾಡಿಕಟ್ಟೆಯಲ್ಲಿ ಸುಗ್ಗಿ ಆಚರಣೆಗೆ ಚಾಲನೆ ನೀಡಿದ ಸಂದರ್ಭ ಕೂತಿ ಗ್ರಾಮಾಧ್ಯಕ್ಷರಾದ ಹೆಚ್.ಡಿ. ಮೋಹನ್, ಕಾರ್ಯದರ್ಶಿ ವಿನೋದ್ ಕುಮಾರ್ ಖಜಾಂಚಿ ಕಿಶನ್, ಗ್ರಾಮದ ಪಟೇಲರಾದ ಬಸವರಾಜ್, ಅರ್ಚರಾದ ಅನಂತರಾಮ್, ಪ್ರಮುಖರಾದ ಕೆ.ಟಿ. ಪರಮೇಶ್, ಗಣೇಶ್, ದಿನೇಶ್, ಗಿರೀಶ್, ಕೆ.ಸಿ. ಉದಯಕುಮಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಉತ್ಸವದ ಕೊನೆ ದಿನ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ ೪ ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜಾನಪದದ ಭಾಗವಂತೂ ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವವನ್ನು ಪ್ರಕಟಗೊಳಿಸುವ ಬಹುಮುಖ್ಯ ಕ್ಷಣಗಳಾಗುತ್ತವೆ.

ಇದರೊಂದಿಗೆ ಸಮೀಪದ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಕೂಡ ಈ ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಸುಗ್ಗಿ ಉತ್ಸವವಾಗಿದೆ. ಬೀರೇ ದೇವರ ಹಬ್ಬ ಆಚರಣೆಯೊಂದಿಗೆ ಸುಗ್ಗಿ ಆರಂಭಗೊAಡು ಗುಮ್ಮನ ಮರಿ ಪೂಜೆ, ಸಾಮೂಹಿಕ ಭೋಜನ ಊರೊಡೆಯನ ಪೂಜೆ, ಬೆಂಕಿ ಕೊಂಡ ಹಾಯುವದು, ಮೊದಲ ಬೇಟೆ ನಂತರ ಊರು ಸುಗ್ಗಿ, ದೇವರ ಗಂಗಾಸ್ನಾನ ಹಾಗೂ ದೊಡ್ಡ ಪೂಜೆಗಳು ಸುಗ್ಗಿ ಉತ್ಸವದ ಪ್ರಮುಖ ಭಾಗಗಳಾಗಿವೆ. ಇದರೊಂದಿಗೆ ಸೋಮವಾರಪೇಟೆ ವ್ಯಾಪ್ತಿಯ ಚೌಡ್ಲು, ಯಡೂರು, ಹಾನಗಲ್ಲು ಶೆಟ್ಟಳ್ಳಿ ಗ್ರಾಮಗಳಲ್ಲೂ ಸುಗ್ಗಿ ಉತ್ಸವ ನಡೆಯಲಿವೆ.

ಇದೀಗ ಎಲ್ಲೆಡೆ ಗದ್ದೆ ಕೃಷಿ ಮುಕ್ತಾಯವಾಗಿದ್ದು, ಮುಂದಿನ ಕೃಷಿ ಚಟುವಟಿಕೆಗಳಿಗೆ ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಕೃಷಿ ಕಾರ್ಯಕ್ಕೆ ಮಳೆಗಾಲ ಆಗಮಿಸಬೇಕಾಗಿದೆ. ಈ ಅವಧಿಯಲ್ಲಿ ಪ್ರಕೃತಿ ದೇವಿ ಮುನಿಸಿಕೊಳ್ಳದೆ ಕಾಲಕಾಲಕ್ಕೆ ತಕ್ಕಂತೆ ಮಳೆ ಬೆಳೆ ನೀಡಲಿ ಎಂದು ಗ್ರಾಮ ದೇವರಲ್ಲಿ ಪೂಜಿಸಿ ಕೃಷಿ ಕಾರ್ಯದಲ್ಲಿ ತೊಡಗಲು ಸಿದ್ಧತೆ ನಡೆಸುವ ಗ್ರಾಮೀಣ ರೈತನ ಸಂಭ್ರಮದ ಸುಗ್ಗಿಯ ಸಂಭ್ರಮ ಪುಷ್ಪಗಿರಿ ಬೆಟ್ಟತಪ್ಪಲಿನ ಗ್ರಾಮೀಣ ಭಾಗಗಳಲ್ಲಿ ಆರಂಭಗೊAಡಿದೆ.

- ವಿಜಯ್ ಹಾನಗಲ್