ಸೋಮವಾರಪೇಟೆ, ಫೆ. ೨೮: ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರ ನಡುವೆ ಒಗ್ಗಟ್ಟು ಅಗತ್ಯ ಎಂದು ಅಖಿಲ ಭಾರತೀಯ ಸಂತ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷ ಹಾಗೂ ಅರಸಿನಕುಪ್ಪೆಯ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಗುರುಗಳಾದ ಶ್ರೀರಾಜೇಶ್ನಾಥ್ಜೀ ಹೇಳಿದರು.
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿನಕುಪ್ಪೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೇವತೆ ಸಮುದಾಯ ಭವನದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ಅರಸಿನಕುಪ್ಪೆ ಗ್ರಾಮದಲ್ಲಿ ಮಹಿಳೆಯರು ಸರಕಾರದ ಯಾವುದೇ ಅನುದಾನವಿಲ್ಲದೇ, ದಾನಿಗಳಿಂದ ಹಣ ಸಂಗ್ರಹಿಸಿ, ಗ್ರಾಮದ ಎಲ್ಲರ ಉಪಯೋಗಕ್ಕಾಗಿ ಸಮುದಾಯ ಭವನವನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಂ.ಟಿ. ಬೇಬಿ, ತೀರ್ಥಾನಂದ, ಕೆ.ಬಿ. ದೇವರಾಜು, ಮಂಜುನಾಥ ಸ್ವಾಮಿ ಕ್ಷೇತ್ರದ ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ. ಮೋಹನ್, ಗ್ರಾಮದ ಪ್ರಮುಖರಾದ ರಾಮಣ್ಣ, ಉತ್ತಪ್ಪ, ಅರ್ಜುನ್, ಬಸಿರುಗುಪ್ಪೆಯ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಧನಂಜಯ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್, ಹೆಬ್ಬಾಲೆಯ ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದೇವತೆ ಸಮುದಾಯ ಭವನದ ಅಧ್ಯಕ್ಷೆ ಸಿ.ಎ. ವಿಮಲ ವಹಿಸಿದ್ದರು. ಗೌತಮಿ ಗಿರೀಶ್, ಮಿಥುನ ಪ್ರಕಾಶ್, ಹೆಚ್.ಎಸ್. ವೀಣಾ, ಅರ್ಪಿತ ಪುಟ್ಟರಾಜು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೂ ಮೊದಲು ಸಮುದಾಯ ಭವನದಲ್ಲಿ ಗಣಪತಿ ಹೋಮ ಮತ್ತು ಸತ್ಯನಾರಾಯಣಸ್ವಾಮಿ ಪೂಜೆಯನ್ನು ಶ್ರೀಮಂಜುನಾಥಸ್ವಾಮಿ ದೇವಾಲಯದ ಅರ್ಚಕ ಜಗದೀಶ್ ಉಡುಪ ಅವರು ನೆರವೇರಿಸಿದರು. ಅರ್ಚಕರಾದ ಹರಿಭಟ್, ಮೂರ್ತಿ ಪೂಜಾ ಕಾರ್ಯದಲ್ಲಿ ಸಹಕರಿಸಿದರು. ನಂತರ ಸಂಘದ ಮಹಿಳೆಯರು ದೇವಾಲಯದ ಆವರಣದಿಂದ ಕಲಶವನ್ನು ಹೊತ್ತು ಮೆರವಣಿಗೆಯಲ್ಲಿ ಸಮುದಾಯದ ಸಭಾಂಗಣಕ್ಕೆ ಆಗಮಿಸಿದರು.