*ಗೋಣಿಕೊಪ್ಪ, ನ. ೧೩: ಎಲ್ಲಾ ಧರ್ಮಗಳು ಮಾನವ ಮೌಲ್ಯಗಳನ್ನು ಬಿತ್ತುವ ಉದ್ದೇಶದೊಂದಿಗೆ ಆ ಧರ್ಮದೊಳಗಿನ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಶ್ರೀಕ್ಷೇತ್ರ ಕಿರಿಕೊಡ್ಲಿಮಠದ ಸದಾಶಿವ ಸ್ವಾಮಿಗಳು ತಿಳಿಸಿದರು.

ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಗೋಣಿಕೊಪ್ಪ ಕೊಡಗು ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಎನ್.ಆರ್ ಅಮೃತ್‌ರಾಜಾ ಅಧ್ಯಕ್ಷತೆಯಲ್ಲಿ ನಡೆದ ಓಣಂ ಉತ್ಸವ ಆಚರಣೆಗೆ ಚಾಲನೆ ನೀಡಿ ಹಿತವಚನ ನೀಡಿದರು.

ವೈಜ್ಞಾನಿಕವಾಗಿ ಮಾನವ ಕುಲ ಮುಂದುವರೆಯುತ್ತಿದೆ. ಆದರೆ ಮನುಷ್ಯ ತನ್ನ ಬದುಕಿನ ಮೌಲ್ಯಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾನೆ. ೧೫ ವರ್ಷಗಳ ಹಿಂದೆ ಮನೆಯ ಕೋಣೆಯೊಂದರಲ್ಲಷ್ಟೇ ದೂರವಾಣಿ ಇತ್ತು. ಯಾವುದೇ ಅಂಜಿಕೆ ಇಲ್ಲದೆ ಆ ಸಂದರ್ಭದಲ್ಲಿ ಮುಕ್ತವಾಗಿ ಮಾತನಾಡುವ ವ್ಯವಸ್ಥೆ ರೂಪುಗೊಳ್ಳುತ್ತಿತ್ತು. ಆದರೆ ಇತ್ತೀಚಿನ ಮೊಬೈಲ್ ಫೋನ್ ಬೆಳವಣಿಗೆಯ ನಂತರ ಮನೆಯ ಪ್ರತಿ ಸದಸ್ಯರು ಗೌಪ್ಯವಾಗಿ ಮಾತನಾಡುವುದರಿಂದ ಕೌಟುಂಬಿಕವಾಗಿ ದೂರ ಉಳಿಸುತ್ತಿದೆ ಎಂದು ಹೇಳಿದರು.

ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಂಘಟನೆಗಳು ಶಕ್ತಿಯುತವಾಗಿರಬೇಕು. ಶಿಕ್ಷಣ ಅಂಕವನ್ನುಗಳಿಸುವ ವ್ಯವಸ್ಥೆಗಷ್ಟೇ ಸೀಮಿತವಾಗದೆ ಮೌಲ್ಯಗಳನ್ನು ಗಳಿಸುವ ವೇದಿಕೆಯಾಗಬೇಕು ಎಂದರು. ಯಾವುದೇ ಧರ್ಮದೊಳಗೆ ಜಾತಿ ಸಮುದಾಯಗಳು ಇದ್ದರೂ ಎಲ್ಲವೂ ಮಾನವೀಯ ನೆಲೆಯಡಿಯಲ್ಲಿ ನಿಲ್ಲಬೇಕು. ಭಾರತ ದೇಶದಲ್ಲಿ ಕೇರಳ ಶಿಕ್ಷಣವಂತ ದೇಶ ಎಂದು ಗುರುತಿಸಿಕೊಂಡರು ಮತ್ತೊಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ವೃದ್ಧಾಶ್ರಮಗಳನ್ನು ಹೊಂದಿದ ರಾಜ್ಯವೆಂಬ ಕಪ್ಪು ಚುಕ್ಕಿಯನ್ನು ಅಂಟಿಸಿಕೊAಡಿದೆ. ಇದಕ್ಕೆ ಮುಖ್ಯ ಕಾರಣ ಆ ನೆಲದಲ್ಲಿ ಸಂಸ್ಕಾರ ಸಿಗುತ್ತಿಲ್ಲ ಎಂಬುದನ್ನಷ್ಟೇ ಹೇಳಬಹುದಾಗಿದೆ.

ಪ್ರತಿಯೊಬ್ಬರಲ್ಲೂ ತನ್ನ ಸಂಸ್ಕೃತಿಯ ಬಗ್ಗೆ ಕುತೂಹಲ ಮತ್ತು ಗೌರವ ಉಳಿಸಿಕೊಂಡಾಗ ಆ ನೆಲದ ಭಾಷೆ ಸಂಸ್ಕೃತಿ ಬೆಳವಣಿಗೆಗೆ ಕಾರಣವಾಗಬಲ್ಲದು. ಈ ನಿಟ್ಟಿನಲ್ಲಿ ಮಲಯಾಳಂ ಸಮಾಜ ತಮ್ಮ ಸಮುದಾಯವನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿದರು.

ಮುಖ್ಯ ಭಾಷಣಕಾರರಾಗಿ ಕೇರಳದ ರೀಜಾ ಭಟ್ಟಾದ್ರಿ ಪಾಡ್ ಮಾತನಾಡಿ, ಭಾಷೆ ಆಚಾರ ವಿಚಾರಗಳು ಉಳಿಯಬೇಕಾದರೆ ಸಮಾಜದ ಒಗ್ಗೂಡುವಿಕೆ ಅತಿ ಮುಖ್ಯ ಮತ್ತು ಯುವ ಸಮುದಾಯಕ್ಕೆ ಸಮಾಜದ ಹಿನ್ನೆಲೆ, ಇತಿಹಾಸಗಳನ್ನು ತಿಳಿಸುವ ಕಾರ್ಯವು ನಿರಂತರವಾಗಿ ಮುಂದುವರಿಸಬೇಕಾಗಿದೆ ಮತ್ತು ಅದರ ಮೌಲ್ಯಗಳನ್ನು ತಿಳಿಸಬೇಕಾಗಿದೆ ಎಂದು ಹೇಳಿದರು.

ವೀರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್, ಪ್ರತಿಯೊಬ್ಬರೂ ಶಿಕ್ಷಣವಂತರಾದಾಗ ಈ ಸಮಾಜದಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳಲು ಸಾಧ್ಯವಾಗಬಲ್ಲದು. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚು ಶಿಕ್ಷಣವಂತರಾಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪಂಚಭಾಷಾ ಸಾಹಿತಿ ಡಾ. ಉಳುವಂಗಡ ಕಾವೇರಿ ಉದಯ, ಚಲನಚಿತ್ರ ನಟಿ, ನಿರ್ಮಾಪಕಿ ಈರಮಂಡ ಹರಿಣಿ ವಿಜಯ, ರಾಜ್ಯ ಪ್ರವಾಸೋದ್ಯಮ ನಿಗಮದ ಮಾಜಿ ನಿರ್ದೇಶಕ ಬಿ.ಎನ್ ಪ್ರಕಾಶ್, ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಎಸ್. ಶರತ್‌ಕಾಂತ್, ಮಲಯಾಳಿ ಸಮಾಜದ ಕಾನೂನು ಸಲಹೆಗಾರರು ಕೆ.ಬಿ. ಸಂಜೀವ್, ಸಮುದಾಯದ ಒಗ್ಗೂಡುವಿಕೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಸಾರಿದರು.

ಉಳುವಂಗಡ ಕಾವೇರಿ ಉದಯ ರಚಿಸಿದ ಮಲೆಯಾಳಿ ಸಾಹಿತ್ಯ ಕೃತಿಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ನಿವೃತ್ತ ಯೋಧರುಗಳನ್ನು, ಪತ್ರಕರ್ತರನ್ನು ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು. ಪ್ರಧಾನ ಕಾರ್ಯದರ್ಶಿ ವಿ.ವಿ ಅರುಣ್ ಕುಮಾರ್, ಉಪಾಧ್ಯಕ್ಷ ಎಂ.ಎಸ್. ಸುಬ್ರಮಣಿ, ರೀನಾ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಸಮುದಾಯ ಬಾಂಧವರು ಇದ್ದರು.