ಮಡಿಕೇರಿ, ನ. ೧೧: ಬಿಳಿಗೇರಿಯ ತೋಟವೊಂದರಲ್ಲಿ ಕಾಫಿ ಕಳವು ಮಾಡಿದ ಆರೋಪದಡಿ ನಾಲ್ವರ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಳಿಗೇರಿಯ ದಂಬೆಕೋಡಿ ಸಿ. ಭುಜಂಗ ಎಂಬವರಿಗೆ ಸೇರಿದ ೭.೭೦ ಎಕರೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಫಸಲಿಗೆ ಬಂದ ಅಂದಾಜು ರೂ. ೨೪ ಸಾವಿರ ಮೌಲ್ಯದ ಅರೇಬಿಕಾ ಕಾಫಿ ಬೀಜವನ್ನು ಕೊಯ್ಲು ಮಾಡಿ ಕಳ್ಳತನ ಮಾಡಿದ ಆರೋಪದಡಿ ಬಿಳಿಗೇರಿ ನಿವಾಸಿಗಳಾದ ಗೋಪಾಲ (೬೭), ಸೋಮಯ್ಯ (೬೫), ತೀರ್ಥಕುಮಾರ್ (೩೨) ಹಾಗೂ ಬಿಳಿಗೇರಿ ಬನ್ನಕಾಡು ಪೈಸಾರಿ ನಿವಾಸಿ ಪಿ.ಟಿ. ಅಪ್ಪಟ್ಟು ವಿರುದ್ಧ ಸೆಕ್ಷನ್ ೪೪೭, ೩೭೯, ೩೪ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾ. ೮ ರಂದು ತೋಟದ ಮಾಲೀಕ ಭುಜಂಗ ಅವರು ತೋಟಕ್ಕೆ ತೆರಳಿದ ಸಂದರ್ಭ ನಾಲ್ವರು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿ ಕೊಯ್ಲು ಮಾಡಿ ಕಳ್ಳತನ ಮಾಡುತ್ತಿರುವುದು ಕಂಡು ಬಂದಿದೆ. ಅವರುಗಳ ಕೈಯಲ್ಲಿ ಆಯುಧಗಳಿದ್ದ ಹಿನ್ನೆಲೆ ಪ್ರಾಣಭೀತಿಯಿಂದ ಪ್ರಶ್ನೆ ಮಾಡದೆ ಅಲ್ಲಿಂದ ತೆರಳಿದ್ದು, ನಂತರ ಠಾಣೆಗೆ ದೂರು ನೀಡಿದ್ದಾರೆ.