ಪೆರಾಜೆ, ಜ. ೩೦: ಕರ್ನಾಟಕ ರಾಜ್ಯ ರೈತ ಸಂಘದ ಪೆರಾಜೆ ಗ್ರಾಮ ಘಟಕದ ವತಿಯಿಂದ ಅಡಿಕೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗಕ್ಕೆ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಜೊತೆ ಚರ್ಚೆ ನಡೆಸಿ ಕೃಷಿ ನಾಶವಾಗಿರುವ ಹಾಗೂ ರೈತರ ಆರ್ಥಿಕ ಸ್ಥಿತಿಗಳ ಬಗ್ಗೆ ಚರ್ಚೆ ನಡೆಸಲಾಯಿತು. ರೋಗ ಬಾದಿತವಾಗಿ ಹಾನಿಗೊಳಗಾದ ಅಡಿಕೆ ತೋಟಗಳಿಗೆ ಎಕರೆವಾರು ಪರಿಹಾರ ನೀಡಬೇಕು , ಪರ್ಯಾಯ ಬೆಳೆಗಳಿಗೆ ಮತ್ತಷ್ಟು ಉತ್ತೇಜನ ನೀಡಬೇಕು, ಕೃಷಿಯಲ್ಲಿ ಯಾಂತ್ರಿಕರಣಕ್ಕೆ ಉತ್ತೇಜನ, ಜೇನು ಕೃಷಿಗೆ ಬೆಂಬಲ, ಅಡಿಕೆ ಬಾದಿತ ರೋಗಗಳ ಕುರಿತಂತೆ ವಿಜ್ಞಾನಿಗಳು ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ಗ್ರಾಮ ಮಟ್ಟದಲ್ಲಿ ಸಂವಾದ ಹಮ್ಮಿಕೊಳ್ಳಬೇಕು. ಡ್ರೋಣ್ ಮುಖಾಂತರ ನಡೆಸುವ ಕೀಟನಾಶಕಗಳ ಸಿಂಪಡಣೆ ಕುರಿತಾಗಿ ವೈಜ್ಞಾನಿಕ ಅಧ್ಯಯನಗಳ ಆಧಾರದಲ್ಲಿ ರೈತರಿಗೆ ಮಾಹಿತಿ ನೀಡಬೇಕು, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.

ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಮತ್ತು ಕಾರ್ಯದರ್ಶಿ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಉಪಸ್ಥಿತರಿದ್ದು ಸಲಹೆ ಮಾರ್ಗದರ್ಶನ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಪೆರಾಜೆ ಗ್ರಾಮ ಘಟಕದ ಅಧ್ಯಕ್ಷರಾದ ಬಾಲಕೃಷ್ಣ, ಕಾರ್ಯದರ್ಶಿ ಪುರುಷೋತ್ತಮ ಬಂಗಾರಕೋಡಿ, ಘಟಕದ ಪದಾಧಿಕಾರಿಗಳಾದ ಗೋಪಾಲ ಪೆರಾಜೆ, ಉಮೇಶ್ ಕುಂಬಳಚೇರಿ, ನೆಕ್ಕಿಲ ಗಂಗಾಧರ, ವೇಣುಗೋಪಾಲ ಕುಂದಲ್ಪಾಡಿ ಮತ್ತು ಸಂಜಿವ ಕತ್ತಲಡ್ಕ ಉಪಸ್ಥಿತರಿದ್ದರು.