ಮುಳ್ಳೂರು, ಜ. ೨೫: ಶಿಕ್ಷಣ ಸಂಸ್ಥೆಗಳಿಗೆ ನೀಡುವ ದಾನ ಸಾವಿರಾರು ದೇವಸ್ಥಾನಗಳಿಗೆ ಕೊಡುವ ದಾನಗಳಿಗಿಂತ ಮಿಗಿಲಾದದ್ದು ಎಂದು ಶನಿವಾರಸಂತೆ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಿ.ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು.

ಅವರು ಸಮೀಪದ ಆಲೂರು-ಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ೧೭ನೇ ವಾರ್ಷಿಕೋತ್ಸವ ಕಲರವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಶಿಕ್ಷಣದಿಂದ ಜ್ಞಾನ ವೃದ್ಧಿಸುತ್ತದೆ. ಶಿಕ್ಷಣ ಸಂಸ್ಥೆಗಳು ಜ್ಞಾನದ ದೇಗುಲವಾಗಿದ್ದು, ಈ ನಿಟ್ಟಿನಲ್ಲಿ ಇಂದು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಪೋಷಕರು ಮತ್ತು ದಾನಿಗಳು ಸಹಕಾರ ನೀಡುತ್ತಿರುವುದು ಗಮನಾರ್ಹ ವಿಷಯ ಎಂದರು. ಬೆಂಗಳೂರು ಬೋಯನ್ಸಿ ಟ್ರೆöÊನರ್ ಸಂಸ್ಥೆಯ ನಿರ್ದೇಶಕ ಅಜಿತ್ ಕಾಯ್ಕಿಣಿ ಮಾತನಾಡಿ, ಶಿಕ್ಷಣದಿಂದ ಬುದ್ಧಿವಂತಿಕೆಯ ಜೊತೆಯಲ್ಲಿ ವ್ಯಕ್ತಿತ್ವ ವಿಕಸನ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಬಹುದು ಎಂದರು.

ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶಿಕ್ಷಣಕ್ಕಿಂತ ಮೊಬೈಲ್, ಸಾಮಾಜಿಕ ಜಾಲತಾಣಗಳಿಗೆ ಆದ್ಯತೆ ನೀಡುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸುವಂತೆ ಸಲಹೆ ನೀಡಿದರು.

ವಿದ್ಯಾಸಂಸ್ಥೆಯ ಮೇನೆಜಿಂಗ್ ಟ್ರಸ್ಟಿ ಹೆಚ್.ಕೆ. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಯ ಪ್ರಗತಿಗೆ ಪೋಷಕರು, ಸಾರ್ವಜನಿಕರ ಸಹಕಾರ ಮುಖ್ಯವಾದದ್ದು ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಬಿ.ಡಿ. ಮೋಹನ್‌ಕುಮಾರ್, ಉಪಾಧ್ಯಕ್ಷೆ ಪಿ.ಕೆ. ದಮಯಂತಿ, ಆಲೂರು-ಸಿದ್ದಾಪುರ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎಸ್.ಜೆ. ಪ್ರಸನ್ನಕುಮಾರ್, ಗೋಣಿಮರೂರು ಕ್ಲಸ್ಟರ್ ಸಿಆರ್‌ಪಿ ಆಶಾ, ಗ್ರಾ.ಪಂ. ಸದಸ್ಯ ಸತೀಶ್‌ಕುಮಾರ್, ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಎಂ.ಟಿ. ಬೇಬಿ, ಪಿಡಿಓ ಹರೀಶ್, ಪ್ರಮುಖರಾದ ಎಂ.ಎನ್. ರಾಜು, ವೀಣಾ, ಸಾಯಿ ಎಜುಕೇಷನ್ ಟ್ರಸ್ಟಿನ ಕಾರ್ಯದರ್ಶಿ ಟಿ.ಪಿ. ಜೀವನ್ ಮುಂತಾದವರಿದ್ದರು. ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.