ಸೋಮವಾರಪೇಟೆ, ಏ.೩: ಸಿದ್ದಗಂಗಾ ಮಠಾಧೀಶರಾಗಿದ್ದ ಶಿವಕುಮಾರ ಸ್ವಾಮೀಜಿ ಅವರು ಜನಮಾನಸದಲ್ಲಿ ನೆಲೆಯೂರಿರುವ ನಿಜವಾದ ಭಾರತ ರತ್ನ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಅಭಿಪ್ರಾಯಿಸಿದರು.
ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಜಿಲ್ಲಾ ಮಹಿಳಾ ಘಟಕ, ತಾಲೂಕು ಘಟಕ, ವೀರಶೈವ ಸಮಾಜದ ವತಿಯಿಂದ ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ೧೧೫ ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹಿಗಳಾಗಿ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ಸುಧಾರಣೆ ತರಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಚಿಕ್ಕದಾಗಿದ್ದ ಸಿದ್ಧಗಂಗಾ ಮಠವನ್ನು ಊರೂರು ಅಲೆದು ಭಿಕ್ಷೆಬೇಡಿ ಅಭಿವೃದ್ಧಿಪಡಿಸಿ ಇಂದು ವಿಶ್ವವೇ ಈ ಮಠವನ್ನು ನೋಡುವಂತೆ ಮಾಡಿದ್ದಾರೆ.
ಅತ್ಯಂತ ಸರಳ ಜೀವನದ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿ ಇಂದಿಗೂ ಕೋಟ್ಯಾಂತರ ಭಕ್ತರ ಜನಮಾನಸದಲ್ಲಿ ನೆಲೆಸಿದ್ದಾರೆ ಇಂತಹ ಪೂಜ್ಯರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಹಿಳೆಯರು ದೀಪ ಬೆಳಗುವ ಮೂಲಕ ಸಂಘಟನಾ ವೇದಿಕೆಯ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಮಹಿಳಾಘಟಕದ ಜಿಲ್ಲಾಧ್ಯಕ್ಷೆ ಉಷಾರಾಣಿ ಸಂಘಟನಾ ವೇದಿಕೆಯ ಧ್ಯೇಯೋದ್ದೇಶ ಹಾಗೂ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ವಚನಗಾನ ನಡೆಯಿತು. ಮಹಾಮಂಗಳಾರತಿ ನಂತರ ದಾಸೋಹ ನೆರವೇರಿತು.
ವೀರಶೈವ ಸಮಾಜದ ಯಜಮಾನ ಶಿವಕುಮಾರ್, ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್,
ವೀರಶೈವಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಎ.ಎಸ್. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಮಹಿಳಾ ಘಟಕದ ಉಪಾಧ್ಯಕ್ಷರುಗಳಾದ ಭಗವತಿ ದೇಶಮುಖ್, ಆಶಾ ಪುಟ್ಟರಾಜು, ಜಲಜಾ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಗೀತಾರಾಜು, ಸಂಘಟನಾ ಕಾರ್ಯದರ್ಶಿ ದೇವಿಕಾ ಸಚಿನ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.