(ವಿಶೇಷ ವರದಿ: ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಜ.೨೮: ಈ ಮಣ್ಣಿನ ರೈತರನ್ನೂ ಒಂದಲ್ಲ ಒಂದು ರೀತಿಯಲ್ಲಿ ಮೋಸದ ಜಾಲಕ್ಕೆ ಸಿಲುಕಿಸಿ , ಅವರಿಂದ ಕೆಲ ಮಧ್ಯವರ್ತಿಗಳು ಲಕ್ಷಾಂತರ ಹಣವನ್ನು ಪಡೆದು ತೆರಳುತ್ತಿರುವ ಘಟನೆ ದ.ಕೊಡಗಿನ ಭಾಗದಲ್ಲಿ ಹೆಚ್ಚಾಗಿ ಕಂಡುಬAದಿದೆ. ಇಂತಹ ಮೋಸದ ಜಾಲಕ್ಕೆ ಇದೀಗ ಗೊಬ್ಬರವು ಸೇರ್ಪಡೆಯಾಗಿದೆ
ರೈತರು ತಮ್ಮ ಭತ್ತದ ಗದ್ದೆಗಳಲ್ಲಿ ಕೊಯ್ಲು ಮುಗಿದ ನಂತರ ಮುಂದಿನ ಬೆಳೆ ಬೆಳೆಯುವ ಹಿನ್ನೆಲೆ ಯಲ್ಲಿ ತಮ್ಮ ತಮ್ಮ ಭತ್ತದ ಗದ್ದೆಗಳಿಗೆ ಹೆಚ್ಚಾಗಿ ಸಗಣಿ ಗೊಬ್ಬರ, ಸಾವಯವ ಗೊಬ್ಬರ ಹಾಕಲು ತಯಾರಿ ನಡೆಸುತ್ತಾರೆ.
ಇಂತಹ ಸಂದರ್ಭವನ್ನು ಬಳಕೆಮಾಡಿಕೊಳ್ಳುವ ಕೆಲ ಮಧ್ಯವರ್ತಿಗಳು ನಾವು ನಿಮ್ಮ ಭತ್ತದ ಗದ್ದೆಗೆ ಹಾಗೂ ಕಾಫಿ ಗುಣಮಟ್ಟದ ತೋಟಕ್ಕೆ ಬಳಸುವ ಅಣ್ಣಿಸಗಣಿ ಗೊಬ್ಬರವನ್ನು ಕುಶಾಲನಗರ ಸಮೀಪದ ಟಿಬೇಟ್ ಕಾಲೋನಿ, ಹೆಚ್.ಡಿ.ಕೋಟೆ, ಕಚ್ಚನಹಳ್ಳಿ, ಬಯಲುಕೊಪ್ಪ ಮುಂತಾದ ಭಾಗದಿಂದ ತಂದು ನೇರವಾಗಿ ತಮ್ಮ ಗದ್ದೆಗಳಿಗೆ ಇಳಿಸುತ್ತೇವೆ ಎಂದು ನಂಬಿಸಿ ಇಲ್ಲಿನ ರೈತರಿಂದ ನಯವಾಗಿ ಮುಂಗಡ ಹಣವನ್ನು ಪಡೆದು ನಂತರ ಅಣ್ಣಿ ಸಗಣಿ ಗೊಬ್ಬರ ನೆಪದಲ್ಲಿ ಮರಳು ಮಿಶ್ರಿತ ಮಣ್ಣನ್ನು ಲಾರಿಯಲ್ಲಿ ತುಂಬಿ ಬರುವ ಮಧ್ಯವರ್ತಿಗಳು ಇಲ್ಲಿನ ಮುಗ್ಧ ರೈತರ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ಸುರಿದು ೧೨ ರಿಂದ ೧೫ ಸಾವಿರ ಹಣವನ್ನು ಒಂದು ಲಾರಿಗೆ ಪಡೆಯುತ್ತಿದ್ದಾರೆ.
ಇದನ್ನೆ ಉತ್ತಮ ಗೊಬ್ಬರವೆಂದು ನಂಬಿರುವ ಇಲ್ಲಿನ ರೈತರು ಅವರು ಕೇಳಿದ ಹಣವನ್ನು ನೀಡಿ ಸುಮ್ಮನಾಗುತ್ತಿದ್ದಾರೆ. ಇದೇ ಗೊಬ್ಬರವನ್ನು ತಮ್ಮ ಗದ್ದೆಗಳಲ್ಲಿ ಬಳಸುತ್ತಿದ್ದಾರೆ.
ಇತ್ತೀಚೆಗೆ ದ.ಕೊಡಗಿನ ಪೊನ್ನಂಪೇಟೆ ಸಮೀಪದ ಬಲ್ಯಮುಂಡೂರು ಗ್ರಾಮದ ರೈತರಾದ ಕೊಟ್ಟಂಗಡ ಜೋಯಪ್ಪ ಎಂಬುವರ ಭತ್ತದ ಗದ್ದೆಗಳಿಗೆ ಮೂರು ಲಾರಿಯಷ್ಟು ಅಣ್ಣಿ ಗೊಬ್ಬರ ತರುವುದಾಗಿ ಇಲ್ಲಿನ ಗೊಬ್ಬರ ಮಧ್ಯವರ್ತಿಗಳು ಬಯಲುಕೊಪ್ಪದಿಂದ ಗೊಬ್ಬರ ಇಳಿಸುವುದಾಗಿ ಒಪ್ಪಂದ ಮಾಡಿಕೊಂಡು ಮುಂಗಡ ಹಣ ಪಡೆದಿದ್ದರು.
ನಂತರ ಭತ್ತದ ಗದ್ದೆಗಳಲ್ಲಿ ಗೊಬ್ಬರವನ್ನು ಇಳಿಸಿದ್ದರು. ಈ ಬಗ್ಗೆ ಗೊಬ್ಬರದ ಗುಣಮಟ್ಟದ ಬಗ್ಗೆ ಅನುಮಾನಗೊಂಡ ಇಲ್ಲಿನ ರೈತ ಗೊಬ್ಬರವನ್ನು ಒಂದು ಬಕೇಟ್ ನೀರಿನಲ್ಲಿ ಹಾಕಿ ಪರೀಕ್ಷಿಸಿದಾಗ ಗೊಬ್ಬರವು ಗಂಟು ಗಂಟಾಗಿ ಮರಳು ಮಿಶ್ರಿತಗೊಂಡ ಮಣ್ಣಾಗಿರುವುದನ್ನು ಕಂಡು ಬಂದಿದೆ.