ಮಡಿಕೇರಿ, ಜ. ೨೮: ಕಿಷ್ಕಿಂಧೆಯಿAದ ಕೂಡಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದ ಮಡಿಕೇರಿ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಇಂದು ವ್ಯವಸ್ಥೆ ಮಾಡಲಾಯಿತು. ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಸೇರಿದ ರಾಣಿಪೇಟೆ ರಸ್ತೆ ಮಾರ್ಗದಲ್ಲಿ ಬರುವ ಸುಮಾರು ಅರ್ಧ ಎಕರೆಯಷ್ಟು ಪ್ರದೇಶವನ್ನು (ಕೆಂಡದ ಗುಂಡಿ) ಸಮಿತಿಯವರು ತಾತ್ಕಾಲಿಕವಾಗಿ ಬಿಟ್ಟುಕೊಟ್ಟಿದ್ದಾರೆ. ನಗರ ಸಂಚಾರಿ ಠಾಣೆಯ ಪೊಲೀಸರ ಪ್ರಯತ್ನಕ್ಕೆ ಸಮಿತಿ ಸ್ಪಂದಿಸಿದ್ದು, ಸಂತೆ ದಿನವಾದ ಇಂದು ಬೆಳಿಗ್ಗೆಯಿಂದಲೇ ಈ ಬಗ್ಗೆ ಎಎಸ್ಐ ಐ.ಪಿ. ನಂದಾ, ಸಿಬ್ಬಂದಿ ಮೋಹನ್ ಅವರುಗಳು ಶ್ರಮವಹಿಸಿ ವ್ಯವಸ್ಥೆ ಕಲ್ಪಿಸಿದರು.
ಬಳಿಕ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಈ ಪ್ರಯತ್ನವನ್ನು ಶ್ಪಾಘಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಕೋಳಿಮಾಂಸ ಮಾರುಕಟ್ಟೆ ಹಿಂಭಾಗದಲ್ಲಿ ಜಾಗವೂ ಯಾವುದೇ ಪ್ರಯೋಜನಕ್ಕೆ ಬಾರದಂತಿರುವ ಬಗ್ಗೆ ಪೊಲೀಸರು ಹಾಗೂ ವರ್ತಕರು ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ನಗರಸಭಾ ಅಭಿಯಂತರ ಶವಾಂತ್ ಅವರಿಗೆ ಈ ಜಾಗವನ್ನು ಸಮತಟ್ಟುಗೊಳಿಸಿ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ವರ್ತಕರಾದ ಉರೇರಾ ಮತ್ತಿತರರು ಈ ಬಗ್ಗೆ ಅಧ್ಯಕ್ಷರಲ್ಲಿ ಮನವರಿಕೆ ಮಾಡಿದರು. ಮುಂದಿನ ಶುಕ್ರವಾರದ ವೇಳೆಗೆ ಈ ಪ್ರದೇಶದಲ್ಲೂ ನಿಲುಗಡೆಗೆ ಅವಕಾಶ ಮಾಡಿಕೊಡುವುದಾಗಿ ಅಧ್ಯಕ್ಷೆ ಅನಿತಾ ಅವರು ಈ ಸಂದರ್ಭ ಭರವಸೆ ನೀಡಿದರು. ದೇವಾಲಯ ಸಮಿತಿಯ ಅಧ್ಯಕ್ಷ ಗಜಾನನ, ಕಾರ್ಯದರ್ಶಿ ಜಗದೀಶ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು. ಹಲವಷ್ಟು ವಾಹನಗಳ ನಿಲುಗಡೆಗೆ ಅವಕಾಶವಾಗಿದ್ದ ಹಿನ್ನೆಲೆಯಲ್ಲಿ ಇಂದಿನ ಸಂತೆ ಯಾವುದೇ ಸಮಸ್ಯೆಗಳಿಲ್ಲದೆ ಸುಸೂತ್ರವಾಗಿ ನಡೆಯಿತು. ಸಂಚಾರಿ ಠಾಣಾ ಸಿಬ್ಬಂದಿಗಳಾದ ನಂದ, ಮೋಹನ್ ಅವರ ಪ್ರಯತ್ನವನ್ನು ಈ ಸಂದರ್ಭ ಸಾರ್ವಜನಿಕರು ಪ್ರಶಂಸಿಸಿದರಲ್ಲದೆ ದೇವಾಲಯ ಸಮಿತಿಯವರಿಗೂ ಅಭಿನಂದನೆ ವ್ಯಕ್ತಪಡಿಸಿದರು.