ಮಡಿಕೇರಿ, ಜ. ೨೮: ಖಾಲಿ ನಿವೇಶನ ಹೊಂದಿರುವ ನಗರದ ಬಡ ವರ್ಗಕ್ಕೆ ಮಡಿಕೇರಿ ನಗರಸಭೆಯ ಮೂಲಕ ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಬೇಕೆಂದು ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಒತ್ತಾಯಿಸಿದೆ.

ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್ ಹಾಗೂ ಪೌರಾಯುಕ್ತ ರಾಮದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಮತ್ತು ಪ್ರಮುಖರು, ಅರ್ಜಿ ಸಲ್ಲಿಸಲು ಜ.೨೯ ಕೊನೆಯ ದಿನವೆಂದು ತಿಳಿಸಿದ್ದು, ಇಷ್ಟು ಕಡಿಮೆ ಅವಧಿಯಲ್ಲಿ ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸುವುದು ಅರ್ಜಿದಾರರಿಗೆ ಅಸಾಧ್ಯವೆಂದು ತಿಳಿಸಿದರು.

ಫಾರಂ ನಂ.೩, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ದೊರೆಯಬೇಕಾದರೆ ಕನಿಷ್ಟ ೨೧ ದಿನಗಳ ಕಾಲಾವಕಾಶ ಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗಿ ಅರ್ಜಿ ಸಲ್ಲಿಕೆಗೆ ಕೇವಲ ೩ ದಿನಗಳ ಕಾಲಾವಕಾಶ ನೀಡಿರುವುದು ಸರಿಯಾದ ಕ್ರಮವಲ್ಲವೆಂದರು.

ವಾಜಪೇಯಿ ವಸತಿ ಯೋಜನೆಯ ಲಾಭ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದರೆ ಅರ್ಜಿ ಸಲ್ಲಿಕೆಯ ದಿನವನ್ನು ಕನಿಷ್ಟ ೨೦ ದಿನಗಳವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.

ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಫಯಾಜ್, ಉಪಾಧ್ಯಕ್ಷರುಗಳಾದ ಅನಿಲ್, ಮಿಯಾಜ್ ಹಾಗೂ ಖಜಾಂಚಿ ಅಝೀಜ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.