ಮಡಿಕೇರಿ, ಜ. ೨೭: ರಾಜ್ಯ ಸರಕಾರದ ವತಿಯಿಂದ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಗೊಂದು ಗೋಶಾಲೆಯನ್ನು ತೆರೆಯುವ ಯೋಜನೆಯನ್ನು ರೂಪಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಗೋಶಾಲೆ ನಿರ್ಮಾಣ ಸಂಬAಧ ತಾ. ೨೮ ರಂದು (ಇಂದು) ಭೂಮಿಪೂಜೆ ನೆರವೇರಲಿದೆ.

ಈ ಕುರಿತು ‘ಶಕ್ತಿ’ಗೆ ಮಾಹಿತಿ ನೀಡಿರುವ ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ. ಸುರೇಶ್ ಭಟ್ ಅವರು ಕೆ. ನಿಡುಗಣೆ ಗ್ರಾಮದಲ್ಲಿ ಸರಕಾರಿ ಜಿಲ್ಲಾ ಗೋಶಾಲೆ ತಲೆ ಎತ್ತಲಿದ್ದು, ಎಂಟು ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಾಣವಾಗಲಿದೆ. ಇದಕ್ಕಾಗಿ ೩೬ ಲಕ್ಷ ರೂ. ಅನುದಾನ ಸರಕಾರದಿಂದ ಬಿಡುಗಡೆಯಾಗಿದೆ. ಐವತ್ತು ಗೋವುಗಳನ್ನು ಸಂರಕ್ಷಿಸಲು ಅನುಕೂಲವಾಗುವಂತೆ ಶೆಡ್, ಬೃಹತ್ ನೀರಿನ ಟ್ಯಾಂಕ್, ಕಾವಲುಗಾರರ ಕೊಠಡಿ, ಗೊಬ್ಬರದ ಗುಂಡಿ, ಬೋರ್‌ವೇಲ್, ಗೇಟ್ ಇವುಗಳನ್ನು ನಿರ್ಮಾಣ ಮಾಡಲಾಗುವುದು. ಸಿಸಿಟಿವಿ ಅಳವಡಿಸಲಾಗುವುದು. ಈ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದಿAದ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.

ಇಲಾಖೆಯಿಂದ ಸುಮಾರು ೫೦೦ ಗೋವುಗಳಿಗೆ ಅನುಕೂಲವಾಗುವಂತೆ ಗೋಶಾಲೆ ತೆರೆಯುವ ನಿಟ್ಟಿನಲ್ಲಿ ಎರಡೂವರೆ ಕೋಟಿಯ ಕ್ರಿಯಾಯೋಜನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ೩೬ ಲಕ್ಷ ಮಾತ್ರ ಅನುದಾನ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ೫೦ ಗೋವುಗಳಿಗೆ ಸೀಮಿತವಾಗಿ ಗೋಶಾಲೆ ನಿರ್ಮಾಣ ಮಾಡಲಿದ್ದು, ಮುಂದಿನ ಬಜೆಟ್‌ನಲ್ಲಿ ಎರಡೂವರೆ ಕೋಟಿ ಕ್ರಿಯಾಯೋಜನೆಗೆ ಒಪ್ಪಿಗೆ ಸಿಕ್ಕರೆ ಗೋಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು. ಕೊಡಗಿನಲ್ಲಿ ಸುಮಾರು ೭೭ ಸಾವಿರ ಜಾನುವಾರುಗಳಿದ್ದು, ಸುಮಾರು ೫೦೦ ಗೋವುಗಳನ್ನು ಸಲಹಲು ಅನುಕೂಲವಾಗುವಂತ ಗೋಶಾಲೆ ನಿರ್ಮಾಣ ಆಗಬೇಕಿದ್ದ ಕಾರಣ ಇಲಾಖೆಯಿಂದ ಎರಡೂವರೆ ಕೋಟಿ ಕ್ರಿಯಾಯೋಜನೆ ಸಲ್ಲಿಸಲಾಗಿತ್ತು. ಆದರೆ ೩೬ ಲಕ್ಷ ಮಾತ್ರ ಬಿಡುಗಡೆಯಾಗಿದ್ದು, ಅದಕ್ಕೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಲು ತಾ. ೨೮ ರಂದು ಭೂಮಿಪೂಜೆ ನೆರವೇರಿಸಲಾಗುವುದು ಎಂದು ಸುರೇಶ್ ಭಟ್ ಹೇಳಿದರು.

ಇತ್ತೀಚೆಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡ ಗೋಶಾಲೆ ನಿರ್ಮಾಣವಾಗಲಿರುವ ಜಾಗಕ್ಕೆ ಭೇಟಿ ನೀಡಿತ್ತು.

ಆಶಾದಾಯಕ ಅಧಿಕೃತ ಯೋಜನೆ

ರಾಜ್ಯದಲ್ಲಿ ಇದುವರೆಗೆ ಅಲ್ಲಲ್ಲಿ ಗೋವುಗಳ ಅಕ್ರಮ ಸಾಗಾಟ ತಡೆ ಹಾಗೆಯೆ ಸಂರಕ್ಷಿಸಿದ ಗೋವುಗಳನ್ನು ಪೊಲೀಸರು ಅತ್ಯಂತ ಶ್ರಮವಹಿಸಿ ಮೈಸೂರಿಗೆ ಕಳುಹಿಸುತ್ತಿದ್ದ ಚಿತ್ರಣ ಸಾಮಾನ್ಯವೆನಿಸಿದೆ. ಜೊತೆಗೆ ಬೀದಿಯಲ್ಲಿ ಓಡಾಡುವ ದನಗಳು ಗಾಯಗೊಂಡು ಅಥವಾ ನಿತ್ರಾಣಗೊಂಡು ಅಳಿಯುತ್ತಿದ್ದ ಗೋ ಸಂತತಿಗಳನ್ನು ಎಲ್ಲಿಗೆ ಕಳುಹಿಸಬೇಕು ಹೇಗೆ ಸಂರಕ್ಷಿಸಬೇಕು ಎನ್ನುವ ಗೊಂದಲ ಸದಾ ಆರಕ್ಷಕ ವಲಯದಲ್ಲಿತ್ತು. ಹೀಗಾಗಿ ಅಕ್ರಮ ಗೋವು ಸಾಗಾಟಗಳನ್ನು ತಡೆಯುವಲ್ಲಿ ಹೆಚ್ಚಿನ ಆಸಕ್ತಿ ವಹಿಸುವಂತಹ ಸನ್ನಿವೇಶ ಕಡಿಮೆಯಿತ್ತು. ಇದರಿಂದಾಗಿ ಗೋಸಾಗಾಟ ಅನಿಯಂತ್ರಿತವಾಗಿ ಸಾಗುತಿತ್ತು.

(ಮೊದಲ ಪುಟದಿಂದ) ಇದೀಗ ಸರಕಾರವೇ ಅಧಿಕೃತವಾಗಿ ಗೋವುಗಳನ್ನು ರಕ್ಷಿಸಿ ಪೋಷಿಸುವ ಜವಾಬ್ದಾರಿಕೆ ತೆಗೆದುಕೊಂಡಿರುವುದು ಗೋವು ಪ್ರಿಯರಿಗೆ ಹರ್ಷ ಉಂಟು ಮಾಡಿದ ಬೆಳವಣಿಗೆ ಆಗಿದೆ. ಆದರೆ ಸಂಬAಧಿತ ಅಧಿಕಾರಿಗಳು ಪ್ರಾರಂಭದಲ್ಲಿಯೆ ಇದನ್ನು ಸುಸೂತ್ರವಾಗಿ ನೆರವೇರಿಸಿದರೆ ಜನವಲಯದಲ್ಲಿಯೂ ಖಂಡಿತ ಬೆಂಬಲ ದೊರಕುವುದು ನಿಸ್ಸಂಶಯ.

-ಉಜ್ವಲ್‌ರAಜಿತ್