ಚೆಟ್ಟಳ್ಳಿ, ಜ. 18: ವಿವಿಧ ತಳಿಯ ಕಾಫಿ ಬೆಳೆಗಳನ್ನು ಕಾಫಿ ತೋಟಗಳಲ್ಲಿ ಬೆಳೆಸುವ ಮೂಲಕ ಅಧಿಕ ಇಳುವರಿಯನ್ನು ಪಡೆಯಲು ಬೆಳೆಗಾರರು ಪ್ರಯತ್ನಿಸುತ್ತಿದ್ದರೆ ಹಿರಿಕರ ಗ್ರಾಮದ ಕಾಫಿ ಬೆಳೆಗಾರ ವಿಕ್ರಂ ತನ್ನ ನಾಲ್ಕು ಎಕರೆ ಕಾಫಿ ತೋಟದಲ್ಲಿ ಹಳೆಯ ರೋಬಸ್ಥಾ ಗಿಡಗಳಿಗೆ ಅರೆಬಿಕಾ ಗಿಡಗಳ ಚಿಗುರನ್ನು ಕಸಿ ಮಾಡುವ ಮೂಲಕ ಕಾಫಿಬೆಳೆಯಲ್ಲಿ ನೂತನ ಇಳುವರಿ ಪಡೆಯುತ್ತಿದ್ದಾರೆ.

ಕಾಫಿ ಬೆಳೆಯಲ್ಲಿ ಹಲವು ತಳಿ ಗಳಿದ್ದು ಅದರಲ್ಲೂ ಇತ್ತೀಚೆಗೆ ಅತೀ ಶೀಘ್ರದಲ್ಲಿ ಫಸಲು ನೀಡುವಂತಹ ವಿನೂತನ ತಳಿಗಳನ್ನು ಬೆಳೆಗಾರರು ಬೆಳೆಯುತ್ತಿದ್ದಾರೆ. ಆದರೆ ಇಲ್ಲಿ ರೋಬಸ್ಟಾ ಕಾಫಿ ಗಿಡಕ್ಕೆ ಅರೆಬಿಕಾ ಕಾಫಿಯನ್ನು ಕಸಿ ಮಾಡಿ ಉತ್ತಮ ಫಸಲು ಪಡೆಯಬಹುದೆಂಬುದೇ ಇದರ ವಿಶೇಷ.

ಸಾಮಾನ್ಯವಾಗಿ ರೋಬಸ್ಟಾ ಅಥವಾ ಅರೆಬಿಕಾ ಕಾಫಿ ಗಿಡಗಳನ್ನು ನೆಟ್ಟು ಫಸಲು ಬರಬೇಕಾದರೆ ಸುಮಾರು 4 ರಿಂದ 5 ವರ್ಷಗಳೇ ಕಾಯಬೇಕು. ಆದರೆ ಇತ್ತೀಚೆಗೆ ಮೂರು ವರ್ಷದಲ್ಲಿ ಫಸಲು ಬರುವಂತಹ ಕಾಫಿಯನ್ನು ಬೆಳೆಸಲಾಗುತ್ತಿದೆ. ಆದರೆ ರೋಬಸ್ಟಾ ಕಾಫಿಗೆ ಅರೆಬಿಕಾ ಕಾಫಿಯನ್ನು ಕಸಿ ಮಾಡುವ ಮೂಲಕ ಒಂದೇ ವರ್ಷದಲ್ಲಿ ಫಸಲು ಪಡೆಯಬಹುದೆಂದು ಸೋಮವಾರಪೇಟೆ ತಾಲೂಕಿನ ಹಿರಿಕರ ಗ್ರಾಮದ ವಿಕ್ರಂ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಕಸಿ ಕಟ್ಟಿದ ಕಾಫಿ ಗಿಡವನ್ನು ಬೆಳೆದು ತೋರಿಸಿಕೊಟ್ಟಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ ರೋಬಸ್ಟಾ ಕಾಫಿ ಗಿಡಗಳನ್ನು ಬೆಳೆಸಲಾಗಿತ್ತು.

ಆದರೆ ಅತೀ ಶೀತದಿಂದಾಗಿ ಗಿಡ ಚೆನ್ನಾಗಿದ್ದರೂ ಇಳುವರಿ ಕಡಿಮೆ ಸಿಗುತ್ತಿತ್ತು. ಎಲ್ಲಾ ಗಿಡಗಳನ್ನು ತೆಗೆದು ಹೊಸದಾಗಿ ಅರೆಬಿಕಾ ಗಿಡಗಳನ್ನು ಮಾಡಿದರೆ ಮತ್ತೆ ಐದು ವರ್ಷ ಕಾಯಬೇಕಾಗುತ್ತದೆ. ಆದ್ದರಿಂದ ಸುಮಾರು 20 ವರ್ಷದ ಫಸಲು ಬರದ ರೋಬಸ್ಟಾ ಕಾಫಿ ಗಿಡವನ್ನು ಕತ್ತರಿಸಿ ಅದರ ಕಾಂಡದಲ್ಲಿ ಚಿಗುರು ಬರುವಂತೆ ನೋಡಿಕೊಳ್ಳಲಾಗುತ್ತದೆ. ಚಿಗುರು ಬಂದ ನಂತರ ಉತ್ತಮ ಫಸಲು ನೀಡುವ ಬೆಳೆದ ಅರೆಬಿಕಾ ಕಾಫಿ ಗಿಡದ ಚಿಗುರನ್ನು ತೆಗೆದುಕೊಂಡು ರೋಬಸ್ಟಾ ಬೊಡ್ಡೆಗೆ ಕಸಿಯಲ್ಲಿ ಬೆಳೆದ ಚಿಗುರಿಗೆ ಕಟ್ಟಲಾಗುತ್ತದೆ. ಇದು ಒಂದೇ ವರ್ಷದಲ್ಲಿ ಫಸಲು ಬಿಡಲು ಆರಂಭಿಸುತ್ತದೆ. ಕೇವಲ ಎರಡು ವರ್ಷದಲ್ಲಿ ದೊಡ್ಡ ಗಿಡವಾಗಿ ಬೆಳೆದು ಯಥೇಚ್ಚವಾಗಿ ಕಾಫಿ ಇಳುವರಿ ಸಿಗುತ್ತದೆ.

ಈ ರೀತಿ ಮಾಡುವುದರಿಂದ ಅರೆಬಿಕಾ ಕಾಫಿಯ ಗಾತ್ರ ದೊಡ್ಡದಾಗಿ ಉತ್ತಮ ಗುಣಮಟ್ಟದ ಕಾಫಿ ಸಿಗುತ್ತಿದೆ. ಜೊತೆಗೆ ಇಳುವರಿ ಹೆಚ್ಚಾಗಿದ್ದು ಕಾಫಿ ಗಿಡವೂ ಹುಲುಸಾಗಿ ಬೆಳೆಯುತ್ತದೆ.

ಇವರಿಗೆ ಚಿಕ್ಕಮಂಗಳೂರು ಬಾಳೆಹೊನ್ನೂರಿನ ಮಹಿಳೆ ಕಾಫಿ ಕಸಿ ಮಾಡಲು ಸಹಕಾರ ನೀಡುವ ಮೂಲಕ ಎರಡು ದಿನ ಕಸಿ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ. ತದನಂತರ ವಿಕ್ರಂ ಮತ್ತು ಅವರ ತಾಯಿ ಪ್ರಮಿಳಾ ಚೆನ್ನಪ್ಪ ಸೇರಿ ಉಳಿದ ಗಿಡಗಳಿಗೆ ಕಸಿ ಕಟ್ಟಿದ್ದಾರೆ. ಇದೀಗ ನಾಲ್ಕು ಎಕರೆ ಕಾಫಿ ತೋಟದಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಒಂದು ಎಕರೆಯಲ್ಲಿ ಸುಮಾರು 25 ಚೀಲದಷ್ಟು ಪಾರ್ಚ್‍ಮೆಂಟ್ ಕಾಫಿ ಸಿಗುತ್ತಿದೆ. ಒಂದು ಚೀಲಕ್ಕೆ ಈಗ ರೂ. 15400 ರಿಂದ ರೂ. 15700 ವರೆಗೆ ಬೆಲೆಯಿದೆ. ಖರ್ಚು ಕಳೆದು ಒಂದು ಎಕರೆಗೆ ಸುಮಾರು ಮೂರು ಲಕ್ಷದಷ್ಟು ಆದಾಯ ಬರುತ್ತಿದೆ. ಇನ್ನೂ ಅರೆಬಿಕಾ ಕಾಫಿ ಹಣ್ಣಾಗುವ ಸಮಯದಲ್ಲಿ ಮಳೆಯಾದರೆ ಹಣ್ಣು ಒಡೆದು ಉದುರಿ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ.

ಆದರೆ ಈ ಕಸಿ ವಿಧಾನದಿಂದ ಮಳೆಯಾದಾಗ ಹಣ್ಣು ಒಡೆಯುವುದಿಲ್ಲ ಹಾಗೂ ಉದುರುವುದಿಲ್ಲ. ಇದು ಕೂಡ ಬೆಳೆಗಾರರಿಗೆ ವರದಾನವಾಗಲಿದೆ. ಜೊತೆಗೆ ಈ ಕಾಫಿಗೆ ಅರೆಬಿಕಾ ಕಾಫಿಗೆ ಸಿಂಪಡಣೆ ಮಾಡಿದಂತೆ ಔಷಧಿ ಹಾಕುವ ಕೆಲಸವಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಕಸಿ ವಿಧಾನದ ಪ್ರಯೋಜನಕಾರಿ ಯಾಗಲಿದೆ ಎನ್ನುತ್ತಾರೆ ಬೆಳೆಗಾರ ವಿಕ್ರಂ. ಹೆಚ್ಚಿನ ಮಾಹಿತಿಗಾಗಿ ಮೊ. 7022989825 ಸಂಪರ್ಕಿಸಬಹುದು. - ಪುತ್ತರಿರ ಕರುಣ್ ಕಾಳಯ್ಯ