ಬೆಳಗಾವಿ, ಡಿ. ೨೩: ತೀವ್ರ ಕುತೂಹಲ ಮತ್ತು ಭಾರೀ ಗದ್ದಲಕ್ಕೆ ಕಾರಣವಾಗಿದ್ದ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಂಗೀಕಾರ ದೊರೆತಿದೆ. ವಿಧಾನಸಭೆಯಲ್ಲಿ ಮಂಗಳವಾರ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-೨೦೨೧’ ಮಂಡನೆಯಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ನ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಅಂಗೀಕಾರ ಸಿಕ್ಕಿದೆ. ಇಂದು ಸದನದಲ್ಲಿ ಸ್ಪೀಕರ್ ಕಾಗೇರಿ ಮಂತಾತರ ನಿಷೇಧ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿದರು. ಈ ವೇಳೆ ವಿಧಾನಸಭಾ ಹೆಚ್ಚಿನ ಸದಸ್ಯರು ಮಸೂದೆ ಪರ ಮತ ಹಾಕಿದ್ದು, ಅಂಗೀಕಾರಗೊAಡಿದೆ. ಎರಡು ದಿನಗಳ ಹಿಂದೆಯಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಮಂತಾತರ ಕಾಯ್ದೆ ಮಂಡಿಸಿದ್ದರು. ಬಳಿಕ ಒಂದಿಡೀ ದಿನ ಕಾಯ್ದೆ ಪರ-ವಿರೋಧ ಚರ್ಚೆ ನಡೆಸಲಾಯ್ತು. ಕೊನೆಗೂ ಧ್ವನಿ ಮತಕ್ಕೆ ಹಾಕಿ ಸರ್ಕಾರ ಒಪ್ಪಿಗೆ ಪಡೆದುಕೊಂಡಿದೆ.
ಸದನ ಮುಂದೂಡಿಕೆ : ಕಾಂಗ್ರೆಸ್ ಸದಸ್ಯರ ಭಾರೀ ಗದ್ದಲದ ನಡುವೆಯೇ ಸ್ಪೀಕರ್ ಕಾಗೇರಿ ಅವರು ವಿಧೇಯಕ ಅಂಗೀಕಾರ ಪಡೆದಿದೆ ಎಂದು ಸದನವನ್ನು ೧೦ ನಿಮಿಷಗಳ ಕಾಲ ಮುಂದೂಡಿದರು.