ಮಡಿಕೇರಿ, ಡಿ. ೧೭: ಭಾರತೀಯ ಚರ್ಮರೋಗ ಮತ್ತು ಕುಷ್ಠ ರೋಗ ಸಂಘದ ಕರ್ನಾಟಕ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚರ್ಮ ರಥ ಜನ ಜಾಗೃತಿಯ ರಥ ಯಾತ್ರೆಗೆ ಕೊಡಗಿನಲ್ಲಿ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದ ಉದ್ದೇಶ ಸಾಮಾನ್ಯವಾಗಿ ಕಂಡು ಬರುವ ಚರ್ಮ ಕಾಯಿಲೆಗಳಾದ ತೊನ್ನು, ಸೋರಿಯಾಸಿಸ್, ಪೈತಾ ಮತ್ತಿತರ ರೋಗವು ಅಂಟು ರೋಗಗಳಲ್ಲ ಮತ್ತು ಈ ರೋಗಿಗಳಿಗೆ ಅವರ ಮನೆಯವರು ಮತ್ತು ಸ್ನೇಹಿತರು ಅವರನ್ನು ಪ್ರತ್ಯೇಕಿಸದೆ ಅವರಿಗೆ ಧೈರ್ಯವನ್ನು ತುಂಬಲು ಸಹಕರಿಸಬೇಕು.

ಹೀಗೆ ಸಾಮಾನ್ಯವಾಗಿ ಕಂಡು ಬರುವ ಹಲವು ಚರ್ಮರೋಗಗಳ ಗುಣಲಕ್ಷಣಗಳ ಬಗ್ಗೆ ಮತ್ತು ಅವುಗಳ ನಿವಾರಣೆಗೆ ಇರುವ ವೈದ್ಯಕೀಯ ಪದ್ಧತಿಗಳ ಬಗ್ಗೆ ಬಿತ್ತಿ ಪತ್ರಗಳು ಮತ್ತು ಎಲ್‌ಇಡಿ ಡಿಸ್ಲೇಯ ಮೂಲಕ ಕಿರು ಛಾಯಾಚಿತ್ರಗಳನ್ನು ಒಳಗೊಂಡ ಮಾಹಿತಿಯನ್ನು ಜಿಲ್ಲಾಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ಹರ್ಷವರ್ಧನ್ ತಿಳಿಸಿದರು.

ನಂತರ ಮಾತನಾಡಿದ ಮತ್ತೊಬ್ಬ ಚರ್ಮರೋಗ ತಜ್ಞರಾದ ಡಾ. ಗಣೇಶ್ ಭಟ್ ಅವರು ತೊನ್ನು ರೋಗ ಚಿಕಿತ್ಸಾ ವಿಧಾನದ ಬಗ್ಗೆ ತಿಳಿಸಿದರು. ಈ ರಥವು ಮುಂದಿನ ೧೫ ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಿ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಲಿದೆ ಎಂದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಮತ್ತು ಡೀನ್ ಡಾ. ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್, ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ್, ಜಿಲ್ಲಾಸ್ಪತ್ರೆಯ ಆರ್‌ಎಂಒ ಡಾ. ರೂಪೇಶ್ ಗೋಪಾಲ್, ಡಾ. ದಿಶಾದ್ ಮತ್ತು ಇತರ ವೈದ್ಯರು ಮತ್ತು ಹೌಸ್ ಸರ್ಜನ್‌ಗಳು ಪಾಲ್ಗೊಂಡಿದ್ದರು.