ಮಡಿಕೇರಿ, ಅ. ೨೦: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಕೊಣನೂರು ಬಿ.ಎಂ. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ.ಎನ್. ರವಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರ ರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣವು ಸಾರ್ವಕಾಲಿಕ ಮಹಾ ಗ್ರಂಥವಾಗಿದೆ. ಆ ದಿಸೆಯೆಲ್ಲಿ ರಾಮಾಯಣ ಮಹಾಗ್ರಂಥವನ್ನು ಧಾರ್ಮಿಕವಾಗಿ ಯೂ ಅಥವಾ ಮಹಾಕಾವ್ಯ ಆಗಿಯೂ ನೋಡಬಹುದಾಗಿದೆ ಎಂದು ರವಿ ಅವರು ಪ್ರತಿಪಾದಿಸಿದರು.

ಮಹರ್ಷಿ ವಾಲ್ಮೀಕಿಯವರು ಒಬ್ಬ ತತ್ವಜ್ಞಾನಿಯಾಗಿ, ಶ್ರೇಷ್ಠ ಮನೋವಿಜ್ಞಾನಿ, ಜೊತೆಗೆ ಮನೋಚಿಕಿತ್ಸಕ ಗುಣವನ್ನು ಹೊಂದಿದ್ದರು. ಮಹರ್ಷಿ ವಾಲ್ಮೀಕಿಯವರ ರಾಮಾಯಣದಲ್ಲಿ ಮಾನವೀಯ ಮತ್ತು ಸತ್ಯಕ್ಕೆ ಹತ್ತಿರವಾದ ಅಂಶಗಳನ್ನು ಕಾಣಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಹರ್ಷಿ ವಾಲ್ಮೀಕಿಯವರು ಒಬ್ಬ ತಪಸ್ವಿಯಾಗಿ ಸರ್ವಶ್ರೇಷ್ಠ ಮಹಾ ಗ್ರಂಥವನ್ನು ಬರೆದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿನ ಅಂಧಕಾರ, ಮೌಢ್ಯವನ್ನು ತೊಲಗಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರ ಬದುಕು-ಬವಣೆ ಸಂಕಷ್ಟದಲ್ಲಿದ್ದು, ಇನ್ನೂ ಕೂಡ ಸರಿಯಾದ ಶಿಕ್ಷಣ ತಲುಪಿಲ್ಲ, ಆದ್ದರಿಂದ ಬುಡಕಟ್ಟು ಜನರಿಗೆ ಶಿಕ್ಷಣ ತಲುಪಿಸುವಂತಾಗಬೇಕು. ಬುಡಕಟ್ಟು ಜನಾಂಗದ ಯುವ ಪ್ರತಿಭೆಗಳಿಗೆ ಅವಕಾಶ ಒದಗಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅಶೋಕ್ ಅವರು ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರು ಬಹಳ ಹಿಂದೆ ಇದ್ದು, ಇವರಿಗೆ ಅಗತ್ಯ ಸೌಲಭ್ಯಗಳು ತಲುಪುವಂತಾಗಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿನಿ ಶೀಶಾ ಅವರು ಮಹರ್ಷಿ ವಾಲ್ಮೀಕಿ ಅವರ ಕುರಿತು ಮಾತನಾಡಿದರು. ಗಿರಿಜನ ಆಶ್ರಮ ಶಾಲೆ ಉಪನ್ಯಾಸಕರು, ಶಿಕ್ಷಕರು, ನಿಲಯ ಮೇಲ್ವಿಚಾರಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ತಹಶೀಲ್ದಾರ್ ಮಹೇಶ್, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯೆ ಕೆ.ಆರ್. ಮಂಜುಳಾ, ಭಾಗಮಂಡಲ ಲ್ಯಾಂಪ್ ಸಂಸ್ಥೆಯ ಅಧ್ಯಕ್ಷ ಮಿಟ್ಟು ರಂಜಿತ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪಿ.ಪಿ. ಕವಿತಾ ಇತರರು ಇದ್ದರು. ಐಟಿಡಿಪಿ ಇಲಾಖಾಧಿಕಾರಿ ಶ್ರೀನಿವಾಸ್ ಸ್ವಾಗತಿಸಿದರು, ಕಾವ್ಯ ಪಿ.ಆರ್. ಪ್ರಾರ್ಥಿಸಿದರು, ರಂಗಸ್ವಾಮಿ ನಿರೂಪಿಸಿ ವಂದಿಸಿದರು.