ಸೋಮವಾರಪೇಟೆ, ಅ. ೧೦: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿದ್ದ ನಳಿನಿ ಗಣೇಶ್
ಅವರ ನಿಧನದಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ
ತಾ. ೧೧ರಂದು (ಇಂದು) ಚುನಾವಣೆ ನಡೆಯಲಿದ್ದು, ಮೀಸಲಾತಿಯನ್ವಯ ಈರ್ವರು ಸದಸ್ಯರು
ಅರ್ಹತೆ ಹೊಂದಿದ್ದಾರೆ. ಅಧ್ಯಕ್ಷರಾಗಿ ಬಿಜೆಪಿಯ
ಪಿ.ಕೆ. ಚಂದ್ರು ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲು ನಿಗದಿಗೊಳಿಸಿ ಆದೇಶ ಇರುವ ಹಿನ್ನೆಲೆ ವಾರ್ಡ್ ೨ರ ಬಿಜೆಪಿ ಸದಸ್ಯ ಪಿ.ಕೆ. ಚಂದ್ರು ಹಾಗೂ ವಾರ್ಡ್ ೩ರ ಬಿಜೆಪಿ ಸದಸ್ಯೆ ಮೋಹಿನಿ ಅವರುಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾರೆ.
ಆದರೆ ಈ ಹಿಂದೆ ಏರ್ಪಟ್ಟ ಒಡಂಬಡಿಕೆಯAತೆ ಪಿ.ಕೆ. ಚಂದ್ರು ಅವರನ್ನು ಅಧ್ಯಕ್ಷರನ್ನಾಗಿಸಲು ಬಿಜೆಪಿಯಲ್ಲಿ ಪ್ರಯತ್ನ ಸಾಗಿದೆ.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಗೋವಿಂದರಾಜು ಅವರನ್ನು ನಿಯೋಜಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ತಾ. ೧೧ ರಂದು ಬೆಳಿಗ್ಗೆ ೧೦ ಗಂಟೆಯಿAದ ೧೨ ಗಂಟೆಯವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ ೨ ಗಂಟೆಗೆ ಚುನಾವಣಾ ಸಭೆ, ನಾಮಪತ್ರ ಪರಿಶೀಲನೆ, ಹಿಂಪಡೆಯಲು ಅವಕಾಶ, ನಂತರ ಚುನಾವಣೆ ಏರ್ಪಟ್ಟಲ್ಲಿ ಸಭೆಯಲ್ಲಿ ಹಾಜರಿರುವ ಸದಸ್ಯರು, ಶಾಸಕರು, ಸಂಸದರು ಕೈ ಎತ್ತುವ ಮೂಲಕ ಮತ ನೀಡಿ ಅಧ್ಯಕ್ಷರ ಆಯ್ಕೆ ನಡೆಸಲಿದ್ದಾರೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ೫ (ಪಕ್ಷೇತರ ಸದಸ್ಯ ಸೇರಿ) ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ೩ ಸ್ಥಾನಗಳಲ್ಲಿ ಜಯಗಳಿಸಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಬಿಜೆಪಿಯಲ್ಲಿ ಮಾತ್ರ ಈ ವರ್ಗಕ್ಕೆ ಸೇರಿದ ಸದಸ್ಯರಿದ್ದಾರೆ. ಹೀಗಾಗಿ ಅಧಿಕಾರ ಬಿಜೆಪಿ ಪಾಲಾಗಲಿದೆ.