ಗೋಣಿಕೊಪ್ಪಲು, ಸೆ. ೧: ಕಾಫಿ ತುಂಬಿದ್ದ ಲಾರಿಯು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಹುದಿಕೇರಿ ಸಮೀಪ ನಡೆದಿದೆ. ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ಕಾರ್ಮಿಕರಾದ ಬಿಮಲ್ ರೈ ಹಾಗೂ ಉಲಾಲ್ ರೈ ಎಂಬ ಕಾರ್ಮಿಕರು ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. ಬುಧವಾರ ಮಧ್ಯಾಹ್ನ ೨.೩೦ರ ಸುಮಾರಿಗೆ ಹೈಸೊಡ್ಲೂರು ಗ್ರಾಮದಿಂದ ಕಾಫಿ ಚೀಲಗಳನ್ನು ತುಂಬಿಸಿಕೊAಡ ಲಾರಿಯು ಹುದಿಕೇರಿ ಪಟ್ಟಣಕ್ಕೆ ತಲುಪುವ ಮಾರ್ಗ ಮಧ್ಯೆ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿಕೊಂಡಿದೆ.

(ಮೊದಲ ಪುಟದಿಂದ) ಈ ವೇಳೆ ಲಾರಿಯ ಮೇಲ್ಭಾಗದಲ್ಲಿದ್ದ ಇಬ್ಬರು ಕಾರ್ಮಿಕರು ಲಾರಿಯ ಅಡಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ನಾಗರಿಕರು ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದರಾದರೂ ಅಷ್ಟೋತ್ತಿಗಾಗಲೇ ಇಬ್ಬರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಶವಗಾರದಲ್ಲಿ ಇರಿಸಲಾಗಿದೆ.

ಡಿವೈಎಸ್ಪಿ ಜಯಕುಮಾರ್, ಕುಟ್ಟ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಜಯರಾಂ, ಶ್ರೀಮಂಗಲ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೃತ ಕಾರ್ಮಿಕರು ಪಶ್ಚಿಮ ಬಂಗಾಳದಿAದ ಕಳೆದ ಮೂರು ತಿಂಗಳ ಹಿಂದೆ ಕೊಡಗು ಜಿಲ್ಲೆಗೆ ಆಗಮಿಸಿ ಹುದಿಕೇರಿ ಕಾಫಿ ಕ್ಯೂರಿಂಗ್‌ನಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. - ಹೆಚ್.ಕೆ. ಜಗದೀಶ್