ಸೋಮವಾರಪೇಟೆ, ಆ. ೩೦: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ತೆರವಾಗಿರುವ ವಾರ್ಡ್ ೧ ಹಾಗೂ ವಾರ್ಡ್ ೩ರ ಸದಸ್ಯ ಸ್ಥಾನಕ್ಕೆ ಸೆ. ೩ ರಂದು ಚುನಾವಣೆ ನಡೆಯಲಿದ್ದು, ಸ್ಪರ್ಧಿಗಳು ಮನೆ-ಮನೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಪಕ್ಷ ಬೆಂಬಲಿತ ಅಭ್ಯರ್ಥಿಗಳೊಂದಿಗೆ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ವಾರ್ಡ್ ೧ ಹಾಗೂ ೩ ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಿರುವ ಮೃತ್ಯುಂಜಯ ಹಾಗೂ ಮೋಹಿನಿ ಅವರುಗಳ ಪರವಾಗಿ ಪಕ್ಷದ ಮಂಡಲ ಅಧ್ಯಕ್ಷ ಮನುಕುಮಾರ್ ರೈ ನೇತೃತ್ವದಲ್ಲಿ ಮತಯಾಚನೆ ಮಾಡಲಾಯಿತು.

ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಪ.ಪಂ. ಸದಸ್ಯರಾದ ಪಿ.ಕೆ. ಚಂದ್ರು, ಮಹೇಶ್, ಶುಭಕರ್, ನಗರಾಧ್ಯಕ್ಷ ಸೋಮೇಶ್ ಸೇರಿದಂತೆ ಮುಖಂಡರು ಮನೆ ಮನೆಗೆ ತೆರಳಿ ಮತಯಾಚಿಸಿದರು. ಅಂತೆಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿರುವ ಭುವನೇಶ್ವರ್ ಹಾಗೂ ಸಂಧ್ಯಾ ಅವರುಗಳ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಮೌಳಿ, ಕೆ.ಎಂ. ಲೋಕೇಶ್, ಶೀಲಾ ಡಿಸೋಜ, ಯಾಕೂಬ್, ಸಂಜಯ್ ಜೀವಿಜಯ ಸೇರಿದಂತೆ ಇತರರು ಮನೆ ಮನೆಗೆ ತೆರಳಿ ಮತಯಾಚಿಸಿ ದರು.