*ಗೋಣಿಕೊಪ್ಪಲು: ಕೋವಿಡ್ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ಪೊನ್ನಂಪೇಟೆ ತಾಲೂಕು ಆಡಳಿತ ಬುಧವಾರ ಮೂರು ಕಡೆ ತರಕಾರಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದ್ದರೂ ಗ್ರಾಹಕರೇ ಇಲ್ಲದೆ ವ್ಯಾಪಾರಸ್ಥರು ನಷ್ಟ ಅನುಭವಿಸಿದರು.

ಜನರು ಒಂದು ಕಡೆ ಗುಂಪು ಸೇರುವುದನ್ನು ನಿಯಂತ್ರಿಸುವುದಕ್ಕಾಗಿ ಆರ್‍ಎಂಸಿ ಆವರಣ, ಸರಕಾರಿ ಪ್ರಾಥಮಿಕ ಶಾಲಾ ಮೈದಾನ ಹಾಗೂ ಬೈಪಾಸ್ ರಸ್ತೆಯ ವೆಂಕಟಪ್ಪ ಲೆಔಟ್ ನಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿತ್ತು. ಈ ಹಿಂದೆ ಸೋಮವಾರ ಮತ್ತು ಶುಕ್ರವಾರವಿದ್ದ ವ್ಯಾಪಾರವನ್ನು ಬುಧವಾರವೂ ಬೆಳಿಗ್ಗೆ 6ರಿಂದ 10 ಗಂಟೆ ವರೆಗೆ ನಡಸುವಂತೆ ಮಾರ್ಪಾಡು ಮಾಡಲಾಗಿತ್ತು. ಇದರಿಂದ ಹರ್ಷಿತರಾದ ವ್ಯಾಪಾರಸ್ಥರು ಮಂಗಳವಾರ ಸಂಜೆ ಮೈಸೂರಿಗೆ ತೆರಳಿ ಬಹಳಷ್ಟು ತರಕಾರಿ ತಂದಿದ್ದರು. ಗ್ರಾಹಕರು ಬರಬಹುದು ಎಂಬ ನಿರೀಕ್ಷೆಯೊಂದಿಗೆ ತಾಲೂಕು ಆಡಳಿತ ಸೂಚಿಸಿದ ಸ್ಥಳದಲ್ಲಿ ತರಕಾರಿ ಅಂಗಡಿಗಳನ್ನು ತೆರೆದಿದ್ದರು. ಆದರೆ ಬೆರಳೆಣಿಕೆಯಷ್ಟು ಜನಮಾತ್ರ ಬಂದರು. ಕೆಲವು ಅಂಗಡಿಗಳಲ್ಲಿ ಒಂದು ಪೈಸೆಯಷ್ಟು ವ್ಯಾಪಾರ ನಡೆಯಲಿಲ್ಲ. ಪಟ್ಟಣದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಒಂದಷ್ಟು ವ್ಯಾಪಾರವಾಗುತ್ತದೆ. ಆದರೆ ಇದನ್ನು ಯಾರ ಬಳಿ ಹೇಳುವುದು ಎಂದು ನೊಂದು ನುಡಿದರು.

ಪ್ರಾಥಮಿಕ ಶಾಲಾ ಮೈದಾನದಲ್ಲಿ ತೆರೆದಿದ್ದ ಅಂಗಡಿ ಮಾಲಿಕ ನಿಸಾರ್ ತಮ್ಮ ನೋವು ತೋಡಿಕೊಂಡು 7 ಗಂಟೆಗೆ ಅಂಗಡಿ ಹಾಕಿದ್ದೇನೆ. 9.30ಕ್ಕೆ ಮತ್ತೆ ತುಂಬಿಸಬೇಕು. ಬೆಳಗಿನಿಂದ ಒಂದು ಪೈಸೆ ವ್ಯಾಪಾರ ಕೂಡ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪಿರಿಯಾಪಟ್ಟಣದಿಂದ ಸೊಪ್ಪು ವ್ಯಾಪಾರಕ್ಕೆ ಬಂದಿದ್ದ ಮಹದೇವ ಮಾತನಾಡಿ ತಮ್ಮದೇ ಆದ ಓಮಿನಿ ಕಾರಿನಲ್ಲಿ ರೂ. 3500 ಬೆಲೆಯ ತರಕಾರಿ ಕೊಂಡು ತಂದಿದ್ದೇನೆ. ಒಬ್ಬರೂ ಕೇಳುವವರಿಲ್ಲ. ಈಗ ಕಸದ ತೊಟ್ಟಿಗೆ ಹಾಕಿ ಹೋಗಬೇಕಾಗಿದೆ ಎಂದು ಅಳಲು ತೋಡಿಕೊಂಡರು.

ದಿನಸಿ ಗ್ರಾಹಕರಿಗೆ ಸಂಕಟ: ತರಕಾರಿಯನ್ನು ತಾವು ಬಯಸಿದ ಕಡೆ ಕೊಂಡುಕೊಳ್ಳಲು ಅವಕಾಶವಿದ್ದುದರಿಂದ ತರಕಾರಿ ಗ್ರಾಹಕರು ಖುಷಿಪಟ್ಟರು. ಆದರೆ ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಿದವರು ಒಂದು ಕೀಮೀ ದೂರದಲ್ಲಿ ನಿಲ್ಲಿಸಿದ್ದ ವಾಹನಗಳತ್ತ ಹೊತ್ತು ಸಾಗಲಾಗದೆ ಸಂಕಟ ಅನುಭವಿಸಿದರು. ಪಡಿತರ ವಸ್ತುಗಳನ್ನು ಪಡೆದವರು ತಲೆಯ ಮೇಲೆ ಹೊತ್ತುಕೊಂಡೇ ಸಾಗಿದರು.