ಸೋಮವಾರಪೇಟೆ, ಏ. ೩: ಇಲ್ಲಿನ ಜೇಸೀ ಸಂಸ್ಥೆಯ ವತಿಯಿಂದ ವಿಶೇಷಚೇತನರಲ್ಲಿ ಚೈತನ್ಯ ತುಂಬಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಳೀಯ ಮಹಿಳಾ ಸಮಾಜದಲ್ಲಿ ವಿವಿಧ ಒಳಾಂಗಣ ಕ್ರೀಡಾಕೂಟ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸೀ ಸಂಸ್ಥೆಯ ಅಧ್ಯಕ್ಷೆ ಮಾಯಾ ಗಿರೀಶ್ ವಹಿಸಿದ್ದರು. ವಿಶೇಷಚೇತನರ ಸಂಘದ ತಾಲೂಕು ಅಧ್ಯಕ್ಷ ಸಂಗಮೇಶ್ ಕ್ರೀಡಾಕೂಟ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜೇಸೀ ನಿಕಟಪೂರ್ವ ಅಧ್ಯಕ್ಷೆ ಉಷಾರಾಣಿ, ಪೂರ್ವ ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯದರ್ಶಿ ನೆಲ್ಸನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ೩೦ಕ್ಕೂ ಅಧಿಕ ಮಂದಿ ವಿಶೇಷಚೇತನರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.