ಚೆಟ್ಟಳ್ಳಿ, ಫೆ. ೧೩: ಶಂಸುಲ್ ಉಲಮಾ ಅನಾಥ ಮತ್ತು ಬಡ ಬಾಲಕಿಯರ ವಸತಿ ನಿಲಯದ ೩ ಹೆಣ್ಣು ಮಕ್ಕಳ ವಿವಾಹ ಕಾರ್ಯ, ಸಮಾಜ ಸೇವಕರು, ಧಾರ್ಮಿಕ ಪಂಡಿತರ ಸಮ್ಮುಖದಲ್ಲಿ ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಸಭಾಂಗಣದಲ್ಲಿ ನಡೆಯಿತು .

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಧಾರ್ಮಿಕ ಪಂಡಿತ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ. ಮಾತನಾಡಿ ಬಡ ಹಾಗೂ ನಿರ್ಗತಿಕ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಪೆರುಂಬಾಡಿಯ ಸಂಶುಲ್ ಉಲಮಾ ಎಜುಕೇಶನಲ್ ಟ್ರಸ್ಟ್ ಶ್ರಮಿಸಿದೆ. ಇದುವರೆಗೆ ಇಪ್ಪತ್ತುಕ್ಕೂ ಹೆಚ್ಚು ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಿದೆ.

ಕಲಿಯುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಪ್ರತಿಭಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಯಾರೂ ಇಲ್ಲದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ರೀತಿಯಲ್ಲಿ ಪ್ರತಿಯೊಬ್ಬ ದಾನಿಯು ಕೇಂದ್ರದಲ್ಲಿರುವ ಮಕ್ಕಳಿಗೆ ಎಲ್ಲಾ ರೀತಿಯ ಆರ್ಥಿಕ ಸಹಾಯ ನೀಡಿ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಮುಂದೆ ತರುವ ಪ್ರಯತ್ನ ರೂಪಿಸಬೇಕೆಂದರು. ಶಂಸುಲ್ ಉಲಮಾ ಟ್ರಸ್ಟ್ನ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ ಮಾತನಾಡಿ ಹದಿನೈದು ವರ್ಷಗಳ ಹಿಂದೆ ಬಡ ನಿರ್ಗತಿಕ ಮಕ್ಕಳಿಗೆ ಬೌದ್ಧಿಕ ಹಾಗೂ ಧಾರ್ಮಿಕ ಉನ್ನತ ಶಿಕ್ಷಣ ನೀಡುವ ಮೂಲಕ ಪ್ರತಿಭಾನ್ವಿತರಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಟ್ರಸ್ಟ್ ಮುಂದಾಗಿದೆ ಎಂದರು.

ಬಡ ಹಾಗೂ ನಿರ್ಗತಿಕ ಹೆಣ್ಣು ಮಕ್ಕಳ ಭವಿಷ್ಯ ಉನ್ನತೀಕರಣಕ್ಕೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುವ ಮೂಲಕ ಹೊಲಿಗೆ ತರಬೇತಿ, ಕಂಪ್ಯೂಟರ್ ಸೇರಿದಂತೆ ಉನ್ನತ ವ್ಯಾಸಂಗಕ್ಕೂ ಹೆಚ್ಚಿನ ಸಹಕಾರ ನೀಡಲಾಗುತ್ತಿದೆ. ೭೦ಕ್ಕೂ ಹೆಚ್ಚು ಮಕ್ಕಳು ಕೇಂದ್ರದಲ್ಲಿದ್ದು ದಾನಿಗಳ ಸಹಕಾರವು ಅತ್ಯಗತ್ಯವಾಗಿದ್ದು ಟ್ರಸ್ಟ್ನೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಉಪ ಖಾಝಿ ಎಂ.ಎA ಅಬ್ದುಲ್ಲಾ ಫೈಝಿ ನಿಖಾ ನೇತೃತ್ವ ವಹಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ೩ ಜೋಡಿಗಳಿಗೆ ಶುಭ ಹಾರೈಸಿದರು.

ಮಾಜಿ ಶಾಸಕ ಕೆ.ಎಂ ಇಬ್ರಾಹಿಂ,ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ ಯಾಕೂಬ್, ಹಿರಿಯ ರಾಜಕಾರಣಿ ಸೈಯದ್, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ ರಾಫಿ, ಕೆಎಂಎ ಅಧ್ಯಕ್ಷ ಸೂಫಿ ಹಾಜಿ,ಪ್ರಮುಖರಾದ ರಶೀದ್ ಹಾಜಿ, ಮೂಸಾ ಮೌಲವಿ, ಗಫಾರ್, ಆರಿಫ್ ಪೈಝಿ,ತಮ್ಲಿಕ್ ದಾರಿಮಿ, ಉಮ್ಮರ್ ಪೈಝಿ, ಉಸ್ಮಾನ್, ನೌಫಲ್ ಹುದವಿ, ಅಶ್ರಫ್, ಲತೀಫ್, ಎ.ಕೆ. ಹಕೀಂ, ಮಣಿ ಮೊಹಮ್ಮದ್, ಕೆ.ಯು. ಮಜೀದ್, ಸೇರಿದಂತೆ ಮತ್ತಿತರರು ಇದ್ದರು.