೮ ಶಾಸಕರು ಸಚಿವರಾಗಿ ಪ್ರಮಾಣ: ಸಂಪುಟದಿAದ ಒಬ್ಬರನ್ನು ಕೈ ಬಿಡುವ ಸಾಧ್ಯತೆ
ಬೆಂಗಳೂರು, ಜ. ೧೨: ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಕೊನೆಗೂ ಮೂಹೂರ್ತ ಫಿಕ್ಸ್ ಆಗಿದ್ದು, ತಾ. ೧೩ ರಂದು (ಇಂದು) ೭ ರಿಂದ ೮ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸದ್ಯ ಸಂಪುಟದಲ್ಲಿ ೭ ಸ್ಥಾನ ಖಾಲಿ ಇದ್ದು, ನಾಳೆ ಮಧ್ಯಾಹ್ನ ೩.೫೦ಕ್ಕೆ ೭ ರಿಂದ ೮ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಪುಟದ ಒಬ್ಬರು ಸಚಿವರನ್ನು ಕೈಬಿಡಬಹುದು. ಒಬ್ಬ ಸಚಿವರನ್ನು ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಇಂದು ರಾತ್ರಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ನೂತನ ಸಚಿವರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಇಂದು ರಾತ್ರಿ ಹೊಸದಾಗಿ ತಮ್ಮ ಸಂಪುಟ ಸೇರಲಿರುವ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಬಿ.ಎಸ್.ವೈ. ಸಂಪುಟದಿAದ ಕೈಬಿಡುವ ಸಚಿವರ ಪಟ್ಟಿಯಲ್ಲಿ ಅಬಕಾರಿ ಸಚಿವ ಹೆಚ್. ನಾಗೇಶ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು, ಅವರ ಜತೆಗೆ ಕೋಟಾ ಶ್ರೀನಿವಾಸ್ ಪೂಜಾರಿ, ಶಶಿಕಲಾ ಜೊಲ್ಲೆ ಮತ್ತು ಪ್ರಭು ಚೌಹಾಣ್ ಅವರ ಹೆಸರು ಇದೆ ಎನ್ನಲಾಗಿದೆ.
ಗೋ ನಿಷೇಧ ಕಾಯ್ದೆ:ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್
ಬೆಂಗಳೂರು, ಜ. ೧೨: ಗೋಹತ್ಯೆ ನಿಷೇಧ ಕಾನೂನಿಗೆ ಸಂಬAಧಿಸಿದAತೆ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಈ ಕುರಿತಂತೆ ಪಿಳ್ಳಣ್ಣ ಗಾರ್ಡನ್ ನಿವಾಸಿ ಮಹಮದ್ ಆರಿಫ್ ಜಮೀಲ್ ಎಂಬುವವರು ದಾಖಲು ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಸಚಿನ್ ಶಂಕರ್ ಮಗುದಂ ಅವರ ಪೀಠ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಆರಿಫ್ ಜಮೀಲ್ ಅವರು, ಸರ್ಕಾರದ ಈ ಸುಗ್ರೀವಾಜ್ಞೆಯು ಭಾರತದ ಸಂವಿಧಾನದ ೨೧ನೇ ಪರಿಚ್ಚೇದದ ಅಡಿಯಲ್ಲಿ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ವ್ಯಾಪಾರ ಅಥವಾ ವ್ಯವಹಾರವನ್ನು ನಡೆಸುವ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನದ ೧೯ (ಜಿ) ವಿಧಿ ಖಾತರಿಪಡಿಸಿದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ದೇಶದಲ್ಲಿ ಪ್ರಾಣಿಗಳನ್ನು ವಧಿಸುವುದನ್ನು ನಿಷೇಧಿಸುವುದರಿಂದ ಮಾಂಸ ಮಾರಾಟಗಾರರ ಉದ್ಯೋಗ ಮತ್ತು ಅವರ ವ್ಯಾಪಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಾಗರಿಕರು ತಮ್ಮ ಆಯ್ಕೆಯ ಆಹಾರವನ್ನು ಹೊಂದಲು ವಂಚಿತರಾಗಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಬೆದರಿಕೆ ಎದುರಿಸಲು ಸಜ್ಜಾಗಿದ್ದೇವೆ: ಜ. ಎಂ.ಎA. ನರವಣೆ
ನವದೆಹಲಿ, ಜ. ೧೨: ಉತ್ತರದ ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರದ ಬಗ್ಗೆ ನಿಗಾವಹಿಸಲಾಗುತ್ತಿದೆ. ಚೀನಾದೊಂದಿಗೆ ಗಡಿ ಸಮಸ್ಯೆಗೆ ಶಾಶ್ವತ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ನಾವು ಸಾಧ್ಯವಾದ ಪ್ರಯತ್ನವೆಲ್ಲವನ್ನೂ ಮಾಡುತ್ತಿದ್ದೇವೆ, ಆದರೆ ಯಾವುದೇ ಸಂಭವನೀಯ ಪರಿಸ್ಥಿತಿಗಳನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಸಂಪೂರ್ಣವಾಗಿ ನಮಗೆ ಸವಾಲಿನ ವರ್ಷವಾಗಿತ್ತು. ಆ ಸವಾಲಿನ ಮಧ್ಯೆ ಓಡಾಡುವ ಪರಿಸ್ಥಿತಿ ನಮಗೆ ಉಂಟಾಗಿತ್ತು. ಅಂತಹ ಕಠಿಣ ಸವಾಲುಗಳನ್ನು ಎದುರಿಸಿ ಮೇಲೆದ್ದು ಬಂದಿದ್ದೇವೆ. ನಮಗೆ ಬಹಳ ಮುಖ್ಯ ಸವಾಲಾಗಿದ್ದು ಕೋವಿಡ್-೧೯ ಮತ್ತು ಉತ್ತರದ ಗಡಿಭಾಗದ ಸಮಸ್ಯೆ ಎಂದರು. ಪಾಕಿಸ್ತಾನ ಮತ್ತು ಚೀನಾ ಒಟ್ಟಾಗಿ ಪ್ರಬಲ ಬೆದರಿಕೆಯನ್ನು ನಮ್ಮ ವಿರುದ್ಧ ರೂಪಿಸುತ್ತಿದ್ದು, ಈ ಸಹಭಾಗಿತ್ವದ ಬೆದರಿಕೆಯನ್ನು ದೂರವಿಡಲು ಸಾಧ್ಯವಿಲ್ಲ. ಅತಿ ಎತ್ತರದ ಸಾಂದ್ರತೆ ಪ್ರದೇಶದಲ್ಲಿ ನಮ್ಮ ಸೈನಿಕರು ಹೆಚ್ಚಾಗಿದ್ದರೂ ಕೂಡ ಚಳಿಗಾಲದಲ್ಲಿ ಗಾಯಗೊಳ್ಳುವ ಸೈನಿಕರ ಸಂಖ್ಯೆ ಹೆಚ್ಚುಕಡಿಮೆ ಕಳೆದ ವರ್ಷದಂತೆಯೇ ಮುಂದುವರಿದಿದೆ. ಕಳೆದ ವರ್ಷ ಶೇ. ೦.೧೩ ರಷ್ಟಿದ್ದರೆ ಈ ವರ್ಷ ಶೇ. ೦.೧೫ ರಷ್ಟಿದೆ ಎಂದರು. ಉತ್ತರ ಗಡಿಗಳಲ್ಲಿ, ನಾವು ಜಾಗರೂಕರಾಗಿ ಇದ್ದೇವೆ. ಚೀನಾ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿರುವ ಎಲ್ಎಸಿಯ ಕೇಂದ್ರ ಮತ್ತು ಪೂರ್ವ ವಲಯಗಳಲ್ಲಿ ಸಂಘರ್ಷ ವಲಯಗಳಿದ್ದು, ಅಲ್ಲಿ ನಮ್ಮ ಸೇನೆ ನಿಗಾವಹಿಸುತ್ತಲೇ ಇದೆ. ಚೀನಾ ಮತ್ತು ಪಾಕಿಸ್ತಾನಗಳು ಒಗ್ಗಟ್ಟಿನಿಂದ ಭಾರತದ ವಿರುದ್ಧವಾಗಿ ಕೆಲಸ ಮಾಡುತ್ತಿವೆ, ಅದು ಮಿಲಿಟರಿ ಮತ್ತು ಮಿಲಿಟರಿಯೇತರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದಿಂದ ಇವೆ ಎಂದರು. ಪ್ರತಿ ವರ್ಷ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಪಡೆಗಳು ಸಾಂಪ್ರದಾಯಿಕ ತರಬೇತಿ ಸ್ಥಳಗಳಿಗೆ ಬರುತ್ತವೆ. ಚಳಿಗಾಲದಲ್ಲಿ ತರಬೇತಿ ಮುಗಿದ ನಂತರ ತರಬೇತಿ ನಡೆದ ಸ್ಥಳವನ್ನು ತೊರೆಯಲಾಗುತ್ತದೆ. ಟಿಬೆಟಿಯನ್ ಪ್ರಸ್ಥ ಭೂಮಿಯಲ್ಲಿ ಆಳವಾದ ಪ್ರದೇಶಗಳಲ್ಲಿದ್ದ ಸೈನಿಕರು ಹಿಂದಕ್ಕೆ ಹೋಗಿದ್ದಾರೆಂದು ಭಾವಿಸುವುದು ನ್ಯಾಯೋಚಿತ ಮತ್ತು ಅದು ಪ್ರಸ್ಥಭೂಮಿಯಲ್ಲಿನ ಶಕ್ತಿ ಕಡಿಮೆ ಮಾಡುತ್ತದೆ ಎಂದರು.
ತಾ. ೧೫ ರಿಂದ ಉನ್ನತ ಶಿಕ್ಷಣ ತರಗತಿಗಳು ಆರಂಭ
ಬೆAಗಳೂರು, ಜ. ೧೨: ತಾ. ೧೫ ರಿಂದ ಎಲ್ಲ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿAಗ್ ಆಫ್ಲೈನ್ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆ ಹೊಸ ಎಸ್ಒಪಿ ಜಾರಿ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಯಾವುದೇ ಕಾರಣಕ್ಕೂ ಈ ಮಾರ್ಗಸೂಚಿ ಮೀರುವಂತಿಲ್ಲ. ಶಿಕ್ಷಣ ಸಂಸ್ಥೆಗಳ ಜತೆಗೆ, ವಿದ್ಯಾರ್ಥಿಗಳು ಕೂಡ ಪಾಲಿಸಬೇಕು. ಇನ್ನು, ವಿದ್ಯಾರ್ಥಿಗಳು ನೇರ ತರಗತಿಗಳಿಗೂ ಹಾಜರಾಗಬಹುದು. ಆನ್ಲೈನ್ ತರಗತಿಗೂ ಹಾಜರಾಗಬಹದು. ಆ ಆಯ್ಕೆ ವಿದ್ಯಾರ್ಥಿಗಳಿಗೆ ಇರುತ್ತದೆ. ಎರಡರಲ್ಲಿ ಒಂದಕ್ಕೆ ಹಾಜರಾತಿ ಕಡ್ಡಾಯ ಎಂದು ಅವರು ಹೇಳಿದರು. ಆಫ್ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಒಪ್ಪಿಗೆ ಪತ್ರ ತರಬೇಕು. ಈ ಪತ್ರ ತರದಿದ್ದರೆ ನೇರ ತರಗತಿಗಳಿಗೆ ಪ್ರವೇಶ ಇರುವುದಿಲ್ಲ. ಮಾರ್ಗಸೂಚಿಯಂತೆ ಆಫ್ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ನಿಯಮಗಳನ್ನು ಮೀರುವಂತಿಲ್ಲ. ದೈಹಿಕ ಅಂತರ ಕಡ್ಡಾಯ. ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ಧ ಮಾಡಿಕೊಳ್ಳಬೇಕು. ನೇರ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗಬಹುದು. ಎಲ್ಲ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಟ ಒಂದು ತಿಂಗಳ ಕಾಲ ಪ್ರತಿ ತರಗತಿಗೆ ಸಂಬAಧಿಸಿದ ಅಧ್ಯಯನ ಸಾಮಗ್ರಿಯನ್ನು ವಾಟ್ಸಾಪ್, ಇ ಮೇಲ್ ಅಥವಾ ಟೆಲಿಗ್ರಾಂ ಮೂಲಕ ಕಳಿಸಬೇಕು. ಇನ್ನು ಆನ್ಲೈನ್ ಅಥವಾ ಆಫ್ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಆನ್ ಕ್ಯಾಂಪಸ್ ಮತ್ತು ಆಫ್ ಕ್ಯಾಂಪಸ್ ಹಾಸ್ಟೆಲುಗಳಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗಮನಾರ್ಹ ಅಂಶವೆAದರೆ; ಎಲ್ಲ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ ಕೋವಿಡ್-೧೯ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ಆದರೆ, ಕೋವಿಡ್ ಲಕ್ಷಣಗಳು ಇರುವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ.
ಎ.ಸಿ.ಬಿ. ದಾಳಿ: ತಪ್ಪಿಸಿಕೊಳ್ಳಲು ಯತ್ನಿಸಿದ ಪೇದೆಯ ಕಾಲು ಮುರಿತ
ಬೆಂಗಳೂರು, ಜ. ೧೨: ಬಯ್ಯಪ್ಪನ ಹಳ್ಳಿ ಠಾಣೆಯ ಮೇಲೆ ಎಸಿಬಿ ದಾಳಿ ವೇಳೆ ಹಣದ ಸಮೇತ ತಪ್ಪಿಸಿಕೊಳ್ಳಲು ಯತ್ನಿಸಿದ ಪೇದೆ ಕಾಲು ಮುರಿತಗೊಂಡ ಘಟನೆ ನಡೆದಿದೆ. ಕುಮಾರ್ ಎಂಬ ಪೇದೆಯ ಕಾಲು ಮುರಿದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಸಿಬಿ ಅಧಿಕಾರಿ ಪ್ರತಾಪ್ ರೆಡ್ಡಿ ತಂಡದಿAದ ದಾಳಿ ನಡೆಯಿತು. ಮೊಬೈಲ್ ಕಳ್ಳತನ ಕೇಸ್ನಲ್ಲಿ ಆರೋಪಿಗೆ ರೂ. ೨ ಲಕ್ಷಕ್ಕೆ ಪೇದೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಬಯ್ಯಪ್ಪನಹಳ್ಳಿ ಸಬ್ ಇನ್ಸ್ಪೆಕ್ಟರ್ ಸೌಮ್ಯ ಹಾಗೂ ಮುಖ್ಯ ಪೇದೆ ರೆಡ್ಡಿ ಒಂದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಇಂದು ಹಣ ಪಡೆಯುವ ವೇಳೆ ಠಾಣೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಠಾಣೆಯ ಕಟ್ಟಡದ ಮೊದಲ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಪೇದೆ ಯತ್ನಿಸಿದ್ದು, ಈ ವೇಳೆ ಪೇದೆಯ ಕಾಲು ಮುರಿತಗೊಂಡಿದೆ.