ಮಡಿಕೇರಿ, ಜ. ೯: ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕಲ್ಮಾಡಂಡ ಮೋಹನ್ ಮೊಣ್ಣಪ್ಪ (೬೨) ಅವರು ಇಂದು ಸೋಮವಾರಪೇಟೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭ ಹೃದಯಾಘಾತದಿಂದ ವಿಧಿವಶರಾದರು.ಪುರಸಭೆಯ ಮಾಜಿ ಸದಸ್ಯರಾಗಿದ್ದ ಅವರು, ಜಿಲ್ಲಾ ಬಿಜೆಪಿ ಖಜಾಂಚಿಯಾಗಿ, ಜನತಾ ಬಜಾರ್‌ನ ಅಧ್ಯಕ್ಷರಾಗಿ, ಮರ್ಕರ ಕೌಂಟಿ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರಲ್ಲದೆ ವಿಜಯ ವಿನಾಯಕ ದೇವಾಲಯ ಟ್ರಸ್ಟಿಯಾಗಿದ್ದು, ಹಲವಾರು ವರ್ಷಗಳಿಂದ ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ (ಬಾಲಭವನ)ಯ ಅಧ್ಯಕ್ಷರಾಗಿ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. ೧೦ ರಂದು (ಇಂದು) ಮಡಿಕೇರಿ ಕೊಡವ ಸಮಾಜ ರುದ್ರಭೂಮಿಯಲ್ಲಿ ನಡೆಯಲಿದೆ. ಮೋಹನ್ ಮೊಣ್ಣಪ್ಪ ನಿಧನಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸಂತಾಪ ಸೂಚಿಸಿದ್ದಾರೆ.